ಮಂಗಳೂರು: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿ ಬೇಸರ ಉಂಟು ಮಾಡಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.

ಮಂಗಳೂರು ಉಪ ಕಾರಾಗೃಹದಲ್ಲಿರುವ ಪ್ರಕರಣದ ಆರೋಪಿಗಳನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಕಾಂಗ್ರೆಸ್ ಪೊಲೀಸ್ ಇಲಾಖೆಯನ್ನು ಅವರ ಕಚೇರಿಯಾಗಿ ಬಳಸುತ್ತಿದೆ. ದುಡಿದು ತಿನ್ನುವವರಿಗೆ ಈ ರೀತಿ ಅನ್ಯಾಯ ಮಾಡಿದ್ರೆ ಯಾರು ಕ್ಷಮಿಸುವುದಿಲ್ಲ. ಜೀವದ ಹಂಗು ತೊರೆದು ನಾವು ಮೀನುಗಾರಿಕೆ ಮಾಡುತ್ತೇವೆ. ಪುರುಷರಿಗೆ ಸರಿ ಸಮಾನವಾಗಿ ಮಹಿಳೆಯರು ಕೂಡ ಮೀನುಗಾರಿಕೆ ಕೆಲಸ ಮಾಡ್ತಾರೆ. ಪೊಲೀಸರು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ತಕ್ಕ ಉತ್ತರ ಕೊಡಬೇಕಾಗುತ್ತದೆ.
ಆ ಭಾಗದ ಶಾಸಕನಾಗಿ, ಮೀನುಗಾರನಾಗಿ ಅವರ ಜೊತೆಗೆ ನಿಲ್ಲುತ್ತೇನೆ. ಕಾಂಗ್ರೆಸ್ನವರಿಗೆ ಉಡುಪಿ, ಮಂಗಳೂರಿನಲ್ಲಿ ಏನೂ ಸಾಧನೆ ಮಾಡಲು ಆಗುತ್ತಿಲ್ಲ. ಹೀಗಾಗಿ ಅಧಿಕಾರಿಗಳ ಮೂಲಕ ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಶಕ್ತಿ, ಒಗ್ಗಟ್ಟನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇವೆ ಎಂದವರು ಹೇಳಿದರು.
ಮೀನುಗಾರ ಮಹಿಳೆಗೆ ಜಾತಿ ನಿಂದನೆ, ಹಲ್ಲೆ ಪ್ರಕರಣದಲ್ಲಿ ನಾಲ್ವರು ಮಹಿಳೆಯರು ಮಂಗಳೂರು ಉಪಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಶಾಸಕರು ಅವರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಾಥ್ ನೀಡಿದರು.