ಕೊಲ್ಕತಾ: ಪಶ್ಚಿಮ ಬಂಗಾಳದ ಸಿಎಂ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮೇಲೆ ದಾಳಿ ಆಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ನಂದಿಗ್ರಾಮ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಚುನಾವಣಾ ವೀಕ್ಷಕರ ವರದಿಗಳನ್ನು ಪರಿಶೀಲಿಸಿದ ನಂತರ ಆಯೋಗ ತನ್ನ ನಿರ್ಧಾರವನ್ನು ಭಾನುವಾರ ತಿಳಿಸಿದೆ.
ಖುದ್ದು ಮಮತಾ ಬ್ಯಾನರ್ಜಿ ತಮ್ಮನ್ನು ನಾಲ್ಕೈದು ಮಂದಿ ಉದ್ದೇಶಪೂರ್ವಕವಾಗಿ ತಳ್ಳಿದರು ಎಂದು ಹೇಳಿಕೆ ನೀಡಿದ ನಂತರ ಟಿಎಂಸಿ ತಮ್ಮ ನಾಯಕಿಯ ಮೇಲೆ ಸಂಚು ನಡೆಸಿ ದಾಳಿ ನಡೆಸಲಾಗಿದೆ ಎಂದು ಭಾರೀ ಗದ್ದಲ ಎಬ್ಬಿಸಿತ್ತು. ಚುನಾವಣಾ ಆಯೋಗವು ಬಂಗಾಳ ಡಿಜಿಪಿಯನ್ನು ತೆಗೆದುಹಾಕಿದ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಬ್ಯಾನರ್ಜಿ ಅವರ ಸುರಕ್ಷತೆಗೆ ಧಕ್ಕೆ ತಂದಿದೆ ಎಂದಿತ್ತು. ಅತ್ತ ಬಿಜೆಪಿಯು, ದೀದಿ ಮೇಲೆ ಯಾವುದೇ ದಾಳಿ ನಡೆದಿಲ್ಲ, ಚುನಾವಣಾ ಸಮಯಕ್ಕೆ ಆಕೆ ಡ್ರಾಮಾ ಮಾಡುತ್ತಿದ್ದಾರೆ ಎಂದು ಹೇಳಿತ್ತು.
ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !
ಈ ಬಗ್ಗೆ ಚುನಾವಣಾ ಆಯೋಗ ವರದಿ ಕೇಳಿದ ಮೇರೆಗೆ, ಚುನಾವಣಾ ವೀಕ್ಷಕರು ಶನಿವಾರ ಸಲ್ಲಿಸಿದ ವರದಿಯಲ್ಲಿ ಮಮತಾಗೆ ಪೆಟ್ಟಾಗಿರುವುದು ಆ್ಯಕ್ಸಿಡೆಂಟ್, ಉದ್ದೇಶಪೂರ್ವಕ ದಾಳಿಯಲ್ಲ ಎಂದಿದ್ದರು. ವಿಶೇಷ ವೀಕ್ಷಕ ಅಜಯ್ ನಾಯಕ್ ಮತ್ತು ವಿಶೇಷ ಪೊಲೀಸ್ ವೀಕ್ಷಕ ವಿವೇಕ್ ದುಬೆ ಅವರು ಬ್ಯಾನರ್ಜಿ ಅವರಿಗೆ ‘ದಿಡೀರಾಗಿ ನಡೆದಿರುವ ಘಟನೆಯಲ್ಲಿ ಪೆಟ್ಟುಬಿದ್ದಿದೆ’ ಎಂದಿದ್ದರು.
ರಾಜ್ಯದ ಮುಖ್ಯ ಕಾರ್ಯದರ್ಶಿ ಅಲಪನ್ ಬಂದ್ಯೋಪಾಧ್ಯಾಯ ಕೂಡ ಈ ಬಗೆಗಿನ ತಮ್ಮ ವರದಿಯಲ್ಲಿ ‘ಕಾರಿನ ಬಾಗಿಲು ಜೋರಾಗಿ ಮುಚ್ಚಿಕೊಂಡಿದ್ದರ ಪರಿಣಾಮವಾಗಿ ಏಟು ಬಿದ್ದಿದೆ’ ಎಂದು ಹೇಳಿದ್ದರು. ಈ ಎಲ್ಲ ವರದಿಗಳನ್ನು ಪರಿಗಣಿಸಿರುವ ಚುನಾವಣಾ ಆಯೋಗ, ಮಮತಾ ಮೇಲೆ ದಾಳಿಯಾಗಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಘೋಷಿಸಿದೆ.
ಇದನ್ನೂ ಓದಿ: “ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ
ಈ ನಡುವೆ, ವೀಲ್ಚೇರ್ನಲ್ಲೇ ಕೂತು ದೀದಿ ಚುನಾವಣಾ ಪ್ರಚಾರವನ್ನು ಮುಂದುವರೆಸಿದ್ದಾರೆ. ನಂದಿಗ್ರಾಮದ ಘಟನೆಯ ನಂತರ ರಾಜ್ಯ ಎಡಿಜಿ (ಲಾ ಅಂಡ್ ಆರ್ಡರ್) ಮತ್ತು ನೋಡಲ್ ಅಧಿಕಾರಿ ಜಗಮೋಹನ್ ಅವರು ಶನಿವಾರ ಎಲ್ಲ ಜಿಲ್ಲಾ ಆಡಳಿತಕ್ಕೆ ಸಿಎಂ ಪ್ರವಾಸಗಳ ಸಮಯದಲ್ಲಿ ಅತಿಹೆಚ್ಚಿನ ಭದ್ರತೆ ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಹೇಗ್ಹೇಗೋ ಮುಟ್ಟುತ್ತಾ ‘ಪರೀಕ್ಷೆ’ ನಡೆಸುತ್ತಿದ್ದ ನರ್ಸಿಂಗ್ ಇನ್ಸ್ಟಿಟ್ಯೂಟ್ ಮುಖ್ಯಸ್ಥನ ಬಂಧನ
“ಆ ರಹೀ ಹೇ ಪೊಲೀಸ್… !” ಭರ್ಜರಿ ಆ್ಯಕ್ಷನ್ ಚಿತ್ರಕ್ಕೆ ತಯಾರಾಗಿ !
ಡಂಗೂರ ಸಾರಿ ಕರೊನಾ ಲಸಿಕೆ ಬಗ್ಗೆ ಜಾಗೃತಿ