ಬೆಂಗಳೂರು:ದೇಶದ ಸಂಸ್ಕೃತಿ ಮೇಲೆ ನಡೆಯುತ್ತಿರುವ ದಾಳಿಯನ್ನು ಹೋಗಲಾಡಿಸಲು ರಾಷ್ಟ್ರಪ್ರೇಮದ ಕುರಿತು ಜಾಗೃತಿಗೊಳಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಆಗಬೇಕಿದೆ. ಈ ಮೂಲಕ ದೇಶದ ಅಸ್ಮಿತೆಯನ್ನು ಪುನರ್ಸ್ಥಾಪಿಸುವ ಅಗತ್ಯವಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅಭಿಪ್ರಾಯಪಟ್ಟರು.
ಅದಮ್ಯ ಚೇತನ ವತಿಯಿಂದ ಜಯನಗರದ ಎಂಇಎಸ್ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ “ಅನಂತ ಸೇವಾ ಉತ್ಸವ’ದ ಅಸ್ಮಿತೆ-ಕ್ಷಾತ್ರತೇಜ ಉದ್ಘೋಷ ಕುರಿತು ಭಾನುವಾರ ಮಾತನಾಡಿದರು.
ನಮ್ಮ ದೇಶವು ಶಾಂತಿಗೆ ಹೆಸರುವಾಸಿ. ಈವರೆಗೂ ಯಾವುದೇ ದೇಶದ ಮೇಲೆ ಯುದ್ಧಕ್ಕೆ ಹೋಗಿಲ್ಲ. ಭಾರತ “ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ’. ಆದರೂ, ಸಂಸ್ಕೃತ ನಾಶ ಮಾಡಿದರೆ ಆ ದೇಶದ ಸಂಸ್ಕೃತಿ ತಾನಾಗಿ ನಾಶಿಸಿಹೋಗುತ್ತಿದೆ ಎಂದು ಹಿಂದೆಯೇ ಪರಕೀಯರು ತಂತ್ರ ನಡೆಸಿ ವಿಫಲರಾಗಿದ್ದರು. ಈಗಲೂ ವಿಶ್ವದ ಹಲವು ದೇಶಗಳು ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು ನಾಶಪಡಿಸಲು ಸಮರ ಸಾರಿವೆ. ಸಾಂಸ್ಕೃತಿಕ ಯುದ್ಧ ಪ್ರಾರಂಭವಾಗಿದ್ದು, ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಇದರಿಂದಾಗಿ ನಮ್ಮ ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಅಸ್ಮಿತೆ, ರಾಷ್ಟ್ರಪ್ರಜ್ಞೆ ಮತ್ತು ಕ್ಷಾತ್ರತೇಜವನ್ನು ಮಕ್ಕಳಿಗೆ ತಿಳಿಸುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು. ಇದಕ್ಕೂ ಮುನ್ನ ಸಾಮೂಹಿಕವಾಗಿ ವಂದೇ ಮಾತರಂ ಗೀತೆಯನ್ನು ಪ್ರಚುರಪಡಿಸಲಾಯಿತು. ಅದಮ್ಯ ಚೇತನ ಪ್ರತಿಷ್ಠಾನ ಅಧ್ಯಕ್ಷ ಕೃಷ್ಣಭಟ್, ಶಾಸಕ ಸಿ.ಕೆ.ರಾಮಮೂರ್ತಿ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತಿತರರಿದ್ದರು.
