ಬೆಂಗಳೂರು: ವಿದ್ಯುತ್ ಬಿಲ್ ವಸೂಲಿ ನೆಪದಲ್ಲಿ ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ವಂಚನೆ ಮಾಡುವ ಸೈಬರ್ ಕಳ್ಳರ ಹಾವಳಿ ತಪ್ಪಿಲ್ಲ. ವೃದ್ಧರೊಬ್ಬರಿಗೆ ಕರೆ ಮಾಡಿ ಬ್ಯಾಂಕ್ ಖಾತೆಗೆ 1.98 ಲಕ್ಷ ರೂ. ಕನ್ನ ಹಾಕಿರುವ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಸ್ವತಿನಗರ ನಿವಾಸಿ ಎ.ಆರ್.ಕೃಷ್ಣಮೂರ್ತಿ ಎಂಬುವರು ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಫೆ.2ರಂದು ಕೃಷ್ಣಮೂರ್ತಿ ಅವರ ಮೊಬೈಲ್ಫೋನ್ಗೆ ಕರೆ ಮಾಡಿರುವ ಸೈಬರ್ ಕಳ್ಳರು ಬೆಸ್ಕಾಂ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ‘ವಿದ್ಯುತ್ ಬಿಲ್ ಬಾಕಿ ಉಳಿದಿದೆ. ತಕ್ಷಣ ಪಾವತಿ ಮಾಡಬೇಕು. ಇಲ್ಲವಾದರೆ ನಿಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ’ ಎಂದಿದ್ದಾರೆ.
ಮಾತ್ರವಲ್ಲ, ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತ ಮಾಡುವುದನ್ನು ತಡೆಯುವಂತೆ ಕೋರಿಕೊಳ್ಳಲು ಮೊಬೈಲ್ಫೋನ್ ನಂಬರ್ವೊಂದನ್ನು ಕೊಟ್ಟಿದ್ದಾರೆ. ಹೆದರಿದ ಕೃಷ್ಣಮೂರ್ತಿ, ಆ ಮೊಬೈಲ್ಫೋನ್ ನಂಬರ್ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಮತ್ತೊಬ್ಬ ವಂಚಕ, ಆನ್ಲೈನ್ನಲ್ಲಿ ಪಾವತಿ ಮಾಡಿದರೆ ಬಿಲ್ ಅಪ್ಡೇಟ್ ಮಾಡುತ್ತೇವೆ. ನಿಮ್ಮ ಮೊಬೈಲ್ಗೆ ಲಿಂಕ್ ಕಳುಹಿಸುತ್ತೆವೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊದಲು 10 ರೂ. ಪಾವತಿ ಮಾಡಿ ಆನಂತರ ಉಳಿದ ಹಣವನ್ನು ಪಾವತಿ ಮಾಡುವಂತೆ ಸಲಹೆ ನೀಡಿದ್ದಾರೆ.
ನಂಬಿದ ಕೃಷ್ಣಮೂರ್ತಿ, ತಮ್ಮ ಮೊಬೈಲ್ಗೆ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿ 10 ರೂ. ಪಾವತಿ ಮಾಡಿದ್ದಾರೆ. ಆನಂತರ ದೂರುದಾರರ ಬ್ಯಾಂಕ್ ಖಾತೆಯಿಂದ ಸೈಬರ್ ಕಳ್ಳರು ಹಂತ ಹಂತವಾಗಿ 1.98 ಲಕ್ಷ ರೂ. ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ದಿಕ್ಕು ತೋಚದೆ ಕೊನೆಗೆ ಕೃಷ್ಣಮೂರ್ತಿ, ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಮೊಮ್ಮಗ, ಇಂದು ಅಜ್ಜ ಹುಲಿದಾಳಿಗೆ ಬಲಿ; ಇಬ್ಬರನ್ನು ಕೊಂದ ಹುಲಿಯನ್ನು ಶೂಟ್ ಮಾಡಿ ಸಾಯಿಸಿ ಎಂದು ಪಟ್ಟುಹಿಡಿದ ಜನರು