ಬೆಂಗಳೂರು: ಗೋವಾದ ಪಣಜಿಯಲ್ಲಿ ನವೆಂಬರ್ 20ರಿಂದ 28ರವರೆಗೂ ನಡೆಯಲಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗದ ನಾನ್-ಫೀಚರ್ ವಿಭಾಗದಲ್ಲಿ ಈ ಬಾರಿ ದಿನೇಶ್ ಶೆಣೈ ನಿರ್ದೇಶನದ ‘ಮಧ್ಯಂತರ – ದಿ ಇಂಟರ್ಮಿಷನ್’ ಎಂಬ ಚಿತ್ರವೂ ಆಯ್ಕೆಯಾಗಿದೆ.
39 ನಿಮಿಷಗಳ ಅವಧಿಯ ಈ ಚಿತ್ರವು ಸಿನಿಮಾದ ಕುರಿತದ್ದಾಗಿದೆ. 1976ರಿಂದ 1985ರವರೆಗಿನ ಕಾಲಘಟ್ಟದಲ್ಲಿ ನಡೆಯುವ ಒಂದು ಕಥೆಯನ್ನು ಈ ಕಿರುಚಿತ್ರದ ಮೂಲಕ ಕಟ್ಟಿಕೊಡಲಾಗಿದೆ.
ಇದನ್ನೂ ಓದಿ: ಮಕ್ಕಳಿಗೆ ಪಟಾಕಿ ಹೊಡೆಸಿ ದೀಪಾವಳಿ ಆಚರಿಸಿದ ಯಶ್
‘ಮಧ್ಯಂತರ’ದ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ನಿರ್ದೇಶಕ ಶೆಣೈ, ‘ನಾನು ಮೂಲತಃ ಬಂಟ್ವಾಳದವನು. ಕಳೆದ 25 ವರ್ಷಗಳಿಂದ ದೆಹಲಿಯಲ್ಲಿದ್ದೇನೆ. ಅಲ್ಲಿ ಛಾಯಾಗ್ರಾಹಕನಾಗಿ ಕಾರ್ಪೋರೇಟ್ ಸಿನಿಮಾಗಳು ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದ. ಲಾಕ್ಡೌನ್ ಸಂದರ್ಭದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಒಂದಿಷ್ಟು ಸಂದರ್ಶನಗಳನ್ನು ನೋಡುವ ಅವಕಾಶ ಸಿಕ್ಕಿತು. 70ರ ಮಧ್ಯಭಾಗದಿಂದ 90ರ ಮಧ್ಯಭಾಗದವರೆಗಿನ ಒಂದಿಷ್ಟು ವಿಚಾರಗಳನ್ನು ಹಲವರು ಮಾತನಾಡಿದ್ದನ್ನು ಕೇಳಿದೆ. ಅದನ್ನು ಸ್ಫೂರ್ತಿಯಾಗಿಸಿಕೊಂಡು ಒಂದು ಸ್ಕ್ರಿಪ್ಟ್ ಬರೆದೆ. ಕಲಾ ನಿರ್ದೇಶಕ ಶಶಿಧರ ಅಡಪ ಅವರು ನನ್ನ ಹಳೆಯ ಸ್ನೇಹಿತರು. ಅವರೊಂದಿಗೆ ನನ್ನ ಐಡಿಯಾ ಹಂಚಿಕೊಂಡೆ. ಅವರು ಈ ಚಿತ್ರ ಮಾಡುವುದಕ್ಕೆ ಹುರುದಿಂಬಿಸಿದರು’ ಎನ್ನುತ್ತಾರೆ.
ಚಿತ್ರದ ಪ್ರೀ-ಪ್ರೊಡಕ್ಷನ್ ಮತ್ತು ತಯಾರಿ ಕೆಲಸಗಳಿಗೆ ಕಳೆದ ವರ್ಷದ ಕೊನೆಯಲ್ಲಿ ಬೆಂಗಳೂರಿಗೆ ಬಂದ ಅವರು, ಇಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡರಂತೆ. ಕೊನೆಗೆ ಸೆಟ್ಗಳನ್ನು ನಿರ್ಮಾಣ ಮಾಡಿ, 16 ಎಂಎಂ ನೆಗೆಟಿವ್ನಲ್ಲೇ ಈ ಕಿರುಚಿತ್ರದ ಚಿತ್ರೀಕರಣ ಮಾಡಲಾಗಿದೆಯಂತೆ.
ಇದನ್ನೂ ಓದಿ: ಆಲಿಯಾ ಭಟ್ ಕಂಡ್ರೆ ಜಾಹ್ನವಿಗೆ ಬಹಳ ಇಷ್ಟವಂತೆ; ಯಾಕೆ ಗೊತ್ತಾ?
‘ಇದು ಇಬ್ಬರು ಹುಡುಗರ ಕಥೆ. ದಾವಣಗೆರೆಯ ಹೋಟೆಲ್ನಲ್ಲಿ ಕೆಲಸ ಮಾಡುವ ಹುಡುಗರು ಚಿತ್ರಪ್ರೇಮಿಗಳು. ತಮ್ಮೂರಿಗೆ ಬರುವ ಚಿತ್ರತಂಡದ ಜತೆಗೆ ಬೆಂಗಳೂರಿಗೆ ಬಂದು ಇಲ್ಲಿ ಸಿನಿಮಾ ಮಾಡುವ ಪ್ರಯತ್ನವೇ ಈ ಚಿತ್ರದ ಕಥೆ. 70 ಮತ್ತು 80ರ ದಶಕದಲ್ಲಿ ಕನ್ನಡ ಚಿತ್ರರಂಗ ಬೆಳೆದು ಬಂದ ಕಥೆ ಇರುವ ಈ ಚಿತ್ರದಲ್ಲಿ ಸಾಕಷ್ಟು ರಂಗಭೂಮಿ ಕಲಾವಿದರು ಇದ್ದಾರೆ. ವೀರೇಶ್, ಅಜಯ್ ನೀನಾಸಂ, ರಮೇಶ್ ಪಂಡಿತ್, ಶಿವು ನೀನಾಸಂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ ಶೆಣೈ.
ಇನ್ಫೋಕಸ್ ಪಿಕ್ಚರ್ಸ್ ಎಂಬ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸುನೀಲ್ ಬಾರ್ಕೂರು ಅವರ ಛಾಯಾಗ್ರಹಣ ಮತ್ತು ಸುರೇಶ್ ಅರಸ್ ಅವರ ಸಂಕಲನವಿದೆ. ಇನ್ನು, ಶಶಿಧರ್ ಅಡಪ ಅವರು ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ನಿರ್ವಹಿಸಿದ್ದಾರೆ.
ಇನ್ನೊಂದು ಹೊಸ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಿವಣ್ಣ; ಮುಂದಿನ ವರ್ಷ ಪ್ರಾರಂಭ