ಸಾಗರ: ಮನುಷ್ಯ ಸಾಕಷ್ಟು ಸಮಸ್ಯೆ ಸವಾಲುಗಳ ನಡುವೆಯೂ ಜೀವನ ಮುನ್ನಡೆಸಬೇಕು. ಮಾನಸಿಕ ನೆಮ್ಮದಿ ಸಿಗದೆ ಹೋದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬದುಕಿಗೆ ನೆಮ್ಮದಿ ಮುಖ್ಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರದ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಏರ್ಪಡಿಸಿದ್ದ 89ನೇ ತ್ರಿಮೂರ್ತಿ ಶಿವ ಜಯಂತಿ ಹಾಗೂ ಜ್ಞಾನ ವಿಜ್ಞಾನ 3ಡಿ ಶಿವಲಿಂಗ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಧಾರ್ಮಿಕ ಮನೋಭಾವನೆಗಳಿಗೆ ಧಕ್ಕೆ ಆಗದಂತೆ ಸಾಮರಸ್ಯ ಹಾಗೂ ಪರಸ್ಪರ ಸೌಹಾರ್ದತೆ ಪ್ರಸರಿಸುವ ಸಂಘಸಂಸ್ಥೆಗಳ ಅಗತ್ಯತೆ ಇದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜಗತ್ತಿನಾದ್ಯಂತ ಶಾಖಾ ಕಚೇರಿ ಹೊಂದಿದ್ದು, ಶಾಂತಿ, ಸೌಹಾರ್ದತೆ ಮತ್ತು ಸೇವಾ ಮನೋಭಾವ ಬಿತ್ತುವ ಸಾರ್ಥಕ ಕೆಲಸ ಮಾಡುತ್ತಿದೆ. ದಣಿವರಿಯದೆ ದುಡಿಯುವ ಮನಸ್ಸಿಗೆ ಮತ್ತು ಮನುಷ್ಯನಿಗೆ ಆತ್ಮ ಸಂತೋಷ, ನೆಮ್ಮದಿ ಮಹತ್ವ ಸಾರುವ ಕೆಲಸ ಸಂಸ್ಥೆ ಮಾಡುತ್ತಿದೆ. ಯೋಗ, ಧ್ಯಾನದ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದೆ ಎಂದರು.
ಬ್ರಹ್ಮಕುಮಾರಿ ಸಂಸ್ಥೆಯ ಶಕುಂತಲಾ ಮಾತನಾಡಿ, ಶಾಂತಿ, ನೆಮ್ಮದಿ ಪರಸ್ಪರ ಸೌಹಾರ್ದತೆ ನಮ್ಮ ಬದುಕಿನ ಪ್ರಮುಖ ಘಟ್ಟಗಳಾಗಿವೆ. ಒತ್ತಡಮುಕ್ತ ಬದುಕಿಗಾಗಿ ಯೋಗ, ಧ್ಯಾನ ಅವಶ್ಯಕ. ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ಜಗತ್ತಿನ 140 ದೇಶಗಳಲ್ಲಿ 8 ಸಾವಿರಕ್ಕೂ ಹೆಚ್ಚು ಶಾಖೆ ಹೊಂದಿದ್ದು 40 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ಪತ್ರಕರ್ತರಾದ ಜಿ.ನಾಗೇಶ್, ದೀಪಕ್ ಸಾಗರ್, ವಿ.ಶಂಕರ್, ಎಚ್.ಬಿ.ರಾಘವೇಂದ್ರ, ಗಣಪತಿ ಶಿರಳಗಿ, ಹಿತಕರ ಜೈನ್, ಪ್ರಶಾಂತ್ ಬಾಬು, ಶಶಿಕಾಂತ್, ಧರ್ಮರಾಜ್, ಗಿರೀಶ್ ರಾಯ್ಕರ್, ಸತ್ಯನಾರಾಯಣ, ರವಿ, ಜಮೀಲ್, ರಫೀಕ್, ರಮೇಶ್ ಇತರರಿದ್ದರು.