ಬೆಂಗಳೂರು: ಮೇ 18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ಕಿಂಗ್ಸ್ ನಡುವಿನ 68ನೇ ಐಪಿಎಲ್ ಪಂದ್ಯವು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಉಭಯ ತಂಡಗಳ ಅಭಿಮಾನಿಗಳ ನಿರೀಕ್ಷೆ ಗರಿಗೆದರಿಸುವಲ್ಲಿ ಯಶಸ್ವಿಯಾಗಿದೆ.
ಉಭಯ ತಂಡಗಳಿಗೂ ಈ ಪಂದ್ಯ ಲೀಗ್ ಹಂತದ ಕೊನೆಯ ಮ್ಯಾಚ್ ಆಗಿದ್ದು, ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಬೆಂಗಳೂರು ಹಾಗೂ ಚೆನ್ನೈ ತಂಡಕ್ಕೆ ಈ ಪಂದ್ಯ ನಾಕೌಟ್ ಪಂದ್ಯವಾಗಿದ್ದು, ಅಂತಿಮವಾಗಿ ಯಾವ ತಂಡ ಪ್ಲೇಆಫ್ ಪ್ರವೇಶಿಸಲಿದೆ ಎಂದು ಕಾದು ನೋಡಬೇಕಿದೆ. ಆದರೆ, ಚೆನ್ನೈ ವಿರುದ್ಧ ಬೆಂಗಳೂರು ಸೋಲಲಿದೆ ಎಂದು ಹೇಳುವ ಮೂಲಕ ಮಾಜಿ ಆಟಗಾರರು ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ವಿರುದ್ಧ ನಾನು ಆಡಿದ್ದರೆ ಇಷ್ಟೊತ್ತಿಗೆ….; ಲಖನೌ ವಿರುದ್ಧದ ಪಂದ್ಯದ ಬಳಿಕ ಶಾಕಿಂಗ್ ಹೇಳಿಕೆ ಕೊಟ್ಟ ರಿಷಭ್
17ನೇ ಆವೃತ್ತಿಯ ಐಪಿಎಲ್ನಲ್ಲಿ 65 ಪಂದ್ಯಗಳ ಮುಕ್ತಾಯದ ವೇಳೆಗೆ ರಾಜಸ್ಥಾನ ಹಾಗೂ ಕೆಕೆಆರ್ ಪ್ಲೇಆಫ್ ಪ್ರವೇಶಿಸಿವೆ. ಇನ್ನುಳಿದ 2 ಸ್ಥಾನಗಳಿಗಾಗಿ ಸನ್ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಕುತೂಹಲವನ್ನು ತಣಿಸುವಂತೆ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಅಂಬಾಟಿ ರಾಯುಡು, ಮೊಹಮ್ಮದ್ ಕೈಫ್, ಮ್ಯಾಥ್ಯೂ ಹೇಡನ್ ಮತ್ತು ಟಾಮ್ ಮೂಡಿ ಟಾಪ್-4 ತಂಡಗಳನ್ನು ಹೆಸರಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗರು ಸಿಎಸ್ಕೆ ವಿರುದ್ಧ ಆರ್ಸಿಬಿ ಗೆಲ್ಲುವುದು ಕಷ್ಟಸಾಧ್ಯ. ಹೀಗಾಗಿ ಸಿಎಸ್ಕೆ ಹಾಗೂ ಎಸ್ಆರ್ಎಚ್ ಪ್ಲೇಆಫ್ ಪ್ರವೇಶಿಸಲಿದೆ ಎಂದು ಐವರು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಅಂದರೆ ಕ್ರಿಕೆಟ್ ವಿಶ್ಲೇಷಕರ ಪ್ರಕಾರ ಆರ್ಸಿಬಿ ಈ ಬಾರಿ ಪ್ಲೇಆಫ್ ಪ್ರವೇಶಿಸುವುದಿಲ್ಲ. ಇದಾಗ್ಯೂ ಅಂತಿಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ಆರ್ಸಿಬಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಲಿದೆಯಾ ಕಾದು ನೋಡಬೇಕಿದೆ.