ನವದೆಹಲಿ: ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಎನ್ಸಿ ಕ್ಲಾಸಿಕ್ ಅಥ್ಲೆಟಿಕ್ಸ್ ಕೂಟಕ್ಕೆ ಪಾಕಿಸ್ತಾನದ ಅರ್ಷದ್ ನದೀಂರನ್ನು ಆಹ್ವಾನಿಸಿರುವುದಕ್ಕೆ ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ತೀವ್ರ ದ್ವೇಷ ಮತ್ತು ನಿಂದನೆಗೆ ಗುರಿಯಾಗಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಗೆ ಎರಡು ದಿನ ಮೊದಲೇ ತಾನು ಅರ್ಷದ್ಗೆ ಆಹ್ವಾನ ನೀಡಿದ್ದೆ. ಪಹಲ್ಗಾಮ್ ದಾಳಿಯ ನಂತರದಲ್ಲಿ ಅರ್ಷದ್ಗೆ ಸ್ಪರ್ಧಿಸುವ ಅವಕಾಶ ನೀಡುವ ಪ್ರಶ್ನೆಯೇ ಎದುರಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ನೀರಜ್, ತನ್ನ ಬದ್ಧತೆ ಮತ್ತು ದೇಶಪ್ರೇಮವನ್ನು ಪ್ರಶ್ನಿಸಿರುವ ನಿಂದನೆಗಳಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ರಜತ ವಿಜೇತ ನೀರಜ್, ತನ್ನ ಕುಟುಂಬವನ್ನೂ ನಿಂದಿಸಲಾಗುತ್ತಿರುವ ಬಗ್ಗೆ ಬೇಸರಗೊಂಡಿದ್ದಾರೆ. ಚೊಚ್ಚಲ ಆವೃತ್ತಿಯ ನೀರಜ್ ಚೋಪ್ರಾ (ಎನ್ಸಿ) ಕ್ಲಾಸಿಕ್ ಕೂಟ ಮೇ 24ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಹಲವು ವಿದೇಶಿ ಸ್ಟಾರ್ ಜಾವೆಲಿನ್ ಎಸೆತಗಾರರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
“ಪಹಲ್ಗಾಮ್ ದಾಳಿ ನನಗೂ ಅಪಾರ ನೋವು ತಂದಿದೆ. ನನಗೂ ಈ ಟನೆ ಸಿಟ್ಟು ತರಿಸಿದೆ. ಆದರೆ ನಾನು ಪಹಲ್ಗಾಮ್ ದಾಳಿಗೆ 2 ದಿನ ಮುನ್ನ, ಓರ್ವ ಅಥ್ಲೀಟ್ ಆಗಿ ಇನ್ನೋರ್ವ ಅಥ್ಲೀಟ್ಗೆ ಆಹ್ವಾನ ನೀಡುವಂತೆ ಅರ್ಷದ್ ನದೀಂರನ್ನು ಆಹ್ವಾನಿಸಿದ್ದೆ. ಪಹಲ್ಗಾಮ್ ದಾಳಿ ಬಳಿಕ ಅರ್ಷದ್ ಸ್ಪರ್ಧೆಗೆ ಅವಕಾಶ ನೀಡುವ ಪ್ರಶ್ನೆಯೇ ಬರುವುದಿಲ್ಲ. ನನಗೆ ಯಾವಾಗಲೂ ದೇಶವೇ ಮೊದಲು’ ಎಂದು ಭಾರತೀಯ ಸೇನೆಯಲ್ಲಿ ಸುಬೇದಾರ್ ಮೇಜರ್ ಆಗಿರುವ ನೀರಜ್ ಎಕ್ಸ್ನಲ್ಲಿ ಬರೆದಿದ್ದಾರೆ.
ಅಮ್ಮನಿಗೂ ನಿಂದನೆ ಬಿಸಿ
ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅರ್ಷದ್ ನದೀಂ, ನೀರಜ್ರನ್ನು ಮೀರಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಆಗ ನೀರಜ್ ತಾಯಿ ಸರೋಜ್, ಅರ್ಷದ್ ಕೂಡ ನನ್ನ ಮಗನಿದ್ದಂತೆ ಎಂದಿದ್ದರು. ಆಗ ಈ ಹೇಳಿಕೆಯನ್ನು ಪ್ರಶಂಸಿಸಲಾಗಿತ್ತು. ಆದರೆ ಇದೀಗ ಅದೇ ಹೇಳಿಕೆಗಾಗಿ ನೀರಜ್ ಅಮ್ಮನನ್ನೂ ನಿಂದಿಸಲಾಗುತ್ತಿದೆ. ಈ ಬಗ್ಗೆಯೂ ನೀರಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.