More

    ಒಳ್ಳೆಯ ಕಂಟೆಂಟ್ ಇದ್ದರೂ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗಿಲ್ಲ ಉಳಿವು! ಹೀಗಾದರೆ….

    ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಆದ್ಯತೆ ಸಿಗುತ್ತಿಲ್ಲ ಎಂಬ ಮಾತು ಆಗಾಗಾ ಚಂದನವನದಲ್ಲಿ ಗೂಂಜಿಸುತ್ತಲೇ ಇರುತ್ತದೆ. ಆದರೆ, ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಅನೇಕರು ಕಾಯುತ್ತಲೇ ಇದ್ದಾರೆ. ಹೊಸ ನಿರ್ದೇಶಕರು ನಿರ್ಮಾಪಕರು ಹೊಸ ಬಗೆಯ ಸಿನಿಮಾಗಳನ್ನು ಮಾಡಿದರೆ ಜನರು ಕೈ ಹಿಡಿಯುತ್ತಾರೆ ಎಂಬ ಆಸೆಯಿಂದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಎರಡು ವರ್ಷಗಳ ಹಿಂದೆ ʼಕೆಜಿಎಫ್‌ʼ, ʼಕಾಂತಾರʼ ಚಿತ್ರಗಳಂತೆ ಇಡೀ ದೇಶ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂಥ ಸಿನಿಮಾಗಳನ್ನು ನೀಡು ಹಂಬಲ ಒಂದೆಡೆಯಾದರೆ ಇನ್ನೊಂದೆಡೆ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳೇ ಸಿಗದಿರುವ ದುರದೃಷ್ಟ ಇನ್ನೊಂದೆಡೆ.

    ಇದನ್ನೂ ಓದಿ: ಅಂಬಿಕಾ ಟು ಪ್ರಿಯಾ ಭವಾನಿ ಶಂಕರ್​… ಏನಿದು ಫಾರ್ಮ್​ಹೌಸ್​ ರಹಸ್ಯ? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

    ವಾರಕ್ಕೆ ಸರಾಸರಿ 7 ಸಿನಿಮಾಗಳು: ಜನವರಿ ಇಂದ ಇಲ್ಲಿಯವರೆಗೆ 11 ವಾರಗಳಲ್ಲಿ 68 ಸಿನಿಮಾಗಳು ತೆರೆಕಂಡಿವೆ. ಅವುಗಳಲ್ಲಿ ಬಾಕ್ಸಾಫೀಸಿನಲ್ಲಿ ಸದ್ದು ಮಾಡಿದ ಸಿನಿಮಾಗಳು ಚಿಕ್ಕಣ್ಣ ಅಭಿನಯದ ʼಉಪಾಧ್ಯಕ್ಷʼ ಸೇರಿ ಬೆರೆಳೆಣಿಕಯೆಷ್ಟು. ಹಾಗಂತ ಉಳಿದ ಸಿನಿಮಾಗಳು ಚೆನ್ನಾಗಿರಲಿಲ್ಲ ಎಂದರ್ಥವಲ್ಲ. ʼಒಂದು ಸರಳ ಪ್ರೇಮ ಕಥೆʼ, ʼಜೂನಿʼ, ʼಮತ್ಸ್ಯಗಂಧʼ, ʼಶಾಖಾಹಾರಿʼ, ʼಕೆಟಿಎಮ್‌ʼ, ʼಬ್ಲಿಂಕ್‌ʼ ಹೀಗೆ ಹಲವು ಸಿನಿಮಾಗಳು ಜನರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿವೆ. ಆದರೆ, ಚಿತ್ರಮಂದಿರಗಳಲ್ಲಿ ನೆರೆಯೂರಲು ಪರದಾಡಬೇಕಾಯಿತು. ವಾರಕ್ಕೆ ಸರಾಸರಿ 7 ಕನ್ನಡ ಸಿನಿಮಾಗಳು ತೆರೆಕಂಡರೆ ಇನ್ನೊಂದೆಡೆ ಪರಭಾಷಾ ಸಿನಿಮಾಗಳ ಸಂಖ್ಯೆ ಇನ್ನೂ ಜಾಸ್ತಿ. ಪರಭಾಷಾ ಸಿನಿಮಾಗಳ ಜತೆ ಕನ್ನಡ ಸಿನಿಮಾಗಳೂ ಪೈಪೋಟಿಗೆ ನಿಂತಿರುವ ಕಾರಣಕ್ಕೆ ಸಿನಿಮಾಗಳು ಚಿತ್ರಮಂದಿರಕ್ಕಾಗಿ ಹೋರಾಟ ನಡೆಸಬೇಕಿದೆ.