ವಿಶ್ವಕ್ಕೆ ಜ್ಞಾನ ಸಂಪತ್ತು ಕೊಟ್ಟ ರಾಷ್ಟ್ರ ಭಾರತ:
ವಿಶ್ವಕ್ಕೆ ಅದ್ಭುತ ಜ್ಞಾನ ಸಂಪತ್ತು, ಆಧ್ಯಾತ್ಮಿಕ ಕೊಡುಗೆ ಕೊಟ್ಟಿರುವ ಏಕೈಕ ರಾಷ್ಟ್ರ ಭಾರತ. “ರಾಷ್ಟ್ರಗೀತೆ’, “ರಾಷ್ಟ್ರಧ್ವಜ’, “ಸಂವಿಧಾನ’ದಲ್ಲಿ ದೇಶದ ಅಸ್ಮಿತೆ ಇದೆ. ಈಗಿನ ಕಾಲದಲ್ಲಿ ಕೆಲವರು ರಾಷ್ಟ್ರಗೀತೆ ಹೇಳುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ದೇಶದ ಅಸ್ಮಿತೆಗಾಗಿ ಎಲ್ಲ ಶಕ್ತಿ ನಮ್ಮಲ್ಲಿದೆ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಅದರಂತೆ, ದೇಶದ ಅಸ್ಮಿತೆಗಾಗಿ ನಾವೆಲ್ಲರೂ ಇನ್ನಷ್ಟು ಜಾಗೃತಗೊಳ್ಳಬೇಕಿದೆ ಎಂದು ನ್ಯಾ.ಶ್ರೀಶಾನಂದ ಹೇಳಿದರು. ನಮ್ಮ ದೇಶದ ಇತಿಹಾಸವನ್ನು ತಿರುಚಿದ್ದು, ಅದನ್ನು ಸರಿಪಡಿಸುವ ಕೆಲಸವಾಗಬೇಕಿದೆ. ಹಲವು ಪರಕೀಯರು ನಮ್ಮ ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಹಿಂದೆಯೇ ವಿರೋಧಿಗಳಿಗೆ ನಮ್ಮವರು ತಕ್ಕ ತಿರುಗೇಟು ನೀಡಿದ್ದರು. ದೇಶದಲ್ಲಿ ಕೆಲ ನ್ಯೂನತೆಗಳಿಂದ ಅಸ್ಮಿತೆಗೆ ಧಕ್ಕೆಯಾಗುತ್ತಿದೆ. ಇದೀಗ ದೇಶದ ಅಸ್ಮಿತೆ ಉಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 18 ಬಾರಿ ದಂಡೆತ್ತಿ ಬಂದು ದೇಶದ ಸಂಪತ್ತು ಲೂಟಿ ಮಾಡಿದ್ದರೂ ಇನ್ನೂ ಸಂಪತ್ತು ಮತ್ತು ಮಾನಸಿಕ ಸಂಪತ್ತು ಲೂಟಿಯಾಗಿಲ್ಲ. ಇದೇ ನಮ್ಮ ದೇಶದ ಅಸ್ಮಿತೆ. ವೈಜ್ಞಾನಿಕ ಆವಿಷ್ಕಾರ, ವಿಜ್ಞಾನ-ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಮ್ಮ ರಾಷ್ಟ್ರವು ಅಗಾಧ ಸಾಧನೆ ಮಾಡಿದೆ ಎಂದು ವಿವರಿಸಿದರು.
“ಅನ್ನ-ಅಕ್ಷರ-ಆರೋಗ್ಯ’ ಘೋಷವಾಕ್ಯದೊಂದಿಗೆ ಅರಂಭವಾಗಿರುವ “ಅದಮ್ಯ ಚೇತನ’ ಸಂಸ್ಥೆ ಪ್ರತಿ ನಿತ್ಯ ಸಾವಿರಾರು ಜನರಿಗೆ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿದೆ. ಗ್ರಾಮೀಣಾಭಿವೃದ್ಧಿ, ಪರಿಸರ ಸಂರಕ್ಷಣೆ, ಹಸಿರು ಬೆಂಗಳೂರು, ಮಳೆನೀರು ಕೊಯ್ಲು, ಛಾವಣಿ ಸೋಲಾರ್, ಝೀರೋ ಗಾರ್ಬೇಜ್ ಕಿಚನ್ ಹಾಗೂ ಇಂಧನ ಸಂರಕ್ಷಣೆಗಾಗಿ ನಾಗರಿಕರಿಗೆ ಸ್ಪರ್ಧಾ ಚಟುವಟಿಕೆ ಆಯೋಜಿಸುತ್ತಿದೆ.
| ಡಾ. ತೇಜಸ್ವಿನಿ ಅನಂತಕುಮಾರ್. ಅದಮ್ಯ ಚೇತನ ಮುಖ್ಯಸ್ಥೆ.
ಸಂಸ್ಕೃತ ಮರೆತರೆ ಕನ್ನಡಕ್ಕೆ ಅಪಾಯ! ಲಿಟ್ ಫೆಸ್ಟ್ ಸಂವಾದದಲ್ಲಿ ಸಾಹಿತಿ ಭೈರಪ್ಪ ಅಭಿಮತ