ಬೆಂಗಳೂರು: ಮೇ 12ರಂದು ಅಪಘಾತಕ್ಕೀಡಾಗಿ ದುರಂತ ಅಂತ್ಯ ಕಂಡಿದ್ದ ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅವರು ಇಹಲೋಕ ತ್ಯಜಿಸಿದ ವಾರ ಕಳೆಯುವುದರೊಳಗೆ ನಟ ಚಂದು ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಇನ್ನೂ ಈ ಕುರಿತು ಮಾತನಾಡಿರುವ ನಟಿ ಪವಿತ್ರಾ ಜಯರಾಮ್ ಪುತ್ರಿ ಸದ್ಯ ಎದ್ದಿರುವ ಉಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿಯಲ್ಲಿ ಮಾತನಾಡಿದ ನಟಿ ಪವಿತ್ರಾ ಅವರ ಪುತ್ರಿ ಪ್ರತೀಕ್ಷಾ, ಚಂದು ಅವರ ಸಾವಿನ ಸುದ್ದಿ ನಮಗೆ ಟಿವಿಯಲ್ಲಿ ನೋಡಿ ಗೊತ್ತಾಯ್ತು.ಚಂದು ಮತ್ತು ನಮ್ಮಮ್ಮ ಉತ್ತಮ ಸ್ನೇಹಿತರಾಗಿದ್ದರು. ಅವರ ಸಂಬಂಧದ ಬಗೆಗೆ ಏನೇನೋ ಮಾತಾಡ್ತಿದ್ದಾರೆ ಅದು ಸರಿಯಲ್ಲಾ ಅಮ್ಮನ ಸಾವಿಗೆ ಬಂದಿದ್ದ ಚಂದು ಅಂತ್ಯಕ್ರಿಯೆ ಆಗೊವರೆಗೂ ಇದ್ದು ಹೋಗಿದ್ದರು. ಹೈದರಾಬಾದ್ಗೆ ಹೋದ ನಂತರವೂ ಕರೆ ಮಾಡಿ ನಮ್ಮ ಬಗ್ಗೆ ವಿಚಾರಿಸುತ್ತಿದ್ದರು. ನಮಗೆ ಧೈರ್ಯ ತುಂಬುತ್ತಿದ್ದರು. ಆದರೆ, ಹೀಗಾಗಿರುವುದನ್ನು ನೋಡಿದರೆ ತುಂಬಾ ಬೇಸರವಾಗುತ್ತಿದೆ.
ಇದನ್ನೂ ಓದಿ: ಸಿಎಸ್ಕೆ ವಿರುದ್ಧ ಆರ್ಸಿಬಿ ಗೆದ್ದು ಪ್ಲೇಆಫ್ ಪ್ರವೇಶಿಸುವುದು ಕಷ್ಟಸಾಧ್ಯ; ಮಾಜಿ ಕ್ರಿಕೆಟಿಗರು ಹೀಗಂದಿದ್ಯಾಕೆ
ಅಮ್ಮ ಮತ್ತು ಚಂದು ಅವರು ಉತ್ತಮ ಸ್ನೇಹಿತರಾಗಿದ್ದರು. ಅವರು ಹೈದರಾಬಾದ್ಗೆ ತೆರಳಿ ಆರು ವರ್ಷಗಳಾಗಿತ್ತು. ಆಗಿನಿಂದಲೂ ಅಮ್ಮನಿಗೆ ಚಂದು ಅವರ ಪರಿಚಯವಿತ್ತು. ಇಬ್ಬರು ಒಂದೇ ಸೀರಿಯಲ್ನಲ್ಲಿ ನಟಿಸುತ್ತಿದ್ದರಿಂದ ಸಹ ನಟರ ಜೊತೆಗಿನ ಸಂಬಂಧ ಹೇಗಿರುತ್ತೋ ಅಮ್ಮ ಮತ್ತು ಚಂದು ಅವರ ಸಂಬಂಧವೂ ಹಾಗೆ ಇತ್ತು. ಅಮ್ಮ ಮತ್ತು ಅಪ್ಪನ ನಡುವಿನ ಸಂಬಂಧವೂ ಚೆನ್ನಾಗಿತ್ತು. ಮಾತನಾಡೋರು ಸಾವಿರ ತರ ಹೇಳುತ್ತಾರೆ. ಆದರೆ, ಅವರಿಬ್ಬರ ನಡುವೆ ಏನಿತ್ತು ಎಂದು ನಮಗೆ ಹಾಗೂ ಕುಟುಂಬದವರಿಗೆ ಚೆನ್ನಾಗಿ ತಿಳಿದಿತ್ತು.
ಅಮ್ಮನನ್ನ ಕಳೆದುಕೊಂಡು ನಾವು ಡಿಸ್ಟರ್ಬ್ ಆಗಿದ್ದೇವೆ. ಅವರು ಕುಟುಂಬದ ಆಧಾರಸ್ತಂಭವಾಗಿದ್ದರು. ಈಗ ಅವರು ಹೋದಮೇಲೆ ನನಗೂ ಹಾಗೂ ಅಣ್ಣನಿಗೂ ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ. ನಾವಿನ್ನೂ ಚಿಕ್ಕವರು ಅಮ್ಮನ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ. ಏಕೆಂದರೆ ನಮಗೂ ಫ್ಯೂಚರ್ ಇದೆ. ನಮ್ಮಷ್ಟಕ್ಕೆ ನಮ್ಮನ್ನು ಬದುಕಲು ಬಿಡಿ ಎಂದು ನಟಿ ಪವಿತ್ರಾ ಜಯರಾಮ್ ಅವರ ಪುತ್ರಿ ಪ್ರತೀಕ್ಷಾ ವಿನಂತಿಸಿಕೊಂಡಿದ್ದಾರೆ.