ಬೆಂಗಳೂರು: ನೀರಿನ ಸಂಪ್ ಅಗೆಯುವಾಗ ನಿಧಿ ಸಿಕ್ಕಿದೆ ಎಂದು ತಮಿಳುನಾಡಿನ ಖ್ಯಾತ ಹೊಟೇಲ್ ಉದ್ಯಮಿಗೆ ಖತರ್ನಾಕ್ ವ್ಯಕ್ತಿಯೊಬ್ಬ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಮಿಳುನಾಡಿನ ಪ್ರಸಿದ್ಧ ಸ್ವಾಮಿ ಚಿಕನ್ ಚೆಟ್ಟಿನಾಡ್ ಹೊಟೇಲ್ ಮಾಲೀಕ ಮುರುಘಾನಾಥಂಗೆ ವಂಚನೆ ಮಾಡಲಾಗಿದೆ. ಅರ್ಜುನ್ ಎಂಬಾತ 15 ಲಕ್ಷ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.
ನಿಮ್ಮ ಹೊಟೇಲ್ ತಿಂಡಿ ಚೆನ್ನಾಗಿದೆ ಎಂದು ಹೊಟೇಲ್ ಮಾಲೀಕನನ್ನು ಆರೋಪಿ ಅರ್ಜುನ್, ಪರಿಚಯ ಮಾಡಿಕೊಂಡಿದ್ದ. ಚೆನ್ನೈನಲ್ಲಿಯೇ ಕೆಲಸ ಮಾಡ್ತಿರೋದಾಗಿ ಹೇಳಿಕೊಂಡಿದ್ದ. ನನ್ನ ಮನೆಯ ಸಂಪ್ ಅಗೆಯುವಾಗ 5 ಮಣಿಹಾರದ ನಿಧಿ ಸಿಕ್ಕಿದೆ ಎಂದು ಹೇಳಿದ್ದ. ಎರಡು ಮಣಿಗಳನ್ನು ಮಾಲೀಕನಿಗೆ ನೀಡಿ, ಬೇಕಿದ್ದರೆ ಒಮ್ಮೆ ಪರಿಶೀಲನೆ ನಡೆಸಿ ಎಂದು ಕೊಟ್ಟು ಬಂದಿದ್ದ.
ಪರೀಕ್ಷಿಸಿದಾಗ ಅಸಲಿ ಚಿನ್ನ ಎಂದು ಗೊತ್ತಾಗಿದೆ. ಇದರಿಂದ ಅತಿಯಾಸೆಗೆ ಬಿದ್ದ ಹೋಟೆಲ್ ಮಾಲೀಕ, ಮಣಿ ಸರವನ್ನು ಚೆನ್ನೈನ ರೇಸ್ ಕೋರ್ಸ್ ಬಳಿ ತರಲು ಹೇಳಿದ್ದ. ನಂತರ ಅದರಲ್ಲಿದ್ದ ಮತ್ತೆ ನಾಲ್ಕು ಮಣಿಗಳನ್ನು ಪರಿಶೀಲನೆ ನಡೆಸಿದಾಗ ಅದೂ ಕೂಡ ಅಸಲಿಯಾಗಿತ್ತು. ನಂತರ ಮೂರು ದಿನಗಳ ಬಳಿಕ ಕರೆ ಮಾಡಿದ ಅರ್ಜುನ್ ಒಂದು ಕೆಜಿ ಮಣಿಗೆ 25 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ. ಆದರೆ ಮೊದಲು ಸ್ವಲ್ಪ ತೆಗೆದುಕೊಳ್ಳುವುದಾಗಿ ಹೋಟೆಲ್ ಮಾಲೀಕ 15 ಲಕ್ಷ ರೆಡಿ ಮಾಡಿದ್ದ.
ಬೆಂಗಳೂರಿನಲ್ಲಿ ಮಣಿಗಳನ್ನು ಕೊಡುವುದಾಗಿ ಹೇಳಿ ಅರ್ಜುನ್ ಆ್ಯಂಡ್ ಟೀಂ ಹೋಟೆಲ್ ಮಾಲೀಕನ್ನು ಕರೆಸಿಕೊಂಡಿದ್ದರು. ಕೆಎಸ್ಆರ್ಟಿಸಿ ಮೂರನೇ ಮುಖ್ಯ ದ್ವಾರದ ಬಳಿ ಕರೆಸಿಕೊಂಡಿದ್ದ ಆರೋಪಿಗಳು, ಆತನಿಂದ 15 ಲಕ್ಷ ಪಡೆದು ನಕಲಿ ಮಣಿಗಳನ್ನು ನೀಡಿ ಪರಾರಿಯಾಗಿದ್ದಾರೆ. ಬಳಿಕ ಮಣಿಗಳೆಲ್ಲ ನಕಲಿ ಎಂದು ಮಾಲೀಕನಿಗೆ ಗೊತ್ತಾಗಿದ್ದು, ಅರ್ಜುನ್ ಹಾಗೂ ಮಹಿಳೆ ಸೇರಿ ಮೂವರು ವಂಚನೆ ಮಾಡಿದ್ದಾರೆಂದು ಮಾಲೀಕ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಉಪ್ಪಾರಪೇಟೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್)
ಅತಿಥಿಗಳ ಗೋಳಿಗಿಲ್ಲ ಕೊನೆ; ಬೀದಿಗೆ ಬಿದ್ದ ವಸತಿ ಶಾಲೆಗಳ ಅತಿಥಿ ಶಿಕ್ಷಕರು