ವಿಜಯವಾಣಿ ಸುದ್ದಿಜಾಲ ಹೆಬ್ರಿ
ಶಿವಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿ ನಡೆಯುತ್ತಿದ್ದು, ಬೇಕಾಬಿಟ್ಟಿ ಕಾಮಗಾರಿಯಿಂದಾಗಿ ಡಿ.4ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟ ಆರ್ಎಸ್ಎಸ್ ಕಾರ್ಯಕರ್ತ ರಾಹುಲ್ ಮೃತಪಟ್ಟಿದ್ದಾರೆ ಎಂದು ಶಿವಪುರದಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ವಾಹನ ಓಡಾಡಲು ಸೂಕ್ತ ಬ್ಯಾರಿಕೇಡ್, ಸೂಚನಾಫಲಕ ಅಪಘಾತದ ಸ್ಥಳದಲ್ಲಿ ಇರಲಿಲ್ಲ. ಅಪಘಾತ ನಡೆಸಿದ ಕಾರು ವೇಗದಿಂದ ಬಂದು ಬೈಕ್ಗೆ ಗುದ್ದಿದೆ, ಗುತ್ತಿಗೆದಾರರು ಸಂಚಾರ ನಿಯಮ ಉಲ್ಲಂಘಿಸಿರುವುದರಿಂದ ನಮ್ಮ ಮನೆ ಮಗನನ್ನು ನಾವು ಕಳೆದುಕೊಂಡಿದ್ದೇವೆ. ಇದಕ್ಕೆ ಗರಿಷ್ಠ 50 ಲಕ್ಷ ರೂ. ಪರಿಹಾರ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದೆಂದು ಮೃತ ರಾಹುಲ್ ಮಾವ ಶ್ರೀಧರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಶವ ಬರುವಾಗ ಬ್ಯಾರಿಕೇಡ್ ಇಟ್ಟರು
ರಾಹುಲ್ ಅವರ ಶವವನ್ನು ಶಿವಪುರ ಪೇಟೆಯಲ್ಲಿ ಮೆರವಣಿಗೆ ಮಾಡಿಕೊಂಡು ಬರುತ್ತಿರುವಾಗ ಗಮನಿಸಿದ ಗುತ್ತಿಗೆದಾರರು, ಬ್ಯಾರಿಕೇಡ್ ಹಾಕುವ ವ್ಯವಸ್ಥೆ ಮಾಡಿದ್ದು, ಮೊದಲೇ ಈ ರೀತಿಯ ಸೂಚನಾಫಲಕ ಅಥವಾ ಬ್ಯಾರಿಕೇಡ್ ಬಳಸಿದ್ದರೆ ಅಪಘಾತ ತಪ್ಪುತ್ತಿತ್ತು ಎಂದು ಸಾರ್ವಜನಿಕರು ದುಃಖ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಮಾತನಾಡಿ, ಇಲ್ಲಿ ನಿರಂತರವಾಗಿ ಕಾಮಗಾರಿ ನಡೆಯುವಾಗ ನಿಯಮದ ಉಲ್ಲಂಘನೆ ನಡೆದಿದೆ. ಯಾವುದೇ ಸಮರ್ಪಕ ಸೂಚನ ಫಲಕಗಳಿಲ್ಲದೆ ಅನೇಕ ಅಪಘಾತ ನಡೆದಿದೆ. ರೆಫ್ಲೆಕ್ಟರ್ ಅಗತ್ಯವಿದೆ. ಮುಂದೆ ಎಂದಾದರೂ ಅಪಘಾತ ನಡೆದರೆ ಸ್ಥಳದಿಂದ ಶವ ಮುಟ್ಟಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಸ್ಥಳೀಯರಾದ ಶ್ರೀೀನಿವಾಸ್, ಇಂದಿರಾ, ಬಾಬು ಶೆಟ್ಟಿ, ಗುರು ಬಡಿಕಿಲಾಯ, ಶ್ರೀಧರ ಶೆಟ್ಟಿ, ಶೀನ ಊರಿನ ಮುಖಂಡರು ಜತೆಗಿದ್ದರು.
ಆಂಬುಲೆನ್ಸ್ ಸೇವೆ ಇಲ್ಲ
ಅಪಘಾತ ನಡೆದು ಕೆಲವು ಸಮಯ ಕಳೆದರೂ 108 ಆಂಬುಲೆನ್ಸ್ ಸೇವೆಗೆ ಸಿಗದೆ, ಬಹಳಷ್ಟು ಹಿನ್ನಡೆಯಾಯಿತು. ಶೀಘ್ರದಲ್ಲಿ ಆಂಬುಲೆನ್ಸ್ ಸೇವೆ ಒದಗಿದ್ದರೆ ಯುವಕನನ್ನು ಉಳಿಸಿಕೊಳ್ಳಬಹುದಾಗಿತ್ತು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ವಿಜಯವಾಣಿ ವರದಿ ಪ್ರಕಟ
ಇಲ್ಲಿನ ಸಮಸ್ಯೆ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಕಾಮಗಾರಿ ಮಾಡುವಾಗ, ಡಾಂಬರು ಅಳವಡಿಸುವಾಗ ಸಮರ್ಪಕವಾಗಿ ಯೋಜನೆ ರೂಪಿಸದೆ ಕೆಲಸ ಮಾಡುತ್ತಿದ್ದಾರೆ. ಇದು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಲಾಗಿತ್ತು.