More

    ಅಣ್ಣಾಮಲೈಗಿಂತ ಪತ್ನಿಯೇ ಶ್ರೀಮಂತೆ! ಮಾಜಿ ಐಪಿಎಸ್​ ಅಧಿಕಾರಿ ಬಳಿಯಿರುವ ಒಟ್ಟು ಆಸ್ತಿ ಎಷ್ಟು?

    ಕೊಯಮತ್ತೂರು: ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿರುವ ಮಾಜಿ ಐಪಿಎಸ್​ ಅಧಿಕಾರಿ ಹಾಗೂ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಕೊಯಮತ್ತೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಈ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ ಎಂದು ಹೇಳಿದರು.

    ಅಣ್ಣಾಮಲೈ ನಾಮಪತ್ರ ಸಲ್ಲಿಕೆ ಕಾರ್ಯ ಬಿಜೆಪಿಯ ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟಿತ್ತು. ಬಿಜೆಪಿಯ ಧ್ವಜಗಳನ್ನು ಹಿಡಿದ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿದರು. ಇದಕ್ಕೂ ಮುನ್ನ ಅಣ್ಣಾಮಲೈ ಟೌನ್​ ಹಾಲ್​ ಬಳಿಯಿರುವ ಕೊನಿಯಮ್ಮನ್​ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಆ ಬಳಿಕ ನಾಮಪತ್ರ ಸಲ್ಲಿಸಿದರು. ಈ ವೇಳೆ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷೆ ವಾನತಿ ಶ್ರೀನಿವಾಸನ್​ ಕೂಡ ಅಣ್ಣಾಮಲೈಗೆ ಸಾಥ್​ ನೀಡಿದರು.

    ಚುನಾವಣಾಧಿಕಾರಿಗೆ ಸಲ್ಲಿಸಿದ ನಾಮಪತ್ರದಲ್ಲಿ ಅಣ್ಣಾಮಲೈ ಅವರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಅವರ ಬಳಿ ಒಟ್ಟು 1.48 ಕೋಟಿ ರೂಪಾಯಿ ಆಸ್ತಿ ಇದೆ. ಇದರಲ್ಲಿ 1.12 ಕೋಟಿ ಸ್ಥಿರಾಸ್ತಿಯಾಗಿದೆ. 36 ಲಕ್ಷ ರೂ. ಚರಾಸ್ತಿ ಇದೆ. ಅಣ್ಣಾಮಲೈ ಅವರು 52 ಎಕರೆ ಜಮೀನು ಹೊಂದಿದ್ದು, ಬಹುತೇಕ ಜಮೀನು ಕರೂರು ಜಿಲ್ಲೆಯ ತಮ್ಮ ಸ್ವಗ್ರಾಮದಲ್ಲೇ ಇದೆ.

    ಇನ್ನೂ ಅಫಿಡೆವಿಟ್​ ಪ್ರಕಾರ ಅಣ್ಣಾಮಲೈಗಿಂತ ಅವರ ಪತ್ನಿ ಅಖಿಲಾ ಅವರ ಶ್ರೀಮಂತರು. ಅವರ ಬಳಿ 2.3 ಕೋಟಿ ರೂ. ಚರಾಸ್ತಿ ಮತ್ತು 53 ಲಕ್ಷ ರೂ. ಸ್ಥಿರಾಸ್ತಿ ಇದೆ.

    Annamalai K

    ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಣ್ಣಾಮಲೈ, ಅಲ್ಪಸಂಖ್ಯಾತರು ಸೇರಿದಂತೆ ಕೊಯಮತ್ತೂರಿನ ಜನರು ನನ್ನನ್ನು ಬೆಂಬಲಿಸಲು ನಿರ್ಧರಿಸಿರುವುದರಿಂದ ನನ್ನ ಗೆಲುವು ಭದ್ರವಾಗಿದೆ. ನಾನು ಬೆಳಗ್ಗೆ ಕೊನಿಯಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಕೊಯಮತ್ತೂರಿನ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದೆ ಹೊರತು ನನ್ನ ವಿಜಯಕ್ಕಾಗಿ ಅಲ್ಲ. ಕೊಯಮತ್ತೂರಿನ ಜನರು ನನ್ನ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸುತ್ತಿದ್ದಾರೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಸಿಪಿಎಂ ಸಂಸದ ಪಿಆರ್ ನಟರಾಜನ್ ಮತ್ತು ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಣ್ಣಾಮಲೈ, ಕೊಯಮತ್ತೂರಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಥವಾ ಕೊಯಮತ್ತೂರು ಸಂಸದರು ಕೊಡುಗೆ ನೀಡಿಲ್ಲ. ಇವರು ಕೊಯಮತ್ತೂರಿನ ಅಭಿವೃದ್ಧಿಗೆ ವಿರುದ್ಧವಾಗಿದ್ದಾರೆ ಎಂದು ಕಿಡಿಕಾರಿದರು.

    ಅಣ್ಣಾಮಲೈ ನಾಮಪತ್ರ ಸಲ್ಲಿಸಿದ ದಿನದ ಕೊನೆಯಲ್ಲಿ ಕೊಯಮತ್ತೂರು ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್‌ಕುಮಾರ್ ಕೂಡ ನಾಮಪತ್ರ ಸಲ್ಲಿಸಿದರು. (ಏಜೆನ್ಸೀಸ್​)

    ಆ ರೀತಿಯ ಸಿನಿಮಾಗಳನ್ನು ನೋಡಲ್ಲ ಅವಕಾಶ ಸಿಕ್ಕರೆ ಬಿಡಲ್ಲ: ನಟಿ ಆಂಡ್ರಿಯಾ ಓಪನ್​ ಟಾಕ್​

    ಹಾರ್ದಿಕ್​​ ಪಾಂಡ್ಯಗೆ ಈ ಸ್ಥಿತಿ ಬರಬಾರದಿತ್ತು… ಉರಿಯುವ ಬೆಂಕಿಗೆ ತುಪ್ಪ ಸುರಿದ ಸೂರ್ಯಕುಮಾರ್​ ಯಾದವ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts