ಚೆನ್ನೈ: ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ 36 ರನ್ಗಳ ಸೋಲು ಕಂಡಿದ್ದು, ಸೋಲಿನೊಂದಿಗೆ ತನ್ನ ಅಭಿಯಾನವನ್ನು ಮುಗಿಸಿದೆ. ಇತ್ತ ಸೋಲಿನ ಕುರಿತು ಮಾತನಾಡಿರುವ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್ ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಈ ಕುರಿತು ಮಾತನಾಡಿದ ಸಂಜು ಸ್ಯಾಮ್ಸನ್, , ಇದೊಂದು ಮಹತ್ವದ ಪಂದ್ಯವಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ನಾವು ಬೌಲಿಂಗ್ ಮಾಡಿದ ರೀತಿ ನನಗೆ ನಿಜಕ್ಕೂ ಹೆಮ್ಮೆ ತಂದಿದೆ. ಆದರೆ ಬ್ಯಾಟಿಂಗ್ನಲ್ಲಿ ನಾವು ಎಡವಿದೆವು. ಅದರಲ್ಲೂ ಸ್ಪಿನ್ ದಾಳಿ ವಿರುದ್ಧ ಮಧ್ಯಮ ಓವರ್ಗಳಲ್ಲಿ ನಮ್ಮಲ್ಲಿ ಉತ್ತಮ ಆಯ್ಕೆಗಳ ಕೊರತೆ ಕಂಡುಬಂದಿತು. ಅಲ್ಲಿಯೇ ನಾವು ಪಂದ್ಯವನ್ನು ಸೋತೆವು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಅವಧಿ ಮೀರಿದ ಆಹಾರ ಪದಾರ್ಥ, ನಿಯಮ ಉಲ್ಲಂಘನೆ ಪತ್ತೆ
ದ್ವಿತೀಯ ಇನಿಂಗ್ಸ್ ವೇಳೆ ಪಿಚ್ ಸ್ಪಿನ್ನರ್ಗಳಿಗೆ ಸಹಕಾರಿಯಾಗಿತ್ತು. ಅದರಲ್ಲೂ ಸನ್ರೈಸರ್ಸ್ ಹೈದರಾಬಾದ್ ಸ್ಪಿನ್ನರ್ಗಳು ಈ ಟರ್ನಿಂಗ್ಗಳನ್ನು ಪರಿಣಾಮಕಾರಿಯಾಗಿ ಬಳಸಲು ಪ್ರಾರಂಭಿಸಿದರು. ನಮ್ಮ ಬಲಗೈ ಬ್ಯಾಟ್ಸ್ಮನ್ಗಳ ವಿರುದ್ಧ ಮಧ್ಯಮ ಓವರ್ಗಳಲ್ಲಿ ಎಡಗೈ ಸ್ಪಿನ್ನರ್ಗಳು ಉತ್ತಮ ದಾಳಿ ಸಂಘಟಿಸಿದರು. ನಮ್ಮ ಬ್ಯಾಟಿಂಗ್ ಲೈನಪ್ನಲ್ಲಿ ಎಡಗೈ ಬ್ಯಾಟರ್ಗಳು ಇಲ್ಲದಿರುವುದು ಕೂಡ ನಮ್ಮ ಸೋಲಿಗೆ ಕಾರಣವಾಯಿತು.
ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್ ಹೆಟ್ಮೆಯರ್ ಹೊರತುಪಡಿಸಿ ಯಾರು ಎಡಗೈ ಬ್ಯಾಟ್ಸ್ಮನ್ಗಳಿಲ್ಲ. ಎಸ್ಆರ್ಹೆಚ್ ತಂಡದ ಎಡಗೈ ಸ್ಪಿನ್ನರ್ಗಳು ಮಧ್ಯಮ ಓವರ್ಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿ ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಬಿಟ್ಟರು. ಇದುವೇ ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ.