ಬೆಂಗಳೂರು: ಈತನ ಕೆಲಸ ಎಟಿಎಂ ಮಷೀನ್ಗಳಿಗೆ ಹಣ ತುಂಬಿಸುವುದು. ಕಳೆದ ಒಂದು ದಶಕದಿಂದ ನಿಯತ್ತಾಗಿ ಈತ ಈ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಏನಾಯಿತೋ ಗೊತ್ತಿಲ್ಲ. ಅಚಾನಕ್ ಆಗಿ ಮೊಬೈಲ್ ಸ್ವಿಚ್ ಆಫ್ ಮಾಡಿ ಕುಳಿತುಕೊಂಡಿದ್ದ. ಏನಪ್ಪಾ ಇವನ ಸಮಸ್ಯೆ ಎಂದು ಅನುಮಾನಗೊಂಡು ವಿಚಾರಣೆ ಮಾಡಿದಾಗ ಈತನ ಅಸಲಿಯತ್ತು ಬಹಿರಂಗಗೊಂಡಿದೆ.
ಈ ಘಟನೆ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ರಾಜೇಶ್ ಮೇಸ್ತಾ ಎಂನ್ನುವಾತ ಕೃತ್ಯವನ್ನು ಎಸಗಿದ್ದಾನೆ. ಈತ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ನ ಎನ್ನುವ ಸಂಸ್ಥೆಯ ಉದ್ಯೋಗಿಯಾಗಿದ್ದ. ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್, ಎಟಿಎಂಗಳಿಗೆ ಹಣ ತುಂಬಿಸುವ ಸಂಸ್ಥೆ. ಕಳೆದ 11 ವರ್ಷದಿಂದ ಈ ಸಂಸ್ಥೆಯಲ್ಲಿ ರಾಜೇಶ್ ಮೇಸ್ತಾ ಕೆಲಸ ಮಾಡುತ್ತಿದ್ದ.
ಆದರೆ ಜನವರಿ ಅಂತ್ಯದಲ್ಲಿ ಇದ್ದಕ್ಕಿದ್ದಂತೆ ಈತ ಪೋನ್ ಸ್ವಿಚ್ಡ್ ಅಪ್ ಮಾಡಿ ಎಸ್ಕೇಪ್ ಆಗಿದ್ದ. ಇದರಿಂದ ಅನುಮಾನಗೊಂಡ ಸಂಸ್ಥೆ, ರಾಜೇಶ್ ಹಣ ತುಂಬಿಸುತ್ತಿದ್ದ ಎಟಿಎಂಗಳ ಆಡಿಟ್ ಮಾಡಿಸಿದೆ. ಆಗ ಆತ 1 ಕೋಟಿ 3 ಲಕ್ಷ ರೂ. ಹಣದ ಸಮೇತ ಪರಾರಿಯಾಗಿರುವುದು ಪತ್ತೆಯಾಗಿದೆ. ಅದು ಹೇಗೆ ಅಂತೀರಾ? ಎಟಿಎಂ ತುಂಬಿಸುವ ಬದಲು ಈತ ಆ ಹಣವನ್ನು ತನ್ನ ಜೊತೆಗೆ ಒಯ್ಯುತ್ತಿದ್ದ. ಸದ್ಯ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರಿಂದ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.