ಬೆಂಗಳೂರು: ಗುಜರಾತ್ಗೆ ಆರಂಭದಲ್ಲೇ ಆಘಾತ ನೀಡುವ ಮೂಲಕ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವೇಗಿ ಮೊಹಮದ್ ಸಿರಾಜ್ (29ಕ್ಕೆ 2), ಅನಾರೋಗ್ಯದ ನಡುವೆ ಪಂದ್ಯ ಆಡಿದ್ದಾಗಿ ಬಹಿರಂಗಪಡಿಸಿದ್ದಾರೆ.
“ನಾನು ಕಳೆದ ಕೆಲ ದಿನಗಳಿಂದ ಅಸ್ವಸ್ಥಗೊಂಡಿದ್ದೆ. ಈ ಪಂದ್ಯವನ್ನು ಆಡಲು ಸಾಧ್ಯವಾಗದಿರಬಹುದು ಎಂಬ ಭೀತಿಯಲ್ಲಿದ್ದೆ. ಬೆಳಗ್ಗೆ ಎದ್ದಾಗ ಸ್ವಲ್ಪ ಚೇತರಿಕೆ ಕಂಡಿದ್ದೆ. ದೇವರ ದಯೆಯಿಂದ ಆಡುವ ಅವಕಾಶವೂ ಲಭಿಸಿತು. ಏಕದಿನ ವಿಶ್ವಕಪ್ ನಂತರದಲ್ಲಿ ವೈಟ್ಬಾಲ್ ಕ್ರಿಕೆಟ್ನಲ್ಲಿ ಹೆಚ್ಚು ಆಡಿರಲಿಲ್ಲ. ಹೀಗಾಗಿ ನಾನು ಸ್ವಲ್ಪ ಲಯ ತಪ್ಪಿದ್ದೆ. ಹೆಚ್ಚು ಹೆಚ್ಚು ಅಭ್ಯಾಸ ನಡೆಸಿದ್ದರಿಂದ ಈ ಫಲ ದೊರೆತಿದೆ’ ಎಂದು ಸಿರಾಜ್ ವಿವರಿಸಿದರು.
ಐಪಿಎಲ್ನಲ್ಲಿ ಕಳೆದ ಕೆಲ ಪಂದ್ಯಗಳಲ್ಲಿ ನೀರಸ ನಿರ್ವಹಣೆ ತೋರಿರುವ ನಡುವೆಯೂ ಮುಂಬರುವ ಟಿ20 ವಿಶ್ವಕಪ್ಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ವೇಗಿ ಮೊಹಮದ್ ಸಿರಾಜ್, ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಪರ ಅಮೋಘ ಬೌಲಿಂಗ್ ನಿರ್ವಹಣೆ ತೋರುವ ಮೂಲಕ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡರು. ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವುದನ್ನು ಪ್ರಶ್ನಿಸುತ್ತಿದ್ದವರಿಗೆ ದಿಟ್ಟ ಉತ್ತರವನ್ನೂ ನೀಡಿದರು. 4 ಓವರ್ಗಳ ದಾಳಿಯಲ್ಲಿ 29 ರನ್ಗಳಿಗೆ 2 ವಿಕೆಟ್ ಪಡೆದ ಸಿರಾಜ್, ಪ್ರಮುಖವಾಗಿ ಪವರ್ಪ್ಲೇನಲ್ಲೇ ಗುಜರಾತ್ ತಂಡದ ಸದ್ದಡಗಿಸಿದರು. ಇದಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.