ಶಿರ್ವ: ಶಿಕ್ಷಣ ಮತ್ತು ಕ್ರೀಡೆಗೆ ಸಮಾನ ಆದ್ಯತೆ ನೀಡಬೇಕು. ಕ್ರೀಡಾಪಟುಗಳೂ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿ ಮೆರೆಯುವುದು ಮುಖ್ಯ. ಇತ್ತೀಚೆಗೆ ಸರ್ಕಾರ ಕ್ರೀಡೆಗೆ ಹೆಚ್ಚಿನ ಗಮನ ನೀಡುತ್ತಿರುವುದರಿಂದ ಕ್ರೀಡಾ ಮೀಸಲಾತಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಅಶ್ವಿನ್ ಸನಿಲ್ ಹೇಳಿದರು.
ಪಡುಬೆಳ್ಳೆ ಶ್ರೀ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯ ಶಿವಾಜಿ ಎಸ್.ಸುವರ್ಣ ಧ್ವಜಾರೋಹಣಗೈದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಆಡಳಿತ ಮಂಡಳಿ ಸದಸ್ಯರಾದ ಗೀತಾ ವಾಗ್ಲೆ ಬಂಟಕಲ್ಲು, ಸುರೇಶ ಪೂಜಾರಿ, ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷೆ ಭವ್ಯಾ ಆರ್. ಸುವರ್ಣ ಉಪಸ್ಥಿತರಿದ್ದರು. ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ಸಾಲಿಯಾನ್ ಸ್ವಾಗತಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉಷಾ ಎಸ್.ವಂದಿಸಿದರು. ಶಿಕ್ಷಕಿ ರಿನುಷಾ, ದೀಕ್ಷಾ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ದೇವಾಡಿಗ, ಸ್ವಾತಿ ಕ್ರೀಡಾಕೂಟ ಸಂಯೋಜಿಸಿದ್ದರು.