ಬೆಳಗಾವಿ: ಲೈಫ್ ಇನ್ಶೂರೆನ್ಸ್ (Life Insurance) ಹಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಸಹಚರರ ಜತೆಗೂಡಿ ಸಹೋದರನನ್ನೇ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲ್ಲೂಕಿನಲ್ಲಿ ನಡೆದಿದೆ.
ಮೃತರನ್ನು ಹನುಮಂತ ಗೋಪಾಲ್ ತಳವಾರ (35) ಎಂದು ಗುರುತಿಸಲಾಗಿದ್ದು, ಪ್ರಕರಣ ಸಂಬಂಧ ಬಸವರಾಜ ತಳವಾರ, ಈರಪ್ಪ ಹಡಿಗಿನಾಳ (32), ಸಚಿನ ಕಂಟೇನ್ನವರ (25) ಹಾಗೂ ಮೂಡಲಗಿ ಪಟ್ಟಣದ ಬಾಪು ಶೇಖ(34) ಎಂಬುವವರನ್ನು ಘಟಪ್ರಭಾ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದ ಹಿನ್ನಲೆ
ಮೂಡಲಗಿ ತಾಲ್ಲೂಕಿನ ಕಲ್ಲೋಳಿ ಗ್ರಾಮದಲ್ಲಿ ನವೆಂಬರ್ 07ರಂದು ಕಬ್ಬಿನ ಗದ್ದೆಯೊಳಗೆ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಅನಾಥ ಶವ ಪತ್ತೆಯಾದ ಬಗ್ಗೆ ಘಟಪ್ರಭಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರಂಭದಲ್ಲಿ ಅನಾಥ ಶವವೆಂದು ಭಾವಿಸಿದ್ದ ಪೊಲೀಸರು ಆ ಬಳಿಕ ತನಿಖೆ ಚುರುಕುಗೊಳಿಸಿದಾಗ ಮೃತ ವ್ಯಕ್ತಿಯು ಕಲ್ಲೋಳಿ ಗ್ರಾಮದ ಹನುಮಂತ ಗೋಪಾಲ್ ತಳವಾರ ಎಂದು ತಿಳಿದು ಬಂದಿತ್ತು.
ಶವ ಸಿಕ್ಕ ಬಳಿಕ ನಾಲ್ವರು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ತಿಳಿದು ಬಂದಿತ್ತು. ದರ ಹಿನ್ನೆಲೆ ಹಿಡಿದು ಹೊರಟ ಪೊಲೀಸರಿಗೆ ಮೃತನ ಸಹೋದರ ಬಸವರಾಹ ತಳವಾರ ಆತನ ಸ್ನೇಹಿತರ ಜತೆಗೂಡಿ ಗೋಪಾಲನನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು. ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದಾಗ ಹನಮಂತ ವಿವಿಧ ವಿಮೆ ಕಂಪನಿಗಳಲ್ಲಿ (Insurance Company) ಅಂದಾಜು 50 ಲಕ್ಷ ರೂ. ವಿಮೆ ಮಾಡಿದ್ದಾರೆ. ಇದಕ್ಕೆ ಆರೋಪಿ ಬಸವರಾಜನನ್ನೇ ನಾಮಿನಿ ಮಾಡಿದ್ದಾರೆ. ಈ ಹಣ ಪಡೆಯಲು ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿತ್ತು.
ಪ್ರಕರಣವನ್ನು ಭೇದಿಸಿರುವ ಘಟಪ್ರಭಾ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯ ಒಂದು ಸೀಳು ನಾಯಿ, ಅದು ವಿಚ್ ಹಂಟಿಂಗ್ ಏಜೆನ್ಸಿ: ಸಚಿವ Krishna Byregowda