ಬೆಂಗಳೂರು: ಒಂದು ಕಾಲಕ್ಕೆ ಮಾಲಾಶ್ರೀ ಅಭಿನಯದ ಸಾಕಷ್ಟು ಪೊಲೀಸ್ ಚಿತ್ರಗಳು ಬಿಡುಗಡೆಯಾಗಿದ್ದು ನೆನಪಿರಬಹುದು. ಆ ನಂತರ ಬೇರೆ ನಟಿಯರು ಸಹ ಪೊಲೀಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದುಂಟು. ಇತ್ತೀಚೆಗೆ, ಆ ಟ್ರೆಂಡ್ ಕಡಿಮೆಯಾಗುತ್ತಿದ್ದು, ಅಂತಹ ಚಿತ್ರಗಳನ್ನು ನೆನಪಿಸುವುದಕ್ಕೆ ‘ಮರ್ದಿನಿ’ ಎಂಬ ಹೊಸ ಚಿತ್ರವೊಂದು ನಿರ್ಮಾಣವಾಗಿ, ಬಿಡುಗಡೆಯಾವುದಕ್ಕೆ ಸಜ್ಜಾಗಿದೆ.
ಇದನ್ನೂ ಓದಿ: ಲೈಗರ್ ಸಿನಿಮಾ ಸೋಲು: ನಟಿ ಅನಸೂಯ ವಿರುದ್ಧ ಮುಗಿಬಿದ್ದ ವಿಜಯ್ ದೇವರಕೊಂಡ ಫ್ಯಾನ್ಸ್!
‘ಮರ್ದಿನಿ’ ಚಿತ್ರದ ಮೂಲಕ ರಿತನ್ಯ ಹೂವಣ್ಣ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಂಕಿತ್ ಫಿಲಂಸ್ ಲಾಂಛನದಲ್ಲಿ ಭಾರತಿ ಜಗ್ಗಿ ಈ ಚಿತ್ರವನ್ನು ನಿರ್ಮಿಸಿದ್ದು, ಕಿರಣ್ ಕುಮಾರ್ ವಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೇಲರ್ ಹಾಗೂ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು.
ಈ ಚಿತ್ರದ ಕುರಿತು ಮಾತನಾಡುವ ಕಿರಣ್ ಕುಮಾರ್, ‘ಅಡುಗೆಮನೆಯಿಂದ ಆರ್ಮಿ ತನಕ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯಾರಿಗೂ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇತ್ತೀಚೆಗೆ ಕೋವಿಡ್ ಸಮಯದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣಪಣಕ್ಕಿಟ್ಟು ಸೇವೆ ಸಲ್ಲಿಸಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಎಲ್ಲಾ ಅಂಶಗಳನಿಟ್ಟುಕೊಂಡು, ಸಿನಿಮಾ ಮಾಡಿದ್ದೇನೆ. ಚಿತ್ರವು ಸೆಪ್ಟೆಂಬರ್ 16ರಂದು ಬಿಡುಗಡೆಯಾಗುತ್ತಿದೆ’ ಎನ್ನುತ್ತಾರೆ.
ನಿರ್ಮಾಪಕ ಜಗ್ಗಿ, ಸುದೀಪ್ ಅವರ ಅಭಿಮಾನಿಯಂತೆ. ಕಳೆದ 18 ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿದೆಯಂತೆ. ‘ಸಾವಿರಾರು ಚಿತ್ರಗಳಿಗೆ ಸ್ಟ್ಯಾಂಡಿಸ್ ಹಾಗೂ ಬ್ಯಾನರ್ಗಳನ್ನು ಮಾಡಿದ್ದೇನೆ. ಸಿನಿಮಾ ನಿರ್ಮಾಣ ಮಾಡಿ, ಹೊಸ ಕಲಾವಿದರಿಗೆ ಅವಕಾಶ ನೀಡಬೇಕೆಂದು ನನ್ನ ಆಸೆಯಿತ್ತು. ‘ಮರ್ದಿನಿ’ ಚಿತ್ರದ ಮೂಲಕ ಈಡೇರಿದೆ’ ಎನ್ನುತ್ತಾರೆ ನಿರ್ಮಾಪಕ ಜಗ್ಗಿ.
ಈ ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆಯಾದ ರಿತನ್ಯಾ, ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರಂತೆ. ಇನ್ನು, ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ಮುಖ್ಯಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ ಅಕ್ಷಯ್. ರಿತನ್ಯಾ ಹಾಗೂ ಅಕ್ಷಯ್ ಜತೆಗೆ ಇಂಚರ ಹಾಗೂ ಸುಷ್ಮಿತ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಂಪ್ರದಾಯ ಮತ್ತು ಆಧುನಿಕತೆಯ ಸಂಘರ್ಷ: ‘ಡೊಳ್ಳು’ ಸಿನಿಮಾ ವಿಮರ್ಶೆ
‘ಮರ್ದಿನಿ’ ಚಿತ್ರಕ್ಕೆ ಹಿತನ್ ಹಾಸನ್ ಸಂಗೀತ, ಕರಣ್ ಗಜ ಸಂಭಾಷಣೆ ಹಾಗೂ ವಿಶ್ವ ಸಂಕಲನ ಮಾಡಿದ್ದಾರೆ.
ಅಭಿಷೇಕ್ ಅಂಬರೀಷ್ ಅಭಿನಯದ ನಾಲ್ಕನೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