ಕುಂದಾಪುರ: ನಮ್ಮಲ್ಲಿರುವ ಪ್ರತಿಭೆ ಹೊರಹೊಮ್ಮಿಸಲು ಅವಕಾಶಗಳು ದೊರೆಯುತ್ತಿರುತ್ತವೆ. ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಚಾಕಚಕ್ಯತೆ ಮತ್ತು ಬುದ್ಧಿವಂತಿಕೆ ನಮ್ಮಲ್ಲಿರಬೇಕು ಎಂದು ನಟಿ ಮಾನಸಿ ಸುಧೀರ್ ಹೇಳಿದರು.
ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಆಶ್ರಯದಲ್ಲಿ ಕಾಲೇಜು ವಠಾರದಲ್ಲಿ ಪಿಯುಸಿ ವಿದ್ಯಾರ್ಥಿಗಳ ನವೋಷ್ಮೇಶ್-2024 ರಾಜ್ಯಮಟ್ಟದ ಫೆಸ್ಟ್ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ನೀವಿಯಸ್ ಸೊಲ್ಯುಷನ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸುಯೋಗ್ ಶೆಟ್ಟಿ ಮಾತನಾಡಿ, ಟೀಮ್ವರ್ಕ್ ಮತ್ತು ನಾಯಕತ್ವ, ನಾವೀನ್ಯ ಮತ್ತು ಸೃಜನಶೀಲತೆ ಜೀವನದಲ್ಲಿ ಯಶಸ್ಸು ಪಡೆಯಲು ಅತ್ಯವಶ್ಯ ಎಂದರು.
ಪ್ರಾಂಶುಪಾಲೆ ಡಾ.ಪ್ರತಿಭಾ ಎಂ.ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಪ್ರೊ.ಜಯಶೀಲಕುಮಾರ್, ಕಾರ್ಯಕ್ರಮದ ಕೋ-ಆರ್ಡಿನೇಟರ್ಗಳಾದ ಸಿಂಚನ್, ನಿತಿನ್ ಮತ್ತು ಹನಾ ಶೇಕ್ ಉಪಸ್ಥಿತರಿದ್ದರು. ನಟಿ ಮಾನಸಿ ಸುಧೀರ್ ಮತ್ತು ಸುಯೋಗ ಶೆಟ್ಟಿ ಅವರನ್ನು ಗೌರವಿಸಲಾಯಿತು. ಫೆಸ್ಟ್ ಸಂಯೋಜಕಿ ಅರ್ಚನಾ ಗದ್ದೆ ಸ್ವಾಗತಿಸಿದರು. ಐಎಂಜೆ ವಿದ್ಯಾಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ರಕ್ಷಿತಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಸಿಂಚನಾ ಮತ್ತು ಸಂತೃಪ್ತಿ ಕಾರ್ಯಕ್ರಮ ನಿರ್ವಹಿಸಿದರು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ವಿವಿಧ ಜಿಲ್ಲೆಗಳಿಂದ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.