ಸುಳ್ಯ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಸುಳ್ಯ ಘಟಕದ ರಬ್ಬರ್ ತೋಟಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಹಲವಾರು ತೊಂದರೆಗಳಿದ್ದು, ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂದು ಆಗ್ರಹಿಸಿ ಸುಳ್ಯ ತಾಲೂಕು ತೋಟ ತೊಳಿಲಾರ್ ಸಂಘದ ವತಿಯಿಂದ ಬುಧವಾರ ಸುಳ್ಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಆರಂಭಿಸಲಾಯಿತು.
ಸಂಘದ ಅಧ್ಯಕ್ಷ ಚಂದ್ರ ಲಿಂಗಂ ಧರಣಿಗೆ ಚಾಲನೆ ನೀಡಿ, ಸುಳ್ಯದ ರಬ್ಬರ್ ತೋಟಗಳ ಕಾರ್ಮಿಕರಿಗೆ ಹಲವಾರು ತೊಂದರೆಗಳಿವೆ. ಕಳೆ ಗಿಡಗಂಟಿಗಳ ಸಮಸ್ಯೆ, ಕಾಡುಪ್ರಾಣಿಗಳ ಹಾವಳಿ, ರಸಗೊಬ್ಬರದ ಸಮಸ್ಯೆ, ರಬ್ಬರ್ ಮರಗಳಿಗೆ ಔಷಧ ಸಿಂಪಡಣೆ ಮಾಡದಿರುವುದು, ಕಾರ್ಮಿಕರಿಗೆ ಬೋನಸ್ ನೀಡದಿರುವುದು, ವೇತನ ತಾರತಮ್ಯ ಮುಂತಾದ ಸಮಸ್ಯೆಗಳಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ನೀಡಿದರು ಯಾವುದೇ ಉತ್ತರ ಸಿಗುತ್ತಿಲ್ಲ. ಸಮಸ್ಯೆ ಬಗೆಹರಿಯುವ ವರೆಗೆ ಧರಣಿ ಕೈ ಬಿಡುವುದಿಲ್ಲ ಎಂದರು.
ಸಂಘದ ಕಾರ್ಯಾಧ್ಯಕ್ಷ ಸೂರ್ಯ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜಕೃಷ್ಣ ಬಿಳಿನೆಲೆ, ಉಪಾಧ್ಯಕ್ಷರಾದ ಅರುಣಾಚಲಂ, ಕಮಲ್ ರಾಜ್, ಅಣ್ಣಾದೊರೈ, ಶಿವ ಕೊಂಬರ್, ಕೋಶಾಧಿಕಾರಿ ಸುಧಾಕರ್ ನಾಗಪಟ್ಟಣ, ಸಂಘಟನಾ ಕಾರ್ಯದರ್ಶಿ ಚಂದ್ರನ್, ಜತೆ ಕಾರ್ಯದರ್ಶಿಗಳಾದ ಆನಂದ್ ಕುಮಾರ್ ನಾಗಪಟ್ಟಣ, ಸರವಣ, ರವಿ ಬಾರ್ಪಣೆ, ಮಂಜುನಾಥ್ ಕಂದಡ್ಕ, ವಿಶ್ಲೇಶ್ ಕಂದಡ್ಕ, ಚಿನ್ನ ತಂಬಿ ನಾರಡ್ಕ, ರವಿ ನಾರಾಡ್ಕ ಕಂದಸ್ವಾಮಿ, ಈಶ್ವರನ್ ಕೊಣಾಜೆ, ಸುರೇಶ್ ಬೆತೋಡಿ ಹಾಗೂ ಸದಸ್ಯರು, ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಕೆಲಸ ನಿರ್ವಹಿಸುವ ರಬ್ಬರ್ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.