ಪುತ್ತೂರು: ಮೊಳಹಳ್ಳಿ ಶಿವರಾಯರಿಂದ ೧೯೦೯ರಲ್ಲಿ ಸ್ಥಾಪಿಸಲ್ಪಟ್ಟ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸದಸ್ಯರಿಗೆ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿಟ್ಲದಲ್ಲಿ ನೂತನ ಶಾಖೆಯನ್ನು ಪ್ರಾರಂಭಿಸುತ್ತಿದ್ದು, ಎಂಪೈರ್ ಮಾಲ್ನ ಮೊದಲ ಮಹಡಿಯಲ್ಲಿ ನ.೧೪ರಂದು ಬೆಳಗ್ಗೆ ೧೦ ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ಹೇಳಿದರು.
ಬ್ಯಾಂಕ್ ೧೨೦ ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿ ೧.೫೫ ಕೋಟಿ ರೂ. ಲಾಭ ಗಳಿಸಿದೆ. ಅನುತ್ಪಾದಕ ಆಸ್ತಿಯನ್ನು ಶೂನ್ಯಕ್ಕೆ ಇಳಿಸಿಕೊಂಡಿದೆ. ಈ ಮೂಲಕ ಬ್ಯಾಂಕ್ ಆರ್ಥಿಕವಾಗಿ ಸದೃಢ ಎಂದು ಗುರುತಿಸಲ್ಪಟ್ಟಿದೆ. ಶಾಖೆಯ ಉದ್ಘಾಟನೆಯನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಔಟ, ಭದ್ರತಾ ಕೋಶವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಗಣಕ ಯಂತ್ರವನ್ನು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಪ್ರಥಮ ಠೇವಣಿ ಪತ್ರ ಹಸ್ತಾಂತರವನ್ನು ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಮಾಡಲಿದ್ದಾರೆ. ವಿಟ್ಲ ಅರಮನೆಯ ಅರಸ ಬಂಗಾರು ಅರಸರು, ಎಸ್. ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸಹಕಾರಿ ಸಂಘಗಳ ಉಪನಿಬಂಧಕ ರಮೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್ ಶೆಣೈ, ನಿರ್ದೇಶಕರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ಕಿರಣ್ ಕುಮಾರ್ ರೈ, ಮುಖ್ಯ ಕಾರ್ಯನಿರ್ವಹಣಾಽಕಾರಿ ಬಿ. ಶೇಖರ್ ಶೆಟ್ಟಿ ಉಪಸ್ಥಿತರಿದ್ದರು.
ಡಿಜಿಟಲೀಕರಣ ವ್ಯವಸ್ಥೆ:
ಪಟ್ಟಣ ಬ್ಯಾಂಕ್ಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಹಾಕಿ ತೀವ್ರ ನಿಗಾವಹಿಸಿ ಮೇಲ್ವಿಚಾರಣೆಯನ್ನು ರಿಸರ್ವ್ ಬ್ಯಾಂಕ್ ನಡೆಸುತ್ತದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸುವ, ಸಮಸ್ಯೆ ರಹಿತ ತೆರಿಗೆ ವ್ಯವಸ್ಥೆಯನ್ನು ಅಳವಡಿಸುವ, ಶಾಖೆಯನ್ನು ಪ್ರಾರಂಭಿಸುವ, ಪರಿಪೂರ್ಣ ಬ್ಯಾಂಕ್ ಆಗಿ ಬದಲಾಗುತ್ತಿರುವ ಸನ್ನಿವೇಶಕ್ಕನುಗುಣವಾಗಿ ಬ್ಯಾಂಕನ್ನು ಡಿಜಿಟಲೀಕರಣ ವ್ಯವಸ್ಥೆಯಡಿ ತರುವ ಕಾರ್ಯಗಳನ್ನು ಮಾಡಲಾಗುತ್ತಿದೆ.