    ಪ್ರಚಾರದ ಅಗತ್ಯತೆ: ಯಾವುದೇ ಸಿನಿಮಾಗೆ ಆದರೂ ‘ವರ್ಡ್‌ ಆಫ್‌ ಮೌತ್‌’ ಕೆಲಸ ಮಾಡಬೇಕೆಂದರೆ ಕನಿಷ್ಠ ಎರಡು ವಾರ ಬೇಕಾಗುತ್ತದೆ. ಆದರೆ, ಅಷ್ಟರೊಳಗೆ ಆ ಸಿನಿಮಾ ಥಿಯೇಟರ್‌ನಿಂದ ಹೊರಹೋಗುವ ಸಂದರ್ಭ ಬಂದರೆ ಏನು ಗತಿ? ಎಂಬ ಸವಾಲು ಏಳುತ್ತದೆ. ಉದಾಹರಣೆಗೆ ʼಜೂನಿʼ. ಚಿತ್ರದ ನಾಯಕ ಪೃಥ್ವಿ ಅಂಬಾರ್‌, ʼಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿತ್ತು. ವರ್ಡ್‌ ಆಫ್‌ ಮೌತ್‌ ಕ್ಲಿಕ್‌ ಆಗುವಷ್ಟರಲ್ಲಿ ಸಿನಿಮಾ ಥಿಯೇಟರ್‌ನಲ್ಲಿ ಇರಲಿಲ್ಲʼ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಯಾವುದೇ ಚಿತ್ರಕ್ಕಾದರೂ ಮೊದಲು ಉತ್ತಮ ಪ್ರಚಾರ ಮುಖ್ಯವಾಗುತ್ತದೆ. ಕಥಾಹಂದರ, ಚಿತ್ರದ ಸಬ್ಜೆಕ್ಟ್‌, ಸ್ಟಾರ್‌ ಕಾಸ್ಟ್‌, ಟ್ರೇಲರ್‌, ಹಾಡುಗಳು, ಎಲ್ಲವೂ ಮುಂಚಿತವಾಗಿ ಪ್ರೇಕ್ಷಕನನ್ನು ತಲುಪಿರಬೇಕು. ಅಷ್ಟೇ ಅಲ್ಲ, ಅವುಗಳಲ್ಲಿ ಸಿನಿಮಾ ನೋಡಬೇಕು ಎನ್ನುವ ಕುತೂಹಲ ಹುಟ್ಟಿಸಬೇಕು. ಆ ಬಳಿಕ ಮಾತ್ರವೇ ಸಿನಿಮಾ ಆಸಕ್ತರನ್ನು ಚಿತ್ರಮಂದಿರಗಳಿಗೆ ಕರೆತರಲು ಸ್ವಲ್ಪ ಮಟ್ಟಿಗಾದರೂ ಸಾಧ್ಯವಾಗಬಹುದು. ಉಳಿದಂತೆ ಚಿತ್ರಮಂದಿರದಲ್ಲಿ ನೀಡುವ ಪ್ರದರ್ಶನದ ಮೇಲೆ ಉಳಿದ ಲೆಕ್ಕಾಚಾರ.

    ಇದನ್ನೂ ಓದಿ: ಬಿಳಿ ನಾಗರಹಾವು ಪತ್ತೆ!; ನಿನ್ನೆ ಕೆಂಪು, ಇವತ್ತು ಬಿಳಿ ಹಾವು..ಬುಸ್​..ಬುಸ್ ನಾಗಪ್ಪ ಏನಪ್ಪಾ ನಿನ್ನ ಲೀಲೆ..

    ಒಟಿಟಿ ಒಲವು:

    ಪ್ರಚಾರ ಚೆನ್ನಾಗಿದೆ. ಸಿನಿಮಾ ನಿರೀಕ್ಷೆ ಮೂಡಿಸಿದೆ. ಆದರೂ ಚಿತ್ರಮಂದಿರಗಳಲ್ಲಿ ಜನ ಕಾಣಿಸುತ್ತಿಲ್ಲ ಎಂಬ ಮಾತೂ ಅಲ್ಲಲ್ಲಿ ಕೇಳಬಹುದು. ಅದಕ್ಕೆ ಇನ್ನೊಂದು ಕಾರಣ ಒಟಿಟಿ ಕಡೆಗಿನ ಒಲವು. ಪ್ರೇಕ್ಷಕ ಎಂದಿಗೂ ಬುದ್ಧಿವಂತ. 200-300 ರೂ. ಖರ್ಚು ಮಾಡಿ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡುವಷ್ಟು ಚೆನ್ನಾಗಿದೆ ಎಂದು ಆವರಿಗೆ ಅನಿಸಿದರೆ ಮಾತ್ರ ಚಿತ್ರಮಂದಿರಕ್ಕೆ ಹೋಗುತ್ತಾರೆ. ಇಲ್ಲದಿದ್ದರೆ ಒಟಿಟಿಗೆ ಹೇಗೂ ಬರುತ್ತದೆ, ಆಗ ನೋಡಿದರಾಯಿತು ಎಂದು ಸುಮ್ಮನಾಗುತ್ತಾರೆ. ಒಟಿಟಿಗಳಲ್ಲಿ ಪ್ರೇಕ್ಷಕರಿಗೆ ಆಯ್ಕೆಗಳು ಜಾಸ್ತಿ ಇವೆ. ತಮಗೆ ಬೇಕಾದ ಜಾನರ್‌ ಚಿತ್ರವನ್ನು, ಬೇಕಾದ ಹೊತ್ತಿನಲ್ಲಿ, ಅನುಕೂಲ ಇದ್ದಾಗ ನೋಡುವ ಅವಕಾಶವಿದೆ. ಆದರೆ, ದುರಂತ ಎಂದರೆ ಒಟಿಟಿ ವೇದಿಕೆಗಳು ಎಲ್ಲ ಕನ್ನಡ ಚಿತ್ರಗಳನ್ನು ಸ್ವೀಕರಿಸುವುದಿಲ್ಲ. ಒಟಿಟಿಗೆ ಹೋಗುವ ಮುನ್ನ ಥಿಯೇಟರ್‌ಗಳಲ್ಲಿ ಕನಿಷ್ಠ ಇಷ್ಟು ದಿನ ಓಡಿರಬೇಕು ಎಂಬ ಕಂಡೀಷನ್‌ ಕೂಡ ಇರುತ್ತದೆ. ಇವೆಲ್ಲದರ ಜತೆಗೆ ಕೆಲವು ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡಿದರೆ ಆಗುವ ಅನುಭವವೇ ಬೇರೆ! ಅಲ್ಲಿನ ಸೌಂಡ್ ಎಫೆಕ್ಟ್ಸ್, ದೊಡ್ಡ ಪರದೆಯಲ್ಲಿ ಕಾಣುವ ಸೂಕ್ಷ್ಮ ಅಂಶಗಳು ಮೊಬೈಲ್ನಲ್ಲಿ ಸಿಗುವುದಿಲ್ಲ. ಇದರೊಂದಿಗೆ ಥಿಯೇಟರ್​ನಲ್ಲಿ ಸಿನಿಮಾ ನೋಡುವ ಅನುಭವಕ್ಕೆ ಒಟಿಟಿ ಸರಿಸಾಟಿಯಲ್ಲ.

    ಕನ್ನಡ ಸಿನಿಮಾಗಳಿಗೆ ಯಾಕೀ ಅನ್ಯಾಯ?

    2024ರ ಜನವರಿಯಿಂದ ಇಲ್ಲಿಯವರೆಗೆ ಕನಿಷ್ಠ 68 ಕನ್ನಡ ಸಿನಿಮಾಗಳು ತೆರೆಕಂಡಿವೆ. ಆದರೆ ಅವುಗಳಲ್ಲಿ ಎಷ್ಟು ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ? ಎಷ್ಟು ಚಿತ್ರಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆದರೂ ನಮ್ಮ ಗಮನಕ್ಕೆ ಬಾರದೆ ಕಣ್ಮರೆಯಾಗಿವೆ ಎಂಬುದನ್ನು ಒಮ್ಮೆ ಗಮನಿಸಿ. ಪರಭಾಷೆಯ ಚಿತ್ರಗಳು ನಮ್ಮಲ್ಲಿ ಬಿಡುಗಡೆ ಕಾಣುವುದರ ಬಗ್ಗೆ ಇಲ್ಲಿ ಯಾವುದೇ ಬೇಸರ ಅಥವಾ ವಿರೋಧವಿಲ್ಲ. ಆದ್ರೆ, ನಮ್ಮ ಕನ್ನಡ ಸಿನಿಮಾಗಳಿಗೆ ಸಿಗಬೇಕಾದ ಆದ್ಯತೆ ಬೇರೆ ಸಿನಿಮಾಗಳಿಗೆ ಯಾಕೆ ಎಂಬುದಷ್ಟೇ ಪ್ರಶ್ನೆ!

    ಇದನ್ನೂ ಓದಿ: ಬಿಜೆಪಿಯೊಂದಿಗಿನ ಮೈತ್ರಿ ಜೆಡಿಎಸ್‌ಗೆ ದುಬಾರಿ: ಕಾರಣ ವಿವರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ…!

    ‘ಶಾಖಾಹಾರಿ’, ‘ಬ್ಲಿಂಕ್‌’ ಪರದಾಟ!
    ಕನ್ನಡದಲ್ಲಿ ತೆರೆಕಂಡ ಅದೆಷ್ಟೋ ಸಿನಿಮಾಗಳು ಹೆಸರೂ ನೆನಪುಳಿಯದಂತೆ ಬಂದು ಹೋಗಿವೆ. ಆದರೆ, ಇತ್ತೀಚೆಗೆ ತೆರೆಕಂಡ ಎರಡು ಸಿನಿಮಾಗಳು ಸದ್ದು ಮಾಡಿವೆ. ಒಂದು ‘ಶಾಖಾಹಾರಿ’, ಇನ್ನೊಂದು ‘ಬ್ಲಿಂಕ್’.‌ ಸಂದೀಪ್ ಸುಂಕದ್ ನಿರ್ದೇಶನದ, ರಂಗಾಯಣ ರಘು ನಟನೆಯ ಶಾಖಾಹಾರಿ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆಗಳು ಲಭಿಸಿತು. ಆದರೆ, ಚಿತ್ರಮಂದಿರಗಳಲ್ಲಿ ಸಿನಿಮಾ ಉಳಿಸಿಕೊಳ್ಳಲು ಪರದಾಡವಂತಾಯಿತು. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ಸಿನಿಮಾ ರಿಲೀಸ್‌ ಆಗಿದೆ, ಥಿಯೇಟರ್‌ಗೆ ಬಂದು ನೋಡಿ ಎಂದು ಸತತ ಪ್ರಚಾರ ಮಾಡಿದರೂ ಜನಕ್ಕೆ ಅನುಕೂಲವಾಗುವ ಶೋಗಳು ಚಿತ್ರಮಂದಿರಗಳಲ್ಲಿ ಇರದಿದ್ದರೆ ಹೇಗೆ ತಾನೆ ಜನರನ್ನು ನಿರೀಕ್ಷಿಸಬಹುದು? ಅದೇ ರೀತಿ ದೀಕ್ಷಿತ್‌ ಶೆಟ್ಟಿ ಅಭಿನಯದ, ಶ್ರೀನಿಧಿ ಬೆಂಗಳೂರು ನಿರ್ದೇಶನದ ಸೈನ್ಸ್‌ ಫಿಕ್ಷನ್‌ ಸಿನಿಮಾ ʼಬ್ಲಿಂಕ್‌ʼ. ಈ ಚಿತ್ರವನ್ನೂ ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡ ಸಕ್ರಿಯವಾಗಿ ಪ್ರಚಾರ ಮಾಡಿತು.

    ಮೊದಲ ವಾರದಿಂದ ಎರಡನೇ ವಾರಕ್ಕೆ 8 ಶೋಗಳಿಂದ 28ಕ್ಕೆ ಏರಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಂಡ ಚಿತ್ರತಂಡಗಳು ಇವೆರಡು. ಆದರೆ, ಪ್ರಚಾರ ಮಾತ್ರ ಕೆಲಸ ಮಾಡಿದ್ದಲ್ಲ. ಚಿತ್ರದಲ್ಲಿರುವ ಕಂಟೆಂಟ್‌ ಹಾಗೂ ಮೇಕಿಂಗ್‌ ಕೂಡ ಸಾಥ್‌ ನೀಡಿದ್ದಕ್ಕೆ ಮಾತ್ರವೇ ಜನರಿಂದ ಮೆಚ್ಚುಗೆ ಪಡೆದುಕೊಳ್ಳಲು ಸಾಧ್ಯವಾಯಿತು. ಸೀಮಿತ ಬೆಜೆಟ್‌ನಲ್ಲಿ ಉತ್ತಮ ಕಂಟೆಂಟ್‌ ಹಾಗೂ ಕ್ವಾಲಿಟಿ ಚಿತ್ರವನ್ನು ಮಾಡುವುದರ ಜತೆಗೆ ಜನರನ್ನು ಚಿತ್ರಮಂದಿರಗಳಿಗೆ ಕರೆತರಲು ಸಮರ್ಪಕವಾದ ಪ್ರಚಾರ ಕೂಡ ಮುಖ್ಯವಾಗುತ್ತದೆ. ಥಿಯೇಟರ್‌ನಲ್ಲಿ ಸಿನಿಮಾ ಉಳಿಸಿಕೊಳ್ಳುವುದು ದೊಡ್ಡ ಸವಾಲು ಎಂಬಂತಾಗಿರುವುದಂತೂ ಹೌದು.

    ಇದನ್ನೂ ಓದಿ: ಜಪಾನ್​ನಲ್ಲಿ ಭೂಕಂಪ.. 28ನೇ ಮಹಡಿಯಲ್ಲಿ ರಾಜಮೌಳಿ ಕುಟುಂಬ!

    ಈ ಥಿಯೇಟರ್ ಸಮಸ್ಯೆ ಇವತ್ತು ನೆನ್ನೆಯ ತೊಂದರೆಯಲ್ಲ. ಕನ್ನಡ ಚಿತ್ರರಂಗಕ್ಕೆ ಹಲವಾರು ವರ್ಷಗಳಿಂದ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ನಮ್ಮ ನೆರೆಯ ರಾಜ್ಯಗಳಲ್ಲಿ ಸ್ಥಳೀಯ ಚಿತ್ರಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಅದಕ್ಕೆ ಪ್ರೇಕ್ಷಕರು ಕೂಡ ಸ್ಪಂದಿಸುತ್ತಾರೆ. ಆದರೆ ನಮ್ಮಲ್ಲಿ ಇದು ಉಲ್ಟಾ. ಮೊದಲು ಅನ್ಯ ಭಾಷೆಯ ಸಿನಿಮಾಗೆ ಚಿತ್ರಮಂದಿರವನ್ನು ನೀಡುತ್ತಾರೆ. ಅದು ಹೆಚ್ಚು ಸದ್ದು ಮಾಡುತ್ತಿಲ್ಲವೆಂದರೆ ಮಾತ್ರ ಕನ್ನಡ ಚಿತ್ರಕ್ಕೆ ಸ್ಥಳ ಮಾಡಿಕೊಡುತ್ತಾರೆ.

    ನಮ್ಮ ಚಿತ್ರ ಕಮರ್ಷಿಯಲ್ ಆಗಿ ಸದ್ದು ಮಾಡುತ್ತಿದ್ದರೆ ಮಾತ್ರ. ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಬೇಕು ಆಗ ಚಿತ್ರರಂಗಕ್ಕೆ ಲಾಭವಾಗುತ್ತದೆ ಆದರೆ ಎಲ್ಲವನ್ನೂ ಹಣದಿಂದ ಅಳೆದರೆ ವಿಭಿನ್ನ ಪ್ರಯತ್ನಗಳಿಗೆ ಜಾಗವಿರುವುದಿಲ್ಲ. ಹಾಗಾಗಿ ಒಂದು ನಿಯಮಬದ್ಧವಾದ ವ್ಯವಸ್ಥೆಯ ಅಗತ್ಯವಿದೆ. ಪರಭಾಷೆ ಸಿನಿಮಾಗಳು ಬರಲಿ ಒಳ್ಳೆಯ ಯಶಸ್ಸೂ ಸಿಗಲಿ. ಆದರೆ ಪ್ರೇಕ್ಷಕರು ಮತ್ತು ಉದ್ಯಮದವರು ನಮ್ಮ ಕನ್ನಡ ಚಿತ್ರಗಳನ್ನು ಮೊದಲು ಪರಿಗಣಿಸಿದಾಗ ಮಾತ್ರ ಕಲೆ ಬೆಳೆಯುತ್ತದೆ ಮತ್ತು ಉಳಿಯುತ್ತದೆ.

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts