ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಉಡುಪಿ ಜಿಲ್ಲೆಯ ಎರಡನೇ ಬೃಹತ್ ಮೀನುಗಾರಿಕಾ ಬಂದರಾಗಿರುವ ಗಂಗೊಳ್ಳಿ, ಕರಾವಳಿ ಜಿಲ್ಲೆಗಳ ಪೈಕಿ ಹೆಚ್ಚು ನಿರ್ಲಕ್ಷೃಕ್ಕೆ ಒಳಗಾದ ಬಂದರು ಕೂಡ ಹೌದು. ಬಂದರು ಅಭಿವೃದ್ಧಿಯ ಕೂಗು ಕೇಳಿ ಬರುತ್ತಿದ್ದರೂ, ಇಲ್ಲಿ ನಡೆದ ಕಳಪೆ ಕಾಮಗಾರಿಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಮೊದಲ ಹಂತದ ಕಾಮಗಾರಿ ಮುಗಿದು ಸುಮಾರು 17 ವರ್ಷಗಳಾಗಿದ್ದು, ಸುಮಾರು 12 ಕೋಟಿ ರೂ.ಗಳ ಜೆಟ್ಟಿ ಪುನಃ ನಿರ್ಮಾಣ ಕಾಮಗಾರಿ ಬಿಟ್ಟರೆ ಯಾವುದೇ ದೊಡ್ಡಮಟ್ಟದ ಕಾಮಗಾರಿ ನಡೆದಿಲ್ಲ. ಜೆಟ್ಟಿ ಪುನಃ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷ ಕಳೆದಿದೆ. ಮೀನುಗಾರಿಕಾ ಋತು ಅಂತ್ಯಗೊಳ್ಳುವ ಸಮಯದಲ್ಲಿ ಇದ್ದ ಸಮಸ್ಯೆ ಮೀನುಗಾರಿಕಾ ಋತು ಆರಂಭದ ಸಮಯದಲ್ಲೂ ಇದೆ. ಹೀಗಾಗಿ ಮೀನುಗಾರರು ಪ್ರತಿ ವರ್ಷ ಸಮಸ್ಯೆಗಳ ನಡುವೆ ಕಡಲಿಗಿಳಿಯಬೇಕಾದ ಪರಿಸ್ಥಿತಿ ಇದೆ.
ಜೆಟ್ಟಿ ಪುನಃ ನಿರ್ಮಾಣ
ಮೀನುಗಾರಿಕಾ ಬಂದರಿನ ಜೆಟ್ಟಿ ಪುನಃ ನಿರ್ಮಾಣ ಕಾರ್ಯ ಆರಂಭವಾಗಿದ್ದರೂ, ಹಳೇ ಜೆಟ್ಟಿಯ ಡಯಾಪ್ರಾಮ್ ವಾಲ್ ಕುಸಿದು ಬಿದ್ದ ಪರಿಣಾಮ ಜೆಟ್ಟಿ ಪುನಃ ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯಾಗಿದೆ. ಕಳಪೆ ಕಾಮಗಾರಿ ಆರೋಪದ ಹಿನ್ನಲೆಯಲ್ಲಿ ಸುಮಾರು 150 ಮೀಟರ್ ಜೆಟ್ಟಿ ಪುನಃ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.
ಅಳಿವೆ ಪ್ರದೇಶದಲ್ಲಿ ಹೂಳು
ಸುಮಾರು 400 ಮೀಟರ್ ಉದ್ದದ ಮೀನುಗಾರಿಕಾ ಜೆಟ್ಟಿ ಪ್ರದೇಶದಲ್ಲಿ ಹಾಗೂ ಹಳೇ ಜೆಟ್ಟಿ ಪ್ರದೇಶದಲ್ಲಿ ಮತ್ತು ಅಳಿವೆ ಪ್ರದೇಶದಲ್ಲಿ ಹೂಳು ತುಂಬಿಕೊಂಡಿದೆ. ಅಳಿವೆಯಲ್ಲಿ ಅವೈಜ್ಞಾನಿಕ ಹೂಳೆತ್ತುವ ಕಾಮಗಾರಿಯಿಂದ ಬೋಟ್ಗಳು ಗಂಗೊಳ್ಳಿ ಬಂದರು ಪ್ರವೇಶಕ್ಕೆ ತೊಂದರೆಯಾಗುತ್ತಿದ್ದರೆ, ಜೆಟ್ಟಿ ಪ್ರದೇಶದಲ್ಲಿ ಬೋಟ್ ಮತ್ತು ದೋಣಿಗಳ ನಿಲುಗಡೆಗೆ ಕಷ್ಟವಾಗುತ್ತಿದೆ.
ಶೌಚಗೃಹಗಳಿಲ್ಲ
ಪ್ರತಿ ವರ್ಷ ಕೋಟ್ಯಾಂತರ ರೂ. ವ್ಯವಹಾರ ನಡೆಸುತ್ತಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಶೌಚಗೃಹದ ವ್ಯವಸ್ಥೆಯಿಲ್ಲ. ಸುಸಜ್ಜಿತ ಶೌಚಗೃಹಕ್ಕೆ ಆಗ್ರಹವಿದ್ದರೂ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಂಡಿಲ್ಲ.
