ದಾವಣಗೆರೆ: ಇತ್ತೀಚೆಗೆ ದೇಶದಲ್ಲಿ ನಿಂತಲ್ಲೇ ಅಥವಾ ಜಿಮ್ನಿಂದ ವಾಪಾಸ್ ಆದ ಮೇಲೆ, ಹೀಗೆ ಎಲ್ಲೆಂದರಲ್ಲಿ ಹೃದಯಾಘಾತವಾಗಿ ಸಾವಿಗೀಡಾಗುತ್ತಿರುವ ಜನರ ಸಂಖ್ಯೆ ಹೆಚ್ಚಿದೆ. ಇದೀಗ ಅಂತಹದೇ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದ್ದು ಮಕ್ಕಳಿಗೆ ಪಾಠ ಮಾಡುತ್ತಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಶಿಕ್ಷಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಕರುನಾಜನಕ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದಿದ್ದು ಇಂಗ್ಲೀಷ್ ವಿಷಯದ ಶಿಕ್ಷಕ ವಿಜಯ್ ಕುಮಾರ್ (54) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.
ವಿಜಯ್ ಕುಮಾರ್, ಮೂಲತಃ ದಾವಣಗೆರೆ ತಾಲ್ಲೂಕು ಮಹಾದೇವಿಪುರದ ನಿವಾಸಿಯಾಗಿದ್ದರು. ಬೆಳಗ್ಗೆ ಶಾಲೆಯಲ್ಲಿ ಪ್ರಾರ್ಥನೆ ಮುಗಿಸಿ ಇವರು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಪಾಠ ಮಾಡುತ್ತಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದು ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಹ ಶಿಕ್ಷಕರು ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಈ ಸಂದರ್ಭ ಚಿಕಿತ್ಸೆ ಫಲಕಾರಿಯಾಗದೆ ಶಿಕ್ಷಕ ವಿಜಯ್ ಕುಮಾರ್ ಸಾವನ್ನಪ್ಪಿದ್ದಾರೆ. ಶಿಕ್ಷಕರು, ಶಾಲಾ ಆವರಣದಲ್ಲೆ ಮಕ್ಕಳಿಗಾಗಿ ಅಂತಿಮ ದರ್ಶನದ ವ್ಯವಸ್ಥೆ ಮಾಡಿದ್ದು ನೆಚ್ಚಿನ ಶಿಕ್ಷಕರ ಅಗಲಿಕೆಗೆ ಶಾಲಾ ಮಕ್ಕಳು ಕಂಬನಿ ಮಿಡಿದಿದ್ದಾರೆ. ಅಂತಿಮ ದರ್ಶನದ ಸಮಯ ಕುಟುಂಬಸ್ಥರು ಮತ್ತು ಶಾಲಾ ಮಕ್ಕಳು ಗೋಳಾಡುವ ದೃಶ್ಯ ಮನಕಲುಕುವಂತಿತ್ತು.