ಶಿಕಾರಿಪುರ: ಪ್ರಸ್ತುತ ಕಾಲಘಟ್ಟದಲ್ಲಿ ವೈಜ್ಞಾನಿಕ ಚಿಂತನೆಗಳ ಅಗತ್ಯವಿದೆ. ವಿಜ್ಞಾನದ ಅಧ್ಯಯನದಿಂದ ಜ್ಞಾನದ ಅರಿವು ಇಮ್ಮಡಿಯಾಗುತ್ತದೆ ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್.ಶಿವಕುಮಾರ್ ಹೇಳಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ವಿಭಾಗ ಹಾಗೂ ವಿಜ್ಞಾನ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಜ್ಞಾನ ನಮ್ಮಲ್ಲಿ ವಿಮರ್ಶಾತ್ಮಕ ಭಾವ ಮೂಡಿಸುತ್ತದೆ. ವಾಸ್ತವ ಸಂಗತಿಗಳನ್ನು ತೆರೆದಿಡುತ್ತದೆ. ವಿಜ್ಞಾನದಿಂದ ಹೊಸ ಆವಿಷ್ಕಾರಗಳು ನಡೆಯುತ್ತಿವೆ ಎಂದು ತಿಳಿಸಿದರು.
ಯುವಜನರಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸಬೇಕು. ಬದಲಾಗುತ್ತಿರುವ ಜಗತ್ತಿನಲ್ಲಿ ಉತ್ತಮ ಆಲೋಚನೆ, ಚಿಂತನೆಗಳಿಂದ ವೈಜ್ಞಾನಿಕ ಸಂಶೋಧನೆಗಳು ಮೂಡಲು ಸಾಧ್ಯ. ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು ರಾಷ್ಟ್ರೀಯ ವಿಜ್ಞಾನ ದಿನದ ಆಶಯ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಿ.ವಿ.ರಾಮನ್ ಅವರ ಕೊಡುಗೆಗಳನ್ನು ಸ್ಮರಿಸುವುದು ಈ ದಿನದ ವಿಶೇಷ ಎಂದರು.
ವಿಜ್ಞಾನದ ಸಾಕ್ಷಿರೂಪ ಆಧುನಿಕ ತಂತ್ರಜ್ಞಾನ. ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ವಿಜ್ಞಾನದ ಪಾತ್ರ ಬಹಳ ಮುಖ್ಯವಾಗಿವೆ ಎಂದು ತಿಳಿಸಿದರು. ಡಾ. ವೀರೇಂದ್ರಕುಮಾರ್ ವಾಲಿ, ಡಾ. ಯದುಕುಮಾರ್, ಡಾ. ಕಿರಣ್ಕುಮಾರ್, ಡಾ. ವಾಣಿ, ಡಾ. ರವಿ, ಡಾ. ದೇವರಾಜ್, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.