ಹುಣಸೂರು: ವಿವಿಧ ವಸತಿ ಯೋಜನೆಯಡಿ ಆಯ್ಕೆಯಾಗುವ ಜೀತವಿಮುಕ್ತರಿಗೆ ಗ್ರಾಮ ಸಭೆಗಳಲ್ಲಿ ಪ್ರಥಮ ಆದ್ಯತೆ ನೀಡಬೇಕೆಂದು ಉಪವಿಭಾಗಾದಿಕಾರಿ ಎಚ್.ಬಿ.ವಿಜಯಕುಮಾರ್ ಸೂಚಿಸಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜೀತಪದ್ಧತಿ ನಿರ್ಮೂಲನ ಮತ್ತು ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಿಗಮಗಳ ಮೂಲಕ ಅಥವಾ ವಿವಿಧ ವಸತಿ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಲಾನುಭವಿಗಳ ಆಯ್ಕೆ ವೇಳೆ ಜೀತವಿಮುಕ್ತರ ಕಡೆಗಣನೆ ಕುರಿತು ಸಮಿತಿ ಸದಸ್ಯರು ದೂರುತ್ತಿದ್ದಾರೆ. ವಿವಿಧ ಯೋಜನೆಗಳ ಜಾರಿಯಲ್ಲಿ ಜೀತವಿಮುಕ್ತರನ್ನು ಆದ್ಯತೆ ಮೇರೆಗೆ ಪರಿಗಣಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಮಿತಿ ಸದಸ್ಯ ಎಚ್.ಡಿ.ಕೋಟೆ ತಾಲೂಕಿನ ಚಂದ್ರಶೇಖರ ಮೂರ್ತಿ ಮಾತನಾಡಿ, ಎಚ್.ಡಿ.ಕೋಟೆ ತಾಲೂಕಿನಲ್ಲಿ ಈವರೆಗೆ ಒಟ್ಟು 258 ಜೀತವಿಮುಕ್ತರಿಗೆ ಪುನರ್ವಸತಿ ಮತ್ತು ಪರಿಹಾರಗಳು ಸಿಗಬೇಕಿದೆ. 49 ಜನರಿಗೆ ಇನ್