ಬೆಂಗಳೂರು: ಜ.19ರಂದು ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಖೋ ಖೋ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು 78-40 ಅಂತರದಲ್ಲಿ ಗೆದ್ದು ಬೀಗಿದ ಭಾರತ ಮಹಿಳಾ ತಂಡಕ್ಕೆ ದೇಶವ್ಯಾಪಿ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಫೈನಲ್ ಹಣಾಹಣಿಯಲ್ಲಿ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ ರಾಜ್ಯದ ಮೈಸೂರಿನ ಯುವತಿ ಬಿ. ಚೈತ್ರಾಗೆ (B Chaitra) ಭಾರತೀಯರಿಂದ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ.
ಇದನ್ನೂ ಓದಿ: ‘ಕಾಂತಾರ’ ಕಿಡಿ! ಚಿತ್ರತಂಡ ಷರತ್ತು ಉಲ್ಲಂಘಿಸಿದ್ದರೆ ಕ್ರಮ: ಅರಣ್ಯ ಸಚಿವ ಈಶ್ವರ ಖಂಡ್ರೆ | Kantara
ಗಮನಾರ್ಹ ಪ್ರದರ್ಶನ
ಅಟ್ಯಾಕಿಂಗ್ ಹಾಗೂ ಡಿಫೆಂಡಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ತೋರಿದ ಗ್ರಾಮೀಣ ಪ್ರತಿಭೆ, ಐದು ನಿಮಿಷಗಳ ಕಾಲ ನೇಪಾಳ ವಿರುದ್ಧ ‘ಡ್ರೀಮ್ ರನ್’ ಓಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಬಿ. ಚೈತ್ರಾ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಲ್ಲದೇ, ಅತ್ಯಂತ ಗಮನಾರ್ಹ ಪ್ರದರ್ಶನ ನೀಡಿದ್ದು ನೋಡುಗರ ಗಮನಸೆಳೆದಿದೆ. ಪುತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಪೋಷಕರಲ್ಲಿ ಅತೀವ ಸಂತಸ ಉಂಟುಮಾಡಿದೆ.
ಭಾವುಕರನ್ನಾಗಿ ಮಾಡಿತು
ರೈತ ದಂಪತಿಗಳಾದ ಬಸವಣ್ಣ ಮತ್ತು ನಾಗರತ್ನ ಅವರ ಹೆಮ್ಮೆಯ ಪುತ್ರಿ ಬಿ. ಚೈತ್ರಾ, ತಮ್ಮ ಪೋಷಕರಿಗೆ ಕೀರ್ತಿ ತಂದಿರುವುದು ಇದೀಗ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಿದೆ. ಚೈತ್ರಾ ಆಗಮನಕ್ಕೆ ಕಾದು ಕುಳಿತಿರುವ ಊರಿನ ಜನ, ಖೋ ಖೋ ಚಾಂಪಿಯನ್ಗೆ ಭವ್ಯ ಸ್ವಾಗತ ಕೋರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ವೇಳೆ ಚೈತ್ರಾ ಪೋಷಕರು ಮಾತನಾಡಿ, ಮಗಳು ಗೆದ್ದು ಬರುತ್ತಾಳೆ ಎಂಬುದು ಮುಂಚೆಯೇ ಗೊತ್ತಿತ್ತು ಎಂದಿದ್ದಾರೆ.
“ಫೈನಲ್ನಲ್ಲಿ ಮಗಳ ಆಟವನ್ನು ನೋಡಿದಾಗ ಬಹಳ ಖುಷಿಯಾಯಿತು. ತುಂಬ ಚೆನ್ನಾಗಿ ಆಡಿದ್ದಾಳೆ. ಅಷ್ಟು ಜನರ ಮಧ್ಯೆ ನಮ್ಮ ಪುತ್ರಿ ಕರ್ನಾಟದಿಂದ ಆಯ್ಕೆ ಆಗಿದ್ದೇ ನನಗೆ ಖುಷಿ ಕೊಟ್ಟಿತ್ತು. ಈಗ ದೇಶವೇ ಕೊಂಡಾಡುವಂತೆ ಮಾಡಿದ್ದಾಳೆ. ಬೆಸ್ಟ್ ಪ್ಲೇಯರ್ ಆಗಿ ಹೊರಹೊಮ್ಮಿದ್ದು ನಿಜಕ್ಕೂ ನಮ್ಮನ್ನು ಭಾವುಕರನ್ನಾಗಿ ಮಾಡಿತು. ಇಲ್ಲಿಂದ ಹೋಗುವ ಮುನ್ನವೇ ಅವಳು ಗೆದ್ದು ಬರುತ್ತೀನಿ ಎಂದಿದ್ದಳು. ನಮಗೂ ಅದೇ ವಿಶ್ವಾಸವಿತ್ತು. ಅಂತೆಯೇ ಗೆಲುವು ಸಾಧಿಸಿದ್ದಾಳೆ. ಮಗಳ ಸಾಧನೆಗೆ ಕೋಚ್ ಮಂಜುನಾಥ್ ಅವರ ಕೊಡುಗೆ ಅಪಾರ. ಅವರ ಶ್ರಮವು ಗೌರವಿಸುವಂತದ್ದು” ಎಂದು ಚೈತ್ರಾ ತಂದೆ ಭಾವುಕರಾಗಿ ಮಾತನಾಡಿದ್ದಾರೆ.
BBK11: ಗ್ರ್ಯಾಂಡ್ ಫಿನಾಲೆಯಲ್ಲಿ ಈ ಇಬ್ಬರು ಕಿಚ್ಚನ ಅಕ್ಕ-ಪಕ್ಕ! ಇದೇನಾ ಪಕ್ಕಾ?