ವಿಟ್ಲ: ಮುಚ್ಚಿರಪದವು ಫಾತಿಮಾ ಮಾತೆ ದೇವಾಲಯ ೧೪೦ ಕುಟುಂಬಗಳ ವ್ಯಾಪ್ತಿ ಹೊಂದಿದ್ದು, ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ. ೧.೨೫ ಕೋಟಿ ರೂ. ವೆಚ್ಚದಲ್ಲಿ ೬೦೦ ಆಸನದ ವ್ಯವಸ್ಥೆ ಹೊಂದಿರುವ ಸಮುದಾಯ ಭವನ ಲೋಕಾರ್ಪಣೆ ಮೇ ೫ರಂದು ಬೆಳಗ್ಗೆ ೧೦ ಗಂಟೆಗೆ ಮಂಗಳೂರು ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ ನೆರವೇರಿಸಲಿದ್ದಾರೆ ಎಂದು ಧರ್ಮಗುರು ಸೈಮನ್ ಡಿಸೋಜ ಹೇಳಿದರು.

೧೯೮೩ರಲ್ಲಿ ೬೦ ಕುಟುಂಬಗಳನ್ನು ಸೇರಿಸಿಕೊಂಡು ಮುಚ್ಚಿರಪದವು ಪ್ರಾರ್ಥನಾಲಯ ಪ್ರಾರಂಭಿಸಿದ್ದು, ೧೯೯೭ರಲ್ಲಿ ದೇವಾಲಯವಾಗಿ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಸಮುದಾಯ ಭವನವನ್ನು ಸರ್ಕಾರದ ೫೦ ಲಕ್ಷ ರೂ. ಅನುದಾನ ಹಾಗೂ ದಾನಿಗಳ ನೆರವಿನಿಂದ ನಿರ್ಮಾಣ ಮಾಡಲಾಗಿದೆ. ಚರ್ಚ್ ವ್ಯಾಪ್ತಿಯ ಮನೆಯವರು ಶ್ರಮಸೇವೆ ಮಾಡುವ ಮೂಲಕ ಕೊಡುಗೆ ನೀಡಿದ್ದಾರೆ. ಸಮುದಾಯ ಭವನ ಸರ್ವ ಸಮಾಜದ ಬಳಕೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಾಣ ಮಾಡಲಾಗಿದೆ. ನಿರ್ಮಾಣ ಕಾರ್ಯದಲ್ಲಿ ಶ್ರಮಸೇವೆ ನಡೆಸಿದ ಕುಟುಂಬಗಳಿಗೆ ರಿಯಾಯಿತಿ ನೀಡುವ ನಿಟ್ಟಿನಲ್ಲೂ ಅಗತ್ಯ ಕ್ರಮವಹಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಡೆನಿಸ್ ಮೊಂತೇರೋ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ, ಕಟ್ಟಡ ಸಮಿತಿ ಸಂಚಾಲಕರಾದ ಎಡ್ವರ್ಡ್ ಡಿಸೋಜ, ಪ್ರವೀಣ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ
ಬೆಳಗ್ಗೆ ೯.೧೫ಕ್ಕೆ ಪವಿತ್ರ ಬಲಿಪೂಜೆ ನಡೆಯಲಿದ್ದು, ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಕಿಶೋರ್ಕುಮಾರ್ ಬೊಟ್ಯಾಡಿ, ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಪೆರುವಾಯಿ ಜುಮಾ ಮಸೀದಿ ಅಲ್ ಹಾಜ್ ಮೊಹಮ್ಮದ್ ಶರೀಫ್ ಮದನಿ ಮತ್ತಿತರರು ಭಾಗವಹಿಸಲಿದ್ದಾರೆ. ಸಂಜೆ ೬ ಗಂಟೆಯಿಂದ ‘ಏರ್ಲಾ ಗ್ಯಾರಂಟಿ ಅತ್ತ್’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.