ವಿಜಯಪುರ: ಹುನಗುಂದ ಶಾಸಕ ವಿಜಯಯಾನಂದ ಕಾಶಪ್ಪನವರ ಪತ್ನಿ, ಕಾಂಗ್ರೆಸ್ ನಾಯಕಿಯಾದ ವೀಣಾ ಕಾಶಪ್ಪನವರ ತೆರಳುತ್ತಿದ್ದ ಕಾರು ಅಪಘಾತಗೊಂಡಿದ್ದು, ಘಟನೆಯಲ್ಲಿ ವೀಣಾ ಅವರ ಕೈ ಮತ್ತು ಎದೆ ಭಾಗಕ್ಕೆ ಪೆಟ್ಟು ಬಿದ್ದಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಇದೀಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕ ಏಕೀಕರಣಕ್ಕಾಗಿ ದುಡಿದ ನಿಸ್ವಾರ್ಥ ರಾಜಕಾರಣಿ ಅಂದಾನಪ್ಪ ದೊಡ್ಡಮೇಟಿ
ವಿಜಯಪುರ ಜಿಲ್ಲೆಯ ಹೊರವಲಯದಲ್ಲಿ ಅಪಘಾತ ಸಂಭವಿಸಿದ್ದು, ಕಲಬುರಗಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಘಟನೆ ವರದಿಯಾಗಿದೆ. ಆಕ್ಸಿಡೆಂಟ್ನಲ್ಲಿ ವೀಣಾ ಅವರ ಕೈ ಹಾಗೂ ಎದೆ ಭಾಗಕ್ಕೆ ಗಾಯವಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ವಿಜಯಪುರದಿಂದ ಸಿಂದಗಿಯತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ವೀಣಾ ಕಾಶಪ್ಪನವರ ಕಾರಿಗೆ ಎದುರಾಗಿ ಬಂದ ಸ್ಕೂಟಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ವೇಳೆ ಅದೇ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಸದ್ಯ ಈ ಪ್ರಕರಣ ವಿಜಯಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.