ಬೆಂಗಳೂರು: ದಕ್ಷ ಹಾಗೂ ಪ್ರಾಮಾಣಿಕ ಕರ್ತವ್ಯದಿಂದಾಗಿ ರಾಷ್ಟ್ರಪತಿ ಪದಕ, ಮುಖ್ಯಮಂತ್ರಿಗಳ ಚಿನ್ನದ ಪದಕ ಗಳಿಸಿ, ಅಪಾರ ಮೆಚ್ಚುಗೆ ಪಡೆದಿರುವ ನಿವೃತ್ತ ಎಸ್ಪಿ ನೂರುಲ್ಲಾ ಷರೀಫ್ ಇಂದು ನಿಧನರಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದವರಾದ ನೂರುಲ್ಲಾ ಅವರಿಗೆ ಇತ್ತೀಚೆಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಇಂದು ಮುಂಜಾನೆ ಉಸಿರಾಟದಲ್ಲಿ ಭಾರಿ ಏರುಪೇರಾಗಿ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ಹೇಳಿವೆ.
1987ರಿಂದ ಸತತ 33 ವರ್ಷಗಳ ಕಾಲ ರಾಜ್ಯದ ವಿವಿಧೆಡೆಗಳಲ್ಲಿ ನೂರುಲ್ಲಾ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗಣೇಶ ಗುಡಿ, ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಸೇವೆ ಸಲ್ಲಿಸಿದ ಬಳಿಕ. 1997ರಲ್ಲಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಬಡ್ತಿ ಪಡೆದರು. ಆಗ ಶಿವಮೊಗ್ಗ, ಸಾಗರ, ಶಿಕಾರಿಪುರ, ಔರಾದ್ನಲ್ಲಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ದ.ಕ ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್
ನಂತರ ಬೆಂಗಳೂರಿನ ತ್ಯಾಗರಾಜನಗರ,ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ ನೂರಲ್ಲಾ ಅವರು, ಸಿಸಿಬಿಯಲ್ಲಿ ಹಾಗೂ 2012ರಲ್ಲಿ ಡಿವೈಎಸ್ಪಿ ಆಗಿ ಬಡ್ತಿ ಪಡೆದು ಸಿಐಡಿಯಲ್ಲಿ ಹಾಗೂ 2018ರಲ್ಲಿ ಎಸ್ಪಿಯಾಗಿ ಬಡ್ತಿ ಪಡೆದು ಲೋಕಾಯುಕ್ತ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
ಇವರಿಗೆ 2000ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ, 2013ರಲ್ಲಿ ರಾಷ್ಟ್ರಪತಿ ಪದಕ ಕೂಡ ಲಭಿಸಿದೆ. ಮೃತರು ಪತ್ನಿ ಖಾತೂನ್, ನಾಲ್ಕು ಜನ ಮಕ್ಕಳನ್ನು ಅಗಲಿದ್ದಾರೆ.
ನನ್ನನ್ನು ಕ್ಷಮಿಸಿಬಿಡಿ… ಕಣ್ಣೀರು ಸುರಿಸಿದ ಉ.ಕೊರಿಯಾ ಸರ್ವಾಧಿಕಾರಿ ಕಿಮ್!