ಹೈದರಾಬಾದ್: ಕಳೆದ ಕೆಲ ತಿಂಗಳ ಹಿಂದೆ ಬಾಂಬ್ ಸ್ಫೋಟದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದ ದಿ ರಾಮೇಶ್ವರಂ ಕೆಫೆ ಈಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ದಕ್ಷಿಣ ಭಾರತದ ಉಪಹಾರಕ್ಕೆ ಹೆಸರುವಾಸಿಯಾದ ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ವಿಭಾಗವು ದಾಳಿ ನಡೆಸಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಸೀಜ್ ಮಾಡಿದ್ದಾರೆ.
ತೆಲಂಗಾಣ ರಾಜಧಾನಿ ಹೈದರಾಬಾದ್ ಪ್ರತಿಷ್ಠಿತ ಹೋಟೆಲ್ಗಳ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಹೈದರಾಬಾದ್ದ್ನ ಸಂಜೀವರೆಡ್ಡಿ ನಗರದಲ್ಲಿರುವ ಹೊಟೆಲ್ ಸಾಯಿ ಬೃಂದಾವನ್, ಉಪ್ಪಾಲ್ನಲ್ಲಿರುವ ಮಾಸ್ಟರ್ ಚೆಫ್ ರೆಸ್ಟೋರೆಂಟ್, KFC, ಸೋಮಾಜಿಗೂಡದಲ್ಲಿರುವ ಕೃತುಂಗಾ ದಿ ಪಾಳೇಗಾರ್ಸ್ ಕ್ಯುಸಿನ್ ಹೋಟೆಲ್, ಬಂಜಾರ್ ಹಿಲ್ಸ್ ನಲ್ಲಿರುವ ಬಾಸ್ಕಿನ್ ರಾಬಿನ್ಸ್, ಮಾಧಾಪುರ್ ಪ್ರದೇಶದಲ್ಲಿರುವ ದಿ ರಾಮೇಶ್ವರಂ ಕೆಫೆ ಸೇರಿದಂತೆ ಹಲವು ಹೊಟೆಲ್ಗಳ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಹಲವಾರು ಆಹಾರ ಸುರಕ್ಷತಾ ಉಲ್ಲಂಘನೆಗಳನ್ನು ಪತ್ತೆ ಮಾಡಿದ್ದಾರೆ. ಈ ರೆಸ್ಟೋರೆಂಟ್ನಲ್ಲಿ ಅವಧಿ ಮುಗಿದ ಮತ್ತು ಲೇಬಲ್ ಮಾಡದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಕೂಡಲೇ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಪುತ್ರ ಯತೀಂದ್ರಗೆ MLC ಪೋಸ್ಟ್; ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು
ಆಹಾರ ಸುರಕ್ಷತಾ ಇಲಾಖೆ ಪ್ರಕಾರ, 16,000 ಮೌಲ್ಯದ 100 ಕೆಜಿ ಉದ್ದಿನ ಬೇಳೆ, 10 ಲೀಟರ್ ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲು ಅವಧಿ ಮುಗಿದಿದ್ದು, ಈ ಎಲ್ಲಾ ವಸ್ತುಗಳು ಅಡುಗೆಮನೆಯಲ್ಲಿ ಕಂಡುಬಂದಿದೆ. ಇದಲ್ಲದೆ ಸರಿಯಾಗಿ ಲೇಬಲ್ ಮಾಡಿದ 450 ಕೆಜಿ ಅಕ್ಕಿ, 20 ಕೆಜಿ ಬಿಳಿ ಅಲಸಂದೆ ಮತ್ತು 300 ಕೆಜಿ ಬೆಲ್ಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.
ಅಲ್ಲದೇ, ಕೆಫೆಯ ಆಹಾರ ಖಾದ್ಯ ನಿರ್ವಹಣೆ ಮಾಡುವವರು ತಮ್ಮ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಕೆಫೆಯಲ್ಲಿನ ಕಸದಬುಟ್ಟಿಗಳನ್ನು ಮುಚ್ಚಳದಿಂದ ಮುಚ್ಚಿರಲಿಲ್ಲ. ದಾಳಿ ನಡೆಸಿದ ಬಹುತೇಕ ಎಲ್ಲ ಹೊಟೆಲ್ ಗಳ ಪರಿಸ್ಥಿತಿ ಇದೇ ಆಗಿದ್ದು, ಅವಧಿ ಮೀರಿದ ಆಹಾರೋತ್ಪನ್ನಗಳು, ಶುಚಿತ್ವ ಕೊರತೆ, ಸಿಬ್ಬಂದಿಗಳ ಸಮಸ್ಯೆಗಳಿಂದ ಕೂಡಿವೆ ಎಂದು ಆಹಾರ ಇಲಾಖೆ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.