ಕಾಠ್ಮಂಡು: ನೇಪಾಳದಲ್ಲಿ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ 6.4 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪನದಲ್ಲಿ ಮೃತಪಟ್ಟರ ಸಂಖ್ಯೆ 128ಕ್ಕೆ ಏರಿದೆ. ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ನೇಪಾಳ ಸರ್ಕಾರ ಘೋಷಣೆ ಮಾಡಿದೆ.
ಜಾಜರ್ಕೋಟ್ ಭೂಕಂಪದ ಕೇಂದ್ರ ಬಿಂದು
ನೇಪಾಳದ ಭೂಕಂಪನ ರಾಷ್ಟ್ರೀಯ ಕೇಂದ್ರ (ಎನ್ಸಿಎಸ್)ದ ಪ್ರಕಾರ ಶುಕ್ರವಾರ ರಾತ್ರಿ 11.32 ಕ್ಕೆ 10 ಕಿಮೀ ಆಳದಲ್ಲಿ ಕಂಪನ ಸಂಭವಿಸಿದ್ದು, ನೇಪಾಳದ ಜಾಜರ್ಕೋಟ್ ಜಿಲ್ಲೆಯ ಲಾಮಿದಾಂದಾ ಏರಿಯಾವನ್ನು ಭೂಕಂಪನದ ಕೇಂದ್ರ ಬಿಂದು ಗುರುತಿಸಲಾಗಿದೆ.
500 ಕಿ.ಮೀ ವರೆಗೂ ಕಂಪನ
ಭೀಕರ ದುರಂತ ರಾತ್ರಿಯಂದೇ ಸಂಭವಿಸಿದ್ದು, ಕಗ್ಗತ್ತಲೆಯಲ್ಲಿ ಕುಸಿದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ಹುಡುಕಲು ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ಜನರು ಕಲ್ಲು, ಮಣ್ಣುಗಳನ್ನು ಅಗೆಯುತ್ತಿರುವುದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲಾಗಿದೆ. ಭೂಕಂಪನದ ತೀವ್ರತೆಗೆ ಹಲವಾರು ಮನೆಗಳು ಧರಶಾಹಿಯಾಗಿವೆ. ಭೂಮಿಯ ಕಂಪನವು ಕೇಂದ್ರ ಬಿಂದುವಿನಿಂದ ಸುಮಾರು 500 ಕಿ.ಮೀ ದೂರದಲ್ಲಿರುವ ದೆಹಲಿಯನ್ನು ಸಹ ತಲುಪಿದೆ. ಅಲ್ಲದೆ, ದೆಹಲಿ-ಎನ್ಸಿಆರ್ ವಲಯ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿದೆ. ರಾತ್ರಿ ಮಲಗಿದ್ದ ಮಂದಿ ಭೂಮಿ ನಡುಗಿದ ಸದ್ದು ಕೇಳಿ ಭಯಭೀತರಾಗಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.
ಉಪಮೇಯರ್ ಭೀಕರ ಸಾವು
ಭೂಕಂಪಕ್ಕೆ ಜಾಜರ್ಕೋಟ್ನ ನಲ್ಗೊದ್ ಪುರಸಭೆಯ ಉಪಮೇಯರ್ ಸರಿತಾ ಸಿಂಗ್ ಮೃತಪಟ್ಟಿದ್ದಾರೆ. ಪುರಸಭೆಯ ಪ್ರಧಾನ ಕಚೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಮಲಗಿರುವಾಗ ಸರಿತಾ ಸಿಂಗ್ ಅವರ ಮೇಲೆ ಗೋಡೆ ಕುಸಿದು ದಾರುಣ ಅಂತ್ಯ ಕಂಡಿದ್ದಾರೆ. ಕೆಲಸದ ನಿಮಿತ್ತ ಕಚೇರಿಯಲ್ಲೇ ಉಳಿದುಕೊಂಡಿದಾಗ ಈ ದುರ್ಘಟನೆ ಸಂಭವಿಸಿದೆ. ಕಳೆದ ವರ್ಷವಷ್ಟೇ ನಡೆದ ಸ್ಥಳೀಯ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ನ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ಸಿಂಗ್ ಅವರ ನಿಧನವು ಇಡೀ ಸಮುದಾಯಕ್ಕೆ ತೀವ್ರ ದುಃಖವನ್ನುಂಟು ಮಾಡಿದೆ. ನಾಲಗಡ ಪುರಸಭೆ ವಾರ್ಡ್ ನಂ.2ರ ವಾರ್ಡ್ ಅಧ್ಯಕ್ಷೆ ಪೂರ್ಣಾ ಬಹದ್ದೂರ್ ಖತ್ರಿ ಅವರು ಸರಿತಾ ಸಿಂಗ್ ನಿಧನವನ್ನು ಖಚಿತಪಡಿಸಿದ್ದಾರೆ. ಅಲ್ಲದೆ, ಕರ್ನಲಿ ಪ್ರಾಂತ್ಯದ ಡಿಐಜಿ ಭೀಮ್ ಧಕಲ್ ಸಹ ಮಾಹಿತಿ ನೀಡಿದರು.
ಪ್ರಧಾನಿ ಭೇಟಿ
ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಹೆಲಿಕಾಪ್ಟರ್ ಮೂಲಕ ಭೂಕಂಪ ಪೀಡಿತ ರುಕುಮ್ ಮತ್ತು ಜಜಾರ್ಕೋಟ್ ಭೇಟಿ ನೀಡಲಿದ್ದಾರೆ. ಈಗಾಗಲೇ ವೈದ್ಯಕೀಯ ತಂಡಗಳು ಮತ್ತು ಔಷಧಗಳನ್ನು ಹೊತ್ತು ಹಾರಲು ಮೂರು ಹೆಲಿಕಾಪ್ಟರ್ಗಳನ್ನು ಸಿದ್ಧಪಡಿಸಲಾಗಿದೆ. ಅನುಕೂಲಕರ ವಾತವರಣ ಕಂಡು ಕೂಡಲೇ ಹೆಲಿಕಾಪ್ಟರ್ಗಳನ್ನು ಕಾಠ್ಮಂಡುವಿನಿಂದ ಜಾಜರ್ಕೋಟ್ ತಲುಪಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಸಂತಾಪ
ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅಲಿಯಾಸ್ ಪ್ರಚಂಡ ಅವರು ಭೂಕಂಪನದಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ. ಶುಕ್ರವಾರ ರಾತ್ರಿ 11.47 ಕ್ಕೆ ಜಾಜರಕೋಟ್ನ ರಾಮಿದಂಡಾದಲ್ಲಿ ಸಂಭವಿಸಿದ ಭೂಕಂಪನದಿಂದ ಉಂಟಾದ ಜೀವ ಮತ್ತು ಆಸ್ತಿ ಹಾನಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ತಕ್ಷಣದ ರಕ್ಷಣೆ ಹಾಗೂ ಪರಿಹಾರಕ್ಕಾಗಿ ಎಲ್ಲ 3 ಭದ್ರತಾ ಏಜೆನ್ಸಿಗಳನ್ನು ಸಜ್ಜುಗೊಳಿಸಿದ್ದಾರೆ ಎಂದು ನೇಪಾಳ ಪ್ರಧಾನಿ ಕಚೇರಿ ಎಕ್ಸ್ (ಈ ಹಿಂದೆ ಟ್ವಿಟರ್) ಮೂಲಕ ತಿಳಿಸಿದೆ.
ರಕ್ಷಣಾ ಕಾರ್ಯ
ಅಧಿಕಾರಿಗಳ ಪ್ರಕಾರ ಮೃತರು ಮತ್ತು ಗಾಯಗೊಂಡವರನ್ನು ಅವಶೇಷಗಳಿಂದ ಹೊರತೆಗೆಯಲು ರಾತ್ರಿಯಿಂದಲೇ ಗ್ರಾಮಸ್ಥರೊಂದಿಗೆ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದಾಗ್ಯೂ, ಕಂಪನ ಮತ್ತು ಅದರ ನಂತರದ ಆಘಾತಗಳಿಂದ ಪ್ರಚೋದಿಸಲ್ಪಟ್ಟ ಭೂಕುಸಿತಗಳಿಂದ ಕೆಲವು ಹಾದಿಗಳು ಮುಚ್ಚಿ ಹೋಗಿದ್ದು, ಕೆಲವು ಸ್ಥಳಗಳನ್ನು ತಲುಪುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ಹೇಳಿದರು.
ನೇಪಾಳದಲ್ಲಿ, ಆಂಬ್ಯುಲೆನ್ಸ್ಗಳು ಜನರಿಗೆ ಚಿಕಿತ್ಸೆ ನೀಡಲು ಧಾವಿಸುತ್ತಿರುವ ದೃಶ್ಯಗಳು ಮತ್ತು ಭೂಕಂಪದಿಂದ ಜನರು ಗಾಯಗೊಂಡಿರುವುದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಭೂಕಂಪದ ಕೇಂದ್ರಬಿಂದುವಾಗಿರುವ ಜಾಜರ್ಕೋಟ್ನಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ತಡರಾತ್ರಿಯಲ್ಲಿ ಆಂಬ್ಯುಲೆನ್ಸ್ ಆಗಮಿಸುತ್ತಿರುವುದನ್ನು ವಿಡಿಯೋ ತೋರಿಸಿದೆ. ಭೂಕಂಪದ ಪರಿಣಾಮ ಮನೆಗಳ ಗೋಡೆಗಳು ಬಿರುಕು ಬಿಟ್ಟಿರುವುದನ್ನು ಅನೇಕ ಚಿತ್ರಗಳು ತೋರಿಸಿದ್ದು, ಸಾಕಷ್ಟು ಆಸ್ತಿಪಾಸ್ತಿಗೆ ಹಾನಿಯಾಗಿದೆ. ಭೂಮಿ ನಡುಗಿದ ಪರಿಗೆ ಮನೆಯೊಳಗೆ ಇದ್ದ ಮಂದಿ ಭಯಭೀತರಾಗಿ ಹೊರಗಟೆ ಓಡೋಡಿ ಬಂದು ಕಿರುಚಾಡಿದ್ದು, ಭೂಕಂಪನಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. (ಏಜೆನ್ಸೀಸ್)
ನೇಪಾಳದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 70ಕ್ಕೆ ಏರಿಕೆ, ದೆಹಲಿಯಲ್ಲೂ ಕಂಪಿಸಿದ ಭೂಮಿ
ಕೈಗೆ ನಾನೇ ಸಿಎಂ ಬಿಸಿತುಪ್ಪ!: ಪವರ್ ಶೇರಿಂಗ್ ವಾರ್; ವರಿಷ್ಠರ ಎಚ್ಚರಿಕೆಗೂ ಡೋಂಟ್ಕೇರ್