
ಮೂಡುಬಿದಿರೆ: ಇಲ್ಲಿನ ಜೈನಮಠದ ವ್ಯಾಪ್ತಿಗೆ ಒಳಪಟ್ಟ ಕಲ್ಸಂಗ ಬಳಿಯ ಮೂಲ ನಾಗಸ್ಥಾನ ಪುನರ್ ಜೀರ್ಣೋದ್ಧಾರಗೊಂಡಿದ್ದು, ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಬುಧವಾರ ನಾಗಶಿಲಾ ಪ್ರತಿಷ್ಠಾಪನೆ ಹಾಗೂ ಆಶ್ಲೇಷಾ ಬಲಿ ನಡೆಯಿತು.
ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಮೂಡುಬಿದಿರೆ ಹಿಂದೆ ಉರಗಪುರ, ವಂಶಪುರ, ಬಿದಿರಿನಿಂದ ಆವೃತ್ತವಾದ ಕಾರಣ ಬಿದಿರೆ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಹಿಂದೆ ಕಲ್ಸಂಕ ಪ್ರದೇಶವು ನಾಗಸರೋವರ ಪ್ರದೇಶವಾಗಿತ್ತು. ಈಗಲೂ ಕಲ್ಸಂಕ ಪ್ರದೇಶದಲ್ಲಿ ತೊರೆ ಇದೆ. ಇಲ್ಲಿರುವ ಪ್ರಾಚೀನ ನಾಗಬನವಿದು. ರಾಹು–ಕೇತುವಿನ ದೋಷಗಳನ್ನು ದೂರ ಮಾಡುವಂತ ಕೇಂದ್ರವಾಗಿದೆ. ಇದನ್ನು ಜೀರ್ಣೋದ್ಧಾರ ಮಾಡುವ ಮೂಲಕ ಬಸದಿಗಳ, ಮಠದ ಜೀರ್ಣೋದ್ಧಾರ ಮಾಡುವಂಥ ಕೆಲಸಕ್ಕೆ ಮುಂದಡಿ ಇಟ್ಟಿದ್ದೇವೆ ಎಂದರು.
ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್– ಕರ್ಣಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ಪ್ರತಿಮಾ ದಂಪತಿ ಪೂಜಾರ್ಥಿಗಳಾಗಿದ್ದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಆದರ್ಶ್, ಪುರಸಭೆ ಸದಸ್ಯೆ ಶ್ವೇತಾ ಪ್ರವೀಣ್, ಇತಿಹಾಸ ತಜ್ಞ ಡಾ. ಪುಂಡಿಕಾ ಗಣಪಯ್ಯ ಭಟ್, ಮೂಡುಬಿದಿರೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್, ಪ್ರಮುಖರಾದ ಕೆ.ಪಿ. ಜಗದೀಶ್ ಅಧಿಕಾರಿ, ಶಂಭವ್ ಕುಮಾರ್, ಅಂಡಾರು ಗುಣಪಾಲ ಹೆಗ್ಡೆ, ಪ್ರವೀಣ್ಚಂದ್ರ ಜೈನ್, ಡಾ.ಎಸ್.ಪಿ. ವಿದ್ಯಾಕುಮಾರ್, ಡಾ. ಪ್ರಭಾತ್ಚಂದ್ರ, ಪಾರ್ಶ್ವನಾಥ ಇಂದ್ರ, ಶೈಲೇಂದ್ರ ಆರೋಹ, ಎಂಸಿಎಸ್ ಬ್ಯಾಂಕ್ನ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘವೀರ್ ಕಾಮತ್, ಮಠದ ವ್ಯವಸ್ಥಾಪಕ ಸಂಜಯಂತ್ ಶೆಟ್ಟಿ ಉಪಸ್ಥಿತರಿದ್ದರು.