ಬೆಳ್ತಂಗಡಿ: ಭಜನಾ ಪರಿಷತ್ ಬೆಳ್ತಂಗಡಿ, ಕುಣಿತ ಭಜನಾ ತರಬೇತಿದಾರರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ಕುಣಿತ ಭಜನೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ, ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನ ಬಳಿಯಿಂದ ಖಂಡನಾ ಮೆರವಣಿಗೆ ಮತ್ತು ಬೆಳ್ತಂಗಡಿ ಆಡಳಿತ ಸೌಧದ ಆವರಣದಲ್ಲಿ ಭಜಕರ ಸಮಾವೇಶ ಸೋಮವಾರ ನಡೆಯಿತು.
ವಕೀಲ, ಕಳೆಂಜ ಸ್ವಾಮಿ ವಿವೇಕಾನಂದ ಸೇವಾ ಶ್ರಮ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಅಗರ್ತ ಮಾತನಾಡಿ, ಭಗವಂತನ ಆರಾಧನೆಯ ಅತ್ಯಂತ ಸರಳ ವಿಧಾನ ಭಜನೆ. ಸರ್ಕಾರಿ ಅಧಿಕಾರಿಗಳು ಕೀಳುಮಟ್ಟಕ್ಕೆ ಇಳಿದು ಭಜನೆ ಬಗ್ಗೆ ನಿಂದಿಸಲು ಕಾರಣವೇನು?. ಹಿಂದು ಸಮಾಜದಲ್ಲಿ ಭಜಕ ಶಕ್ತಿ ಜಾಗೃತವಾಗಿದೆ. ಈ ರೀತಿ ಮಾತನಾಡುವವರ ವಿರುದ್ಧ ಸರ್ಕಾರ, ಇಲಾಖೆಗಳು ಸೂಕ್ತ ಕ್ರಮ ಕೈಗೊಳಲ್ಲದೆ ಹಿಂದೇಟು ಹಾಕುತ್ತಿರುವುದು ದುರಂತ ಎಂದು ಹೇಳಿದರು.
ವಕೀಲ ಬಿ.ಕೆ. ಧನಂಜಯ ಕುಮಾರ್, ರಾಷ್ಟ್ರ ಸೇವಿಕಾ ಸಮಿತಿಯ ಗಿರಿಜಾ ಭಟ್, ಭಜಕಿ ಅಭಿಶ್ರೀ ಪೂಜಾರಿ ಚಾರ್ಮಡಿ, ಬೆಳ್ತಂಗಡಿ ಭಜನಾ ಪರಿಷತ್ ಉಪಾಧ್ಯಕ್ಷ ಜಯಪ್ರಸಾದ್ ಕಡಮ್ಮಾಜೆ ಮಾತನಾಡಿದರು.
ಶಾಸಕ ಹರೀಶ್ ಪೂಂಜ, ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ನ.ಪಂ. ಅಧ್ಯಕ್ಷ ಜಯಾನಂದ ಗೌಡ, ಪ್ರಮುಖರಾದ ಭಾಸ್ಕರ್ ಧರ್ಮಸ್ಥಳ, ಸೀತಾರಾಮ ಬೆಳಾಲ್, ಕೊರಗಪ್ಪ ನಾಯ್ಕ, ಜಯಂತ್ ಗೌಡ, ಮಂಜುನಾಥ್ ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪಿ.ಸಾಲ್ಯಾನ್, ಭಜನಾ ಪರಿಷತ್ ಅಧ್ಯಕ್ಷ ವೆಂಕಟೇಶ್ ಭಟ್, ವಿ.ಹಿಂ.ಪ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಉಪಸ್ಥಿತರಿದ್ದರು.
ಭಜನಾ ತರಬೇತಿ ಶಿಕ್ಷಕ ಹರೀಶ್ ನೆರಿಯ ನಿರೂಪಿಸಿದರು. ಸಮಾವೇಶಕ್ಕೆ ಮೊದಲು ಬೆಳ್ತಂಗಡಿ ಅಯ್ಯಪ್ಪ ಮಂದಿರದ ಬಳಿಯಿಂದ ತಾಲೂಕು ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು.
ಭಜನೆಯನ್ನು ಅವಮಾನಿಸಿದ ವ್ಯಕ್ತಿಗಳಿಗೆ ನಾವು ಪೂಜಿಸುವ ದೇವನಲ್ಲಿ ನೀನು ಅವರನ್ನು ಶಿಕ್ಷಿಸು ಎಂದು ಪ್ರಾರ್ಥಿಸಬೇಕು. ಭಗವಂತ ನೀಡುವ ನ್ಯಾಯಕಿಂತ ಮೇಲೆ ಇನ್ನೊಂದಿಲ್ಲ. ಮಕ್ಕಳು ಶಾಲೆಯಿಂದ ಬಂದು ಭಜನೆ ತರಬೇತಿಗೆ ಸೇರಿ ನಮ್ಮ ಸಂಸ್ಕೃತಿ ಅರಿತುಕೊಳ್ಳುತ್ತಿದ್ದಾರೆ.
– ಬಿ.ಕೆ. ಧನಂಜಯ ಕುಮಾರ್, ವಕೀಲ