ಉತ್ತರಪ್ರದೇಶ: ಕಳೆದ ತಿಂಗಳು ರೈಲಿನೊಳಗೆ ಮಹಿಳಾ ಪೊಲೀಸ್ ಪೇದೆ ಮೇಲೆ ದಾಳಿ ಮಾಡಿದ್ದ ವ್ಯಕ್ತಿ ಇದೀಗ ಪೊಲೀಸ್ ಎನ್ಕೌಂಟರ್ಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಈ ಘಟನೆ ಉತ್ತರಪ್ರದೇಶದ ಆಯೋಧ್ಯೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಸರಯು ಎಕ್ಸ್ಪ್ರೆಸ್ನಲ್ಲಿ ಮಹಿಳಾ ಪೇದೆ ಮೇಲೆ ಹಲ್ಲೆ ಮಾಡಿದ್ದ ಪಾತಕಿ ಅನೀಸ್ ಎನ್ಕೌಂಟರ್ನಲ್ಲಿ ಹತ್ಯೆ
ಮಹಿಳಾ ಪೊಲೀಸ್ ಮೇಲೆ ದಾಳಿ ಮಾಡಿದ ಆರೋಪದಡಿ ಇಬ್ಬರು ಪುರುಷರಲ್ಲಿ ಒಬ್ಬ ಶುಕ್ರವಾರ ಅಯೋಧ್ಯೆಯಲ್ಲಿ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದಾನೆ. ಎನ್ಕೌಂಟರ್ ವೇಳೆ ಇತರ ಇಬ್ಬರು ವ್ಯಕ್ತಿಗಳಿಗೆ ಗುಂಡು ತಗುಲಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ತಿಂಗಳ ಆಗಸ್ಟ್ 30 ರಂದು ಸರಯು ಎಕ್ಸ್ಪ್ರೆಸ್ ರೈಲಿನೊಳಗೆ ಸೀಟಿನ ವಿಚಾರಕ್ಕೆ ಮೃತ ವ್ಯಕ್ತಿ ಮತ್ತು ಮಹಿಳಾ ಪೇದೆ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಜಗಳ ತಾರಕಕ್ಕೇರಿದ ಬೆನ್ನಲ್ಲೇ ಆರೋಪಿ ಮಹಿಳಾ ಕಾನ್ಸ್ಟೆಬಲ್ ಮುಖಕ್ಕೆ ವ್ಯಕ್ತಿ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ರೈಲ್ವೆ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಇದನ್ನೂ ಓದಿ: ಇಂಫಾಲ್ ಜಿಲ್ಲೆಯಲ್ಲಿ ಮತ್ತೆ ಕರ್ಪ್ಯೂ ಜಾರಿ; ಬಂಧಿತ ಐವರು ಯುವಕರನ್ನು ಬಿಡುಗಡೆಗೊಳಿಸುವಂತೆ ಒತ್ತಾಯ
ಘಟನೆ ನಡೆದ ಬೆನ್ನಲ್ಲೇ ಅಯೋಧ್ಯೆ ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾನ್ಸ್ಟೆಬಲ್ ಸಹೋದರ ನೀಡಿದ ಲಿಖಿತ ದೂರಿನ ಮೇರೆಗೆ ಐಪಿಸಿಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಬಂಧಿಸಲು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ಕೆಲ ದಿನಗಳ ಹಿಂದೆ ತಿಳಿಸಿದ್ದರು.
ಇದರ ಬೆನ್ನಲ್ಲೇ ಉತ್ತರಪ್ರದೇಶ ಪೊಲೀಸ್ ಮತ್ತು ಲಕ್ನೋ ವಿಶೇಷ ಕಾರ್ಯಪಡೆ (STF) ಜಂಟಿ ತಂಡವು ಶುಕ್ರವಾರ ಇನಾಯತ್ ನಗರ ಪ್ರದೇಶದಲ್ಲಿ ಆರೋಪಿಯ ಬೆನ್ನಟ್ಟಿ ಎನ್ಕೌಂಟರ್ ಆರಂಭಿಸಿತು. ಎನ್ಕೌಂಟರ್ ವೇಳೆ ಆರೋಪಿ ಅನೀಶ್ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಆಜಾದ್ ಖಾನ್ ಮತ್ತು ವಿಶಂಭರ್ ದಯಾಳ್ ಎಂಬ ಮತ್ತಿಬ್ಬರು ಪೊಲೀಸರ ದಾಳಿಗೆ ಗಾಯಗೊಂಡಿದ್ದಾರೆ. ಈ ಇಬ್ಬರು ಬಲಿಯಾದ ಆರೋಪಿಯ ಜತೆಗೆ ಕೈಜೋಡಿಸಿದ್ದರಾ? ಎಂಬ ಶಂಕೆ ವ್ಯಕ್ತವಾಗಿದೆ,(ಏಜೆನ್ಸೀಸ್).