ಬೆಂಗಳೂರು: ಬೆಂಗಳೂರಿನ ಕಾವಲ್ಭೈರಸಂದ್ರ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪ್ರದೇಶಗಳಲ್ಲಿ ಕಿಡಿ ಹೊತ್ತಿಸಿ, ಆಸ್ತಿ ಪಾಸ್ತಿಗಳನ್ನು ಸುಟ್ಟು ಭಸ್ಮ ಮಾಡಿರುವ ಗೂಂಡಾಗಳನ್ನು ಕೇರಳದಿಂದ ಕರೆಸಿಕೊಳ್ಳಲಾಗಿರುವ ಶಂಕೆ ಇದೀಗ ಬಲವಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಅಗೆದಷ್ಟು, ಬಗೆದಷ್ಟು ಹೊಸ ಹೊಸ ವಿಚಾರಗಳು ಹೊರಕ್ಕೆ ಬರುತ್ತಿವೆ. ಘಟನೆ ನಡೆದ ತಕ್ಷಣ ಪೊಲೀಸರಿಂದ ತಲೆಮರೆಸಿಕೊಂಡಿರುವ ಕೆಲವು ದುಷ್ಕರ್ಮಿಗಳು ಕೇರಳದ ವಿವಿಧ ಭಾಗಗಳಲ್ಲಿ ಅಡಗಿ ಕುಳಿತುಕೊಂಡಿರುವ ಮಾಹಿತಿ ಸೈಬರ್ಕ್ರೈಂ ಪೊಲೀಸರಿಗೆ ಲಭ್ಯವಾಗಿದೆ. 30ಕ್ಕೂ ಅಧಿಕ ಪುಂಡರು, ‘ಗಣ್ಯರ’ ದೂರವಾಣಿ ಕರೆಗಳ ಲೊಕೇಷನ್ ಕೇರಳದಲ್ಲಿ ಪತ್ತೆಯಾಗಿದೆ. ಆರೋಪಿಗಳು ಗಲಭೆ ನಡೆದ ಬಳಿಕ ಕೇರಳಕ್ಕೆ ಪರಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಿಸಿಬಿ ಮತ್ತು ಬೆಂಗಳೂರು ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.
ಈ ಪೈಕಿ ಕೆಲವರು ಮುಖಂಡರು ಎನಿಸಿಕೊಂಡಿರುವ ವ್ಯಕ್ತಿಗಳೂ ಭಾಗಿಯಾಗಿದ್ದಾರೆ. ನೇರವಾಗಿ ಇವರು ಗಲಭೆಯಲ್ಲಿ ಭಾಗಿಯಾಗದಿದ್ದರೂ, ತೆರೆಮರೆಯಲ್ಲೇ ಕುಳಿತು ದುಷ್ಕರ್ಮಿಗಳಿಗೆ ಎಲ್ಲಾ ರೀತಿಯ ಬೆಂಬಲ ನೀಡಿರುವುದು, ಹಣಕಾಸಿನ ನೆರವು, ಜಾಮೀನಿಗೆ ಸಹಾಯ, ಕುಟುಂಬಕ್ಕೆ ಸಹಾಯ ಒದಗಿಸುವುದು ಸೇರಿದಂತೆ ಪ್ರತಿಯೊಂದು ನೆರವು ನೀಡುವುದಾಗಿ ಭರವಸೆ ಕೊಟ್ಟಿರುವುದನ್ನು ಇದಾಗಲೇ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಡಿಜೆಹಳ್ಳಿ ಗಲಭೆಯಲ್ಲಿ ಉಗ್ರರ ಕೈವಾಡ?
ಕಲ್ಲಿಕೋಟೆ, ಇಡುಕ್ಕಿ, ಕಾಸರಗೂಡು, ತಿರುವಂನಪುರ ಸೇರಿದಂತೆ ಕೇರಳದ ಕೆಲವು ಪ್ರದೇಶಗಳಲ್ಲಿ ಈ ಕಿಡಿಗೇಡಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಕೇಂದ್ರ ಗುಪ್ತಚರ ವಿಭಾಗ ರಾಜ್ಯಕ್ಕೆ ಮಾಹಿತಿ ರವಾನಿಸಿದೆ. ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಕೇರಳದ ಕೆಲವು ರಹಸ್ಯ ಸ್ಥಳಗಳಿಂದ ಬೆಂಗಳೂರಿಗೆ ಮೊಬೈಲ್ ಕರೆಗಳು ಬಂದಿರುವುದನ್ನು ಪತ್ತೆ ಹಚ್ಚಿದ್ದಾರೆ.
ಆರೋಪಿಗಳು ಗಲಭೆ ನಡೆಸಲು ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿಕೊಂಡಿದ್ದರು ಎಂಬ ಮಾಹಿತಿ ಇದೆ. ಗಲಭೆ ಪ್ರಕರಣಕ್ಕೆ ಸಂಬಂಸಿದಂತೆ 309 ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿದ್ದು, ಕೆಲವು ಆರೋಪಿಗಳ ಮೊಬೈಲ್ಗಳನ್ನು ವಶಕ್ಕೆ ಪಡೆದು, ನಿರಂತರವಾಗಿ ಮಾಡಿರುವ ಕರೆಗಳ ಮಾಹಿತಿ ಸಂಗ್ರಹಿಸಲಾಗಿದೆ.
ಈ ನಡುವೆಯೇ ಆರೋಪಿಗಳು ಎಲ್ಲಿಯೇ ಇದ್ದರೂ ಅವರನ್ನು ಬಿಡದಂತೆ ಪೊಲೀಸರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಯಿ ಅವರು ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ, ಸಿಸಿಬಿಯ ಒಂದು ತಂಡ ಈಗಾಗಲೇ ಕೇರಳಕ್ಕೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಮೇಲೆ ನೋಡಿದಷ್ಟು ಸುಲಭವಾಗಿ ಕಾಣುತ್ತಿಲ್ಲ. ಇದು ನವೀನ್ ಎಂಬ ಯುವಕ ಹಾಕಿರುವ ಪೋಸ್ಟ್ನಿಂದ ಆಗಿರುವ ಗಲಭೆ ಅಲ್ಲ, ಬದಲಿಗೆ ಎಲ್ಲರೂ ಪ್ರೀಪ್ಲ್ಯಾನ್ಡ್ ಎನ್ನುವುದು ಇದಾಗಲೇ ಪೊಲೀಸರ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಪ್ರಕರಣದ ಆಳಕ್ಕೆ ಹೋಗಲು ತನಿಖೆ ನಡೆಸುತ್ತಿದ್ದಾರೆ. ಇದು ತಿಳಿಯುತ್ತಲೇ ಕೆಲವು ಕಿಡಿಗೇಡಿ ಮುಖಂಡರು ರಾತ್ರೋರಾತ್ರಿಯೇ ಮನೆ ಖಾಲಿ ಮಾಡಿಕೊಂಡು ತಮ್ಮ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಗಲಭೆ ನಡೆಸಿದವರು ಮಾತ್ರವಲ್ಲದೇ, ಇದಕ್ಕೆ ಕುಮ್ಮಕ್ಕು ನೀಡಿದರನ್ನೂ ಬಂಧಿಸಲು ಸಿಸಿಬಿ ಮುಂದಾಗಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಒಂದು ಸಮುದಾಯದ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಆರಂಭವಾದ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮೂವರು ಗಲಭೆಯಲ್ಲಿ ಮೃತಪಟ್ಟಿದ್ದರು.
ಡಿಜೆಹಳ್ಳಿ ವಿವಾದ: ಕಂಪ್ಲೇಂಟ್ನಲ್ಲಿ ಯೂ ಟರ್ನ್- ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಪಾಷಾ ದೂರು!
ಸೆಪ್ಟೆಂಬರ್ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್ಕುಮಾರ್ ಏನು ಹೇಳಿದ್ದಾರೆ ಕೇಳಿ…
ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!
ಪಾಕ್ಗೆ ಬಿಗ್ ಷಾಕ್: ಸಾಲವೂ ಬಂದ್, ತೈಲವೂ ಬಂದ್ ಎಂದ ಸೌದಿ ಅರೇಬಿಯಾ!
ಫ್ರಿಜ್ ಟ್ರೇ ಬಳಸಿ ಆನ್ಲೈನ್ ಕ್ಲಾಸ್: ಶಿಕ್ಷಕಿಯ ಪ್ಲ್ಯಾನ್ಗೆ ಅಪಾರ ಮೆಚ್ಚುಗೆ
ದಫನ್ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!
ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