ಚಿಕ್ಕಮಗಳೂರು: ಧೈರ್ಯಂ ಸರ್ವತ್ರ ಸಾಧನಂ ಎನ್ನುವುದು ತೀರಾ ಹಳೆಯ ನಾಣ್ಣುಡಿ, ಧೈರ್ಯವೊಂದಿದ್ದರೆ ಎಂಥದ್ದನ್ನಾದರೂ ಸಾಧಿಸಬಹುದು ಎನ್ನುತ್ತಾರೆ. ಅಂಥದ್ದೇ ಒಂದು ಧೈರ್ಯವನ್ನು ಮಾಡಿದ ಮಹಿಳೆಯೊಬ್ಬರಿಂದ ಚಿನ್ನದಂಗಡಿಯ ಮಾಲೀಕನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುವುದು ತಪ್ಪಿದೆ.
ಇಂಥದ್ದೊಂದು ಘಟನೆ ನಡೆದಿರುವುದು ಚಿಕ್ಕಮಗಳೂರಿನ ಶೃಂಗೇರಿಯಲ್ಲಿ. ಚಿನ್ನದಂಗಡಿಗೆ ನುಗ್ಗಿದ್ದ ಕಳ್ಳನನ್ನು ರೋಚಕ ರೀತಿಯಲ್ಲಿ ಮಹಿಳೆ ಹೊಡೆದೋಡಿಸಿದ್ದು, ಇದು ಸಿಸಿಟಿಯಲ್ಲಿ ಸೆರೆಯಾಗಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಉದ್ದನೆಯ ಮಚ್ಚನ್ನು ಹಿಡಿದು ಬಂದ ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಧರಿಸಿದ್ದ. ಏಕಾಏಕಿ ನಾಗಪ್ಪ ಶೇಟ್ ಎನ್ನುವವರ ಚಿನ್ನದ ಅಂಗಡಿಗೆ ನುಗ್ಗಿದ್ದಾನೆ. ಅಲ್ಲಿ ಕೆಲಸಕ್ಕೆ ಇದ್ದವರೆಲ್ಲರೂ ಮಹಿಳೆಯರೇ. ಅದನ್ನು ಮೊದಲೇ ಅರಿತಿದ್ದ ಕಳ್ಳ, ವೀರಾವೇಷವಾಗಿ ಬಂದು ತನ್ನ ಕೈಯಲ್ಲಿದ್ದ ಮಚ್ಚನ್ನು ಝಳಪಿಸಿದ್ದಾನೆ. ಇದನ್ನು ನೋಡಿದ ಮಹಿಳಾ ಸಿಬ್ಬಂದಿ ಅಕ್ಷರಶಃ ಬೆದರಿ ಹೋಗಿದ್ದಾರೆ.
ಇನ್ನೇನು ಅಲ್ಲಿರುವ ಲಕ್ಷಾಂತರ ರೂಪಾಯಿ ಚಿನ್ನಾಭರಣ ತನ್ನದೇ ಎಂದು ಕನಸು ಕಾಣುತ್ತಿದ್ದ ವೇಳೆಯೇ ಮಹಿಳಾ ಸಿಬ್ಬಂದಿಯೊಬ್ಬರು ತಮ್ಮಲ್ಲಿರುವ ಎಲ್ಲಾ ಧೈರ್ಯವನ್ನೂ ಒಟ್ಟುಮಾಡಿಕೊಂಡು, ಸಮಯಸಾಧಿಸಿ, ಆ ಕಳ್ಳನನ್ನೇ ಚಚ್ಚಿಬಿಟ್ಟಿದ್ದಾರೆ.
ಇದನ್ನೂ ಓದಿ: ಕಳೆದ ವರ್ಷದ ಇದೇ ಸಮಯ ನೆನೆದು ದುಃಖಿಸಿದ ಪ್ರಣಬ್ ಮುಖರ್ಜಿ ಪುತ್ರಿ
ಅವರು ಮಾಡಿದ್ದೇನೆಂದರೆ, ಈ ಮಹಿಳೆಯರು ತನಗೇನೂ ಮಾಡಲು ಸಾಧ್ಯವಿಲ್ಲ ಎಂದು ಕಳ್ಳ ಖುಷಿಯಲ್ಲಿ ಸ್ವಲ್ಪ ಅತ್ತ ನೋಡಿದ್ದಾಗ, ಈ ಮಹಿಳೆ ಅಲ್ಲಿರುವ ಖುರ್ಚಿಯನ್ನು ಎತ್ತಿಕೊಂಡು, ಆತನ ಕೈಯಲ್ಲಿ ಹರಿತವಾಗಿರುವ ಕತ್ತಿ ಇರುವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಆತನ ತಲೆಯ ಮೇಲೆ ಖುರ್ಚಿಯಿಂದ ಚಚ್ಚಿದ್ದಾರೆ.
ಏಕಾಏಕಿ ದಾಳಿಗೆ ಹೆದರಿದ ಕಳ್ಳ ತನ್ನ ಕೈಯಲ್ಲಿದ್ದ ಮೂರು ಸರವನ್ನು ಮಾತ್ರ ಎತ್ತಿಕೊಂಡು ಪರಾರಿಯಾಗಿದ್ದಾನೆ. ಮಹಿಳೆಯರ ಚೀರಾಟ ಕೇಳಿದ ಅಕ್ಕಪಕ್ಕದವರು ಆತನನ್ನು ಹಿಡಿಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಫ್ರಿಜ್ ಟ್ರೇ ಬಳಸಿ ಆನ್ಲೈನ್ ಕ್ಲಾಸ್: ಶಿಕ್ಷಕಿಯ ಪ್ಲ್ಯಾನ್ಗೆ ಅಪಾರ ಮೆಚ್ಚುಗೆ
ಪಾಕ್ಗೆ ಬಿಗ್ ಷಾಕ್: ಸಾಲವೂ ಬಂದ್, ತೈಲವೂ ಬಂದ್ ಎಂದ ಸೌದಿ ಅರೇಬಿಯಾ!