ಲಖನೌ: ಕುಖ್ಯಾತ ರೌಡಿ ವಿಕಾಸ್ ದುಬೆ ಎನ್ಕೌಂಟರ್ ಪ್ರಕರಣ ಇದೀಗ ಹೊಸ ತಿರುವನ್ನು ಪಡೆದುಕೊಂಡಿದೆ. 65ಕ್ಕೂ ಅಧಿಕ ಕುಕೃತ್ಯಗಳಲ್ಲಿ ಭಾಗಿಯಾಗಿದ್ದ ದುಬೆ ಎಲ್ಲ ಅಪರಾಧಗಳ ಕುರಿತು ತನ್ನ ಹೆಂಡತಿ ರಿಚಾಳಿಗೆ ಹೇಳುತ್ತಿದ್ದ ಎಂದೇ ವರದಿಯಾಗಿತ್ತು, ಅಷ್ಟೇ ಅಲ್ಲದೇ, ಈತನ ಹೆಚ್ಚಿನ ಅಪರಾಧ ಕೃತ್ಯಗಳ ಹಿಂದೆ ಆಕೆಯ ಕೈವಾಡವೂ ಇದೆ ಎನ್ನಲಾಗುತ್ತಿತ್ತು.
ಆದರೆ ಇದೀಗ ರಿಚಾ, ಇದೀಗ ಕುತೂಹಲ ಎನ್ನುವಂಥ ಹೇಳಿಕೆ ನೀಡಿದ್ದಾರೆ. ಎಂಟು ಮಂದಿ ಅಮಾಯಕ ಪೊಲೀಸರ ಹತ್ಯೆ ಮಾಡಿದ್ದ ನನ್ನ ಗಂಡನನ್ನು ಒಂದು ವೇಳೆ ಎನ್ಕೌಂಟರ್ನಲ್ಲಿ ಪೊಲೀಸರು ಸಾಯಿಸದೇ ಹೋಗಿದ್ದರೆ ನಾನೇ ಆತನನ್ನು ಶೂಟ್ ಮಾಡಿ ಕೊಲ್ಲುತ್ತಿದ್ದೆ ಎಂದಿದ್ದಾರೆ!
ಜುಲೈ 2ರ ರಾತ್ರಿ ಪೊಲೀಸರ ತಂಡ ವಿಕಾಸ್ ದುಬೆಯನ್ನು ಬಂಧಿಸುಲು ಸಲುವಾಗಿ ಬಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವೇಳೆ ಪೊಲೀಸರ ಮೇಲೆ ದುಬೆ ಮತ್ತು ಅವನ ಸಹಚರರು ಗುಂಡಿನ ಮಳೆ ಸುರಿಸಿದ್ದರು. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ 4 ಪೊಲೀಸರು ಮೃತಪಟ್ಟಿದ್ದರು. ನಂತರ ದುಬೆ ಎನ್ಕೌಂಟರ್ನಲ್ಲಿ ಸತ್ತ.
ಪತಿಯ ಸಾವಿನ ನಂತರ ಮೊದಲ ಬಾರಿ ಮಾಧ್ಯಮಗಳ ಎದುರು ಮಾತನಾಡಿರುವ ರಿಚಾ ದುಬೆ, ನನ್ನ ಗಂಡ ಮಾಡಿರುವ ಕೃತ್ಯಕ್ಕೆ ಎಂದಿಗೂ ಕ್ಷಮೆಯೇ ಇಲ್ಲ. ಎಂಟು ಮಂದಿ ಪೊಲೀಸರ ಕುಟುಂಬವನ್ನು ಆತ ನಾಶ ಮಾಡಿದ್ದಾನೆ. ಅವನೇನೋ ಸತ್ತುಹೋದ. ಆದರೆ ನಮಗೆ ಸಮಾಜದ ಮುಂದೆ ಮುಖ ತೋರಿಸದ ರೀತಿ ಮಾಡಿ ಹೋಗಿದ್ದಾನೆ. ಪೊಲೀಸರ ಹತ್ಯೆಯ ನಂತರ ಒಂದು ವೇಳೆ ಅವನೇನಾದರೂ ಬದುಕಿದ್ದರೆ ನಾನೇ ಆತನನ್ನು ಶೂಟ್ ಮಾಡಿ ಕೊಂದು ಬೇಡಬೇಕು ಎಂದುಕೊಂಡಿದ್ದೆ’ ಎಂದಿದ್ದಾರೆ.
ಇದನ್ನೂ ಓದಿ: ದುಬೆ ಎನ್ಕೌಂಟರ್ ತನಿಖೆಗೆ ಜಡ್ಜ್ ನೇಮಕ: ಹಲವು ಸರ್ಕಾರಗಳು ಸಂಕಷ್ಟದಲ್ಲಿ!
ಜುಲೈ 2ರ ಕರಾಳ ರಾತ್ರಿಯನ್ನು ನೆನಪಿಸಿಕೊಂಡಿರುವ ರಿಚಾ, ’ಮಧ್ಯರಾತ್ರಿ ಸುಮಾರು 2 ಗಂಟೆಗೆ ನನಗೆ ಫೋನ್ ಮಾಡಿದ ದುಬೆ ನೀನು ಮನೆ ಬಿಟ್ಟು ಮಕ್ಕಳ ಜತೆ ಎಲ್ಲಿಯಾದರೂ ಓಡಿಹೋಗು. ಪೊಲೀಸರು ಅಟ್ಯಾಕ್ ಮಾಡಲು ಬರುತ್ತಿದ್ದಾರೆ ಎಂದು ಕರೆ ಮಾಡಿ ಹೇದಿದ್ದ. ನನಗೂ ಇಂಥ ಪ್ರಕರಣಗಳಿಂದ ಸಾಕುಸಾಕಾಗಿ ಹೋಗಿತ್ತು. ನನ್ನಿಂದ ಇವೆಲ್ಲಾ ಮತ್ತೆ ಸಾಧ್ಯವಿಲ್ಲ ಎಂದಿದ್ದೆ. ನನಗೆ ಬೈದು ಕರೆಯನ್ನು ಕಟ್ ಮಾಡಿದ’ ಎಂದಿದ್ದಾರೆ.
ನನ್ನ ಗಂಡ ಮಾಡುತ್ತಿದ್ದ ವ್ಯವಹಾರದ ಬಗ್ಗೆ ನನಗೆ ಗೊತ್ತೇ ಇಲ್ಲ. ಅವನು ಏನು ಮಾಡುತ್ತಿಲ್ಲ ಎನ್ನುವುದು ತಿಳಿದಿಲ್ಲ. ನಾನು ತವರಿನಲ್ಲಿಯೇ ಇರುತ್ತದೆ. ಆತ ಹೇಳಿದಾಗ ಮಾತ್ರ ನಾನು ಮಕ್ಕಳನ್ನು ಕರೆದುಕೊಂಡು ಬಿಕ್ರು ಗ್ರಾಮಕ್ಕೆ ಹೋಗುತ್ತಿದ್ದೆ. ಘಟನೆ ನಡೆದ ನಂತರ ಈಗಲೋ ಆಗಲೋ ಬೀಳುವಂತಿದ್ದ ಕಟ್ಟದ ಒಳಗೆ ಮಕ್ಕಳನ್ನು ಕಟ್ಟಿಕೊಂಡು ಜೀವನ ಮಾಡಿದ್ದೇನೆ. ಆ ನೋವು ನಗೆ ಮಾತ್ರ ಗೊತ್ತು’ ಎಂದಿದ್ದಾರೆ.
ತನ್ನ ಗಂಡನಿಗಿದ್ದ ಕಾಯಿಲೆ ಕುರಿತು ಮಾತನಾಡಿರುವ ರಿಚಾ, ಕೆಲ ವರ್ಷಗಳ ಹಿಂದೆ ನನ್ನ ಗಂಡ ಹೋಗುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಆತನಿಗೆ ತಲೆಗೆ ಪೆಟ್ಟಾಗಿ ಮೆದುಳಿನಲ್ಲಿ ಗಾಳಿ ಗುಳ್ಳೆಗಳು ಆಗಿದ್ದವು. ಇದರಿಂದ ಆತನಿಗೆ ತನ್ನ ಕೋಪವನ್ನು ನಿಯಂತ್ರಣ ಮಾಡಲು ಆಗುತ್ತಿರಲಿಲ್ಲ. ಕಳೆದ ಮೂರು ನಾಲ್ಕು ತಿಂಗಳಿನಿಂದ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದ್ದ’ ಎಂದಿದ್ದಾರೆ.
ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಜುಲೈ 10ರಂದು ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್ಕೌಂಟರ್ ಮಾಡಿದ್ದರು.
ಜನಿವಾರ ತೋರಿಸಿ ದುಬೆಯಿಂದ ಬಚಾವಾದೆ: ರೋಚಕ ಮಾಹಿತಿ ಬಿಚ್ಚಿಟ್ಟ ದೂರುದಾರ ತಿವಾರಿ!