ಮುಂಬೈ: ಭಾರತೀಯ ಮೂಲದ ಯುನೈಟೆಡ್ ಕಿಂಗ್ಡಮ್ ಪ್ರಜೆಯೊಬ್ಬರು ಗಂಭೀರ ಆರೋಪ ಮಾಡಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಕೋವಿಡ್ ಪರೀಕ್ಷೆ ಮತ್ತು ಕ್ವಾರೆಂಟೈನ್ ಪ್ರೊಟೋಕಾಲ್ ಹಣ ಮಾಡುವ ಹಗರಣ ಎಂದು ದೂರಿದ್ದಾರೆ.
ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೋಳ್ಳಲು ಮನೋಜ್ ಲಾಡ್ವಾ ಎಂಬುವರು ತನ್ನ ಪತ್ನಿ ಜತೆ ಡಿಸೆಂಬರ್ 30ರಂದು ಮುಂಬೈಗೆ ಬಂದಿಳಿದರು. ವಿಮಾನ ನಿಲ್ದಾಣದ ಕೋವಿಡ್ ಕೇಂದ್ರದಲ್ಲಿ ಪರೀಕ್ಷಿಸಿದಾಗ ಮನೋಜ್ ಅವರಿಗೆ ಕರೊನಾ ಪಾಸಿಟಿವ್ ವರದಿ ಬಂದಿತು. ಆದರೆ, ಲಂಡನ್ನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಹೊರಡುವ ಮುನ್ನ ತೆಗೆದುಕೊಂಡಿದ್ದ ಕೋವಿಡ್ ವರದಿಯಲ್ಲಿ ನೆಗಿಟಿವ್ ಇತ್ತು. ಹೀಗಾಗಿ ಖಚಿತತೆಗಾಗಿ ಮತ್ತೊಮ್ಮೆ ಪರೀಕ್ಷೆ ಮಾಡುವಂತೆ ಮನೋಜ್ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕೇಳಿಕೊಂಡರು. ಆದರೆ, ಅದನ್ನು ನಿರಾಕರಿಸಲಾಯಿತು. ಇದಾದ ತಕ್ಷಣ ಮನೋಜ್ ಅವರನ್ನು ಸರ್ಕಾರಿ ನಿರ್ಮಿತ ಕ್ವಾರೆಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಿದ್ದರಿಂದ ಅವರು ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಲಂಡನ್ನಿಂದ ಬಂದ ಉದ್ದೇಶವೇ ಈಡೇರಲಿಲ್ಲ. ಸಮಯದ ಜತೆಗೆ ಹಣವೂ ವ್ಯರ್ಥವಾಯಿತು.
ಇದಾದ ಬಳಿಕ ತೀವ್ರವಾಗಿ ಬೇಸರಗೊಂಡಿದ್ದ ಮನೋಜ್ ಅವರು ಫೇಸ್ಬುಕ್ ಲೈವ್ ಬಂದು ವಿಮಾನ ನಿಲ್ದಾಣದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರಹಾಕುವ ಮೂಲಕ ಗಂಭೀರ ಆರೋಪಗಳನ್ನು ಮಾಡಿದರು. ಬಾಂಬೆ ವಿಮಾನ ನಿಲ್ದಾಣದಲ್ಲಿ ನನಗೆ ಮಾಂತ್ರಿಕವಾಗಿ ಕರೊನಾ ಪಾಸಿಟಿವ್ ವರದಿ ಬಂದಿತು. ನಾವು ಪ್ರಯಾಣಿಸಿದ ವಿಮಾನದಲ್ಲೇ ಯುವಕ-ಯುವತಿಯರಿದ್ದರು. ಅವರೆಲ್ಲರಿಗೂ ಲಂಡನ್ ಏರ್ಪೋರ್ಟ್ನಲ್ಲಿ ನೆಗಿಟಿವ್ ಇದ್ದ ವರದಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಸಿಟಿವ್ ಬಂದಿದೆ. ಇದನ್ನೆ ಪ್ರಶ್ನೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸುವಂತೆ ಆಪ್ತರ ಬಳಿ ಒತ್ತಾಯಿಸಿದ್ದಾರೆ.
ನಾನು ನನ್ನ ಮಾವ ಅವರ ಅಂತ್ಯಕ್ರಿಯೆಗೆ ಹೋಗಲು ಪ್ರಯತ್ನಿಸುತ್ತಿದ್ದೇನೆ. ಪತ್ನಿ ಶರ್ಮಿಲಿ ಅವರ ತಂದೆ 24 ಗಂಟೆಗಳ ಹಿಂದೆ ನಿಧನರಾದರು. ನಾವು ಭಾರತಕ್ಕೆ ಹೋಗಲು ಧಾವಿಸಿದೆವು ಮತ್ತು ಈ ಜನರು ನಮ್ಮಿಂದ ಹೆಚ್ಚಿನ ಹಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದು ಕೇವಲ ಅವಾಸ್ತವವಾಗಿದೆ ಎಂದು ಲಾಡ್ವಾ ಆರೋಪಿಸಿದ್ದಾರೆ. (ಏಜೆನ್ಸೀಸ್)
ಭೋಜಪುರಿಯಲ್ಲಿ ಹರ್ಷಿಕಾ ಹ್ಯಾಟ್ರಿಕ್; ‘ಸನಮ್ ಮೇರೆ ಹಮ್ರಾಝ್’ ಚಿತ್ರದಲ್ಲಿ ನಟನೆ
ಆರ್ಆರ್ಆರ್ ಪ್ರಚಾರ ವ್ಯರ್ಥ; ಬಿಡುಗಡೆ ಮುಂದೂಡಿಕೆಯಿಂದಾಗಿ 20 ಕೋಟಿ ರೂಪಾಯಿ ನಷ್ಟ