ಸುಗುಣೇಂದ್ರ ಶ್ರೀ ಆಶೀರ್ವಚನ
ರಾಜಾಂಗಣದಲ್ಲಿ ಜಯಂತಿ ಆಚರಣೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಅತ್ತ ಪ್ರಾಣಿಯೂ ಅಲ್ಲದ. ಇತ್ತ ಮನುಷ್ಯನೂ ಅಲ್ಲದ ನರಸಿಂಹ ದೇವರದ್ದು ಅತಿ ಬುದ್ಧಿವಂತ ಅವತಾರ. ಶ್ರೀಮನ್ನಾರಾಯಣನ ವಿಪರೀತ ಕೋಪದ ಅವತಾರವಿದು. ಸಿಟ್ಟು ಎಷ್ಟಿದಿಯೋ ಅಷ್ಟೇ ಸಮಾಧಾನಿ, ಪ್ರಸನ್ನಚಿತ್ತ. ನರಸಿಂಹನ ಪ್ರಾರ್ಥನೆಯಿಂದ ದುರಿತ ಕಷ್ಟಗಳೆಲ್ಲವೂ ನಿವಾರಣೆ ಆಗುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ರಾಜಾಂಗಣದಲ್ಲಿ ನರಸಿಂಹ ಜಯಂತಿಯ ಪ್ರಯುಕ್ತ ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ವಿದುಷಿ ಉಷಾ ಹೆಬ್ಬಾರ ನೇತೃತ್ವದಲ್ಲಿ ಮೇ 11ರಂದು ಸಂಜೆ ಆಯೋಜಿಸಿದ್ದ ಭಜನೆ, ಯಕ್ಷಗಾನ, ಹರಿಕಥೆ, ನೃತ್ಯ ರೂಪಕ, ಕುಣಿತ ಭಜನೆ, ಸೆಮಿಕ್ಲಾಸಿಕಲ್ ನೃತ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಇದಕ್ಕೂ ಮೊದಲು ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ ನರಸಿಂಹ ಜಯಂತಿ ಆಚರಣೆಯ ಮಹತ್ವ ವಿವರಿಸಿದರು.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ನ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಅಂಬಲಪಾಡಿ, ನಗರಸಭಾ ಮಾಜಿ ಸದಸ್ಯ ನರಸಿಂಹ ನಾಯಕ ಮಣಿಪಾಲ, ಮಠದ ಪ್ರಮುಖರಾದ ರಘುಪತಿ ರಾವ್, ಕಲಾವಿದರಾದ ರಾಮಕೃಷ್ಣ ಕೊಡಂಚ, ಕಾರ್ತಿಕ ಇನ್ನಂಜೆ, ಮುರಳಿ, ಕಾವ್ಯಾ ಹೆಬ್ಬಾರ್, ಕೌಶಿಕ ಹೆಬ್ಬಾರ, ನಿತ್ಯಾನಂದ ನಾಯಕ ಹಾಗೂ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.
ವಿಶಿಷ್ಟ ಶಕ್ತಿಯ ಪ್ರತೀಕ
ಹಿರಣ್ಯಕಶಿಪು ತನಗೆ ಸಾವೇ ಬರದಂತೆ ಅಮರತ್ವ ಸಾಧಿಸಲು ನಡೆಸಿದ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ವಿಶಿಷ್ಟ ಅವತಾರಿ ನರಸಿಂಹ. ಆತನ ಸಂಹಾರ ಮಾಡಿದ ರೀತಿಯೂ ವಿಚಿತ್ರವಾಗಿದೆ. ಆಕಾಶದಲ್ಲಲ್ಲ, ಭೂಮಿಯಲ್ಲೂ ಅಲ್ಲ. ಒಳಗೂ ಅಲ್ಲ, ಹೊರಗೂ ಅಲ್ಲ ಹೊಸ್ತಿಲಲ್ಲಿ. ಮೇಲಲ್ಲ, ಕೆಳಗಲ್ಲ ತೊಡೆಯ ಮೇಲೆ. ಹಗಲಲ್ಲ, ರಾತ್ರಿಯಲ್ಲ ಸಂಧ್ಯಾಕಾಲದಲ್ಲಿ. ಬಾಣವಲ್ಲ, ಚಕ್ರವಲ್ಲ ಉಗುರಿನಲ್ಲಿ ಆತನ ಹೊಟ್ಟೆ ಸೀಳಿ ಸಂಹಾರ ಮಾಡಿದ ವಿಶಿಷ್ಟ ಶಕ್ತಿಯ ಪ್ರತಿಕನಾಗಿದ್ದಾನೆ. ವಿಶ್ವಕ್ಕೆ, ಧರ್ಮಕ್ಕೆ ಪ್ರಕ್ಷುಬ್ದ ಸ್ಥಿತಿ ಉಂಟಾದಾಗ ದುಷ್ಟ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ನರಸಿಂಹ ಜಯಂತಿ ಆಚರಣೆ ಅತ್ಯಂತ ಸೂಕ್ತ ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.