ವಿಶ್ರಾಂತಿ ಗೃಹಗಳಿಲ್ಲ
ಪ್ರತಿನಿತ್ಯ ಗಂಗೊಳ್ಳಿ ಬಂದರಿಗೆ ಆಗಮಿಸುತ್ತಿರುವ ಮೀನುಗಾರ ಮಹಿಳೆಯರಿಗೆ ತಂಗಲು ಬಂದರಿನಲ್ಲಿ ಯಾವುದೇ ವಿಶ್ರಾಂತಿ ಗೃಹಗಳಿಲ್ಲ. ಮೀನುಗಾರ ಮಹಿಳೆಯರು ಹರಾಜು ಪ್ರಾಂಗಣ ಅಥವಾ ಸಣ್ಣಪುಟ್ಟ ಶೆಡ್ಗಳಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
ಸೂಕ್ತ ಭದ್ರತೆ ಇಲ್ಲ
ಬಂದರಿನಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಕಲ್ಪಿಸಿಲ್ಲ. ಬಂದರು ಪ್ರದೇಶದ ಸುತ್ತಲೂ ಗೋಡೆ ನಿರ್ಮಿಸಿಲ್ಲ. ವಠಾರದಲ್ಲಿ ಸ್ಥಳೀಯ ಮೀನುಗಾರಿಕೆ ಸಂಘದವರು ಸಿಸಿ ಕ್ಯಾಮರಾ ಅಳವಡಿಸಿದ್ದರೂ, ಇಲಾಖೆ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸಿಲ್ಲ. ವಾಚ್ಮನ್ ನೇಮಕವೂ ಆಗಿಲ್ಲ.
ಕುಡಿಯಲು ನೀರಿಲ್ಲ
ಐದು ನದಿಗಳ ಸಂಗಮ ತಾಣವಾಗಿರುವ ಗಂಗೊಳ್ಳಿಯಲ್ಲಿ ಕುಡಿಯುವ ನೀರಿಗೆ ಬರ ಇಲ್ಲದಿದ್ದರೂ, ಮೀನುಗಾರಿಕಾ ಬಂದರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಮೀನುಗಾರರು ಬಾಟಲಿ ನೀರನ್ನು ಬಳಸಬೇಕಾಗಿದೆ.
ಈ ಎಲ್ಲ ಬೇಡಿಕೆಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದರೂ, ಸರ್ಕಾರ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಬೇಡಿಕೆಗಳಿಗೆ ಅಸ್ತು ಎನ್ನುತ್ತಿಲ್ಲ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷೃ ತಾಳಿದರೆ ಮೀನುಗಾರರ ಆಕ್ರೋಶದ ಕಟ್ಟೆ ಒಡೆಯುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಬಂದರು ಅಭಿವೃದ್ಧಿ ಕಡೆಗೆ ಗಮನಹರಿಸಬೇಕಿದೆ ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
ಬಂದರಿನ ಮೊದಲ ಹಂತದ ಕಾಮಗಾರಿ ಮುಗಿದು 17 ವರ್ಷ ಕಳೆದರೂ ಇನ್ನೂ ಮೀನುಗಾರಿಕಾ ಇಲಾಖೆಯಿಂದ ಎರಡನೇ ಹಂತದ ಕಾಮಗಾರಿಗೆ ಪ್ರಸ್ತಾವನೆಯೇ ಹೋಗಿಲ್ಲ. ಜೆಟ್ಟಿ ಪುನಃ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಬಂದರು ವಿಸ್ತರಣೆಗೆ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಂಡರೆ ಸಾಕಷ್ಟು ಪ್ರಯೋಜನವಾಗಲಿದೆ.
-ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ
ಗಂಗೊಳ್ಳಿ ಬಂದರು ಅಭಿವೃದ್ಧಿಗೆ ಪಟ್ಟಿ ಸಿದ್ಧಪಡಿಸಿ ಇಲಾಖೆ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರದ ಮತ್ಸೃಸಂಪದ ಯೋಜನೆಯಡಿ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಗೃಹ, ಸುಸಜ್ಜಿತ ಶೌಚಗೃಹ, ಬಂದರಿನ ಸುತ್ತ ಆವರಣ ಗೋಡೆ ನಿರ್ಮಾಣ ಸಹಿತ ಅನೇಕ ಯೋಜನೆ ಅನುಷ್ಠಾನಗೊಳ್ಳಲಿದೆ. ಸಿಆರ್ಜಡ್ ಅನುಮತಿ ಸಿಕ್ಕಿದ ಬಳಿಕ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.
-ಸಂಜೀವ ಅರಕೇರಿ, ಮೀನುಗಾರಿಕಾ ಸಹಾಯಕ ನಿರ್ದೇಶಕರು, ಗಂಗೊಳ್ಳಿ