ವಿಜಯವಾಣಿ ಸುದ್ದಿಜಾಲ ಬೈಂದೂರು
ಉಪ್ಪುಂದದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಮನ್ಮಹಾರಥೋತ್ಸವ ಉಪ್ಪುಂದ ಕೊಡಿಹಬ್ಬ ಶನಿವಾರ ಸಡಗರ ಸಂಭ್ರಮದಿಂದ ಜರುಗಿತು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಎಸ್. ಅವರ ಉಸ್ತುವಾರಿ ಹಾಗೂ ತಂತ್ರಿ ಶ್ರೀನಿವಾಸ ಅಡಿಗ ಮಾರ್ಗದರ್ಶನದಲ್ಲಿ ಉಪ್ಪುಂದ ದೇವಳ ಪ್ರಧಾನ ಅರ್ಚಕ ಪ್ರಕಾಶ ಉಡುಪ ನೇತೃತ್ವದ ವೈದಿಕ ತಂಡದವರಿಂದ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಭೂತಬಲಿ, ರಥ ಶುದ್ಧಿಹೋಮ, ರಥಬಲಿ, ರಥಾರೋಹಣ ಸೇರಿ ಹಲವು ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮಧ್ಯಾಹ್ನ ದೇವಳ ಸಭಾಭವನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ ಖಾರ್ವಿ, ರಾಮ ಎಸ್., ಲಲಿತಾ ಅರುಣ್ಕುಮಾರ್ ಶೆಟ್ಟಿ, ಅಂಬಿಕಾ ದೇವಾಡಿಗ, ರಾಜೇಶ ದೇವಾಡಿಗ, ಯು.ರವೀಂದ್ರ ಪ್ರಭು, ಜನಾರ್ದನ ಮಾಚ ಪೂಜಾರಿ, ಸ್ಥಳೀಯ ಜನಪ್ರತಿನಿಧಿಗಳು ಇದ್ದರು.
ಅಪೂರ್ವ ವಿದ್ಯಮಾನ
ಕರಾವಳಿಯ ಅತಿದೊಡ್ಡ ಜಾತ್ರೆ ಕೋಟೇಶ್ವರದ ಕೊಡಿಹಬ್ಬ ಮತ್ತು ಉಪ್ಪುಂದ ಕೊಡಿಹಬ್ಬ ಈ ಬಾರಿ ಹಿಂದೆ ಮುಂದೆ ಆಗಿದೆ. ಕೋಟೇಶ್ವರ ಕೊಡಿಹಬ್ಬ ಮರುದಿನವೇ ಉಪ್ಪುಂದ ಕೊಡಿಹಬ್ಬ ನಡೆಯುವುದು ವಾಡಿಕೆ. ಆದರೆ ಈ ಬಾರಿ ಉಪ್ಪುಂದ ಕೊಡಿಹಬ್ಬ ಮೊದಲಿಗೆ ಬಂದಿದ್ದು, ತಿಂಗಳ ಬಳಿಕ ಕೋಟೇಶ್ವರ ಕೊಡಿಹಬ್ಬ ನಡೆಯಲಿದೆ. 35 ವರ್ಷಗಳಿಗೊಮ್ಮೆ ಈ ರೀತಿ ಅಪೂರ್ವ ವಿದ್ಯಮಾನ ಘಟಿಸುತ್ತದೆ ಎಂದು ಹಿರಿಯ ಅರ್ಚಕರು ತಿಳಿಸಿದ್ದಾರೆ.
ಕುಡಿ ಅರಳಿಸುವ ಹಬ್ಬ
ಉಪ್ಪುಂದ ಕೊಡಿಹಬ್ಬ ಕುಡಿ ಅರಳಿಸುವ ಹಬ್ಬ ಎಂದೇ ಖ್ಯಾತಿ. ಈ ಜಾತ್ರೆಯಲ್ಲಿ ಅಸಂಖ್ಯ ಭಕ್ತರು ದೇವರ ಪ್ರೀತ್ಯರ್ಥ ಕಬ್ಬು ಖರೀದಿಸಿ ಮನೆಗೆ ಕೊಂಡೊಯ್ಯುವ ಪದ್ಧತಿ ನಡೆದುಕೊಂಡು ಬಂದಿದೆ. ಜಾತ್ರೆಗೆ ಹೋಗುವವರು ಕಬ್ಬು (ಕೊಡಿ) ತರುವುದು ಶುಭ. ಅದರಲ್ಲಿ ನವದಂಪತಿಗಳು ಕೊಡಿ ತರುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ.
ಸೋಮವಾರ ಧ್ವಜಾವರೋಹಣ
ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ನ.11ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವ ಪ್ರಯುಕ್ತ ದೇವಳದ ಮನವಿ ಮೇರೆಗೆ ಊರಿನ ಹತ್ತು ಸಮಸ್ತರು, ಭಕ್ತರು ಸೇರಿ ತಮ್ಮ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ ಹಾಗೂ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್.ಮತ್ತು ನವೀನ್ ಬೋರ್ಕರ್ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಭಾನುವಾರ ರಾತ್ರಿ ದೇವರ ಅವಭೃತಸ್ನಾನ ನಡೆಯಲಿದ್ದು, ಸೋಮವಾರ ಧ್ವಜಾವರೋಹಣದ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.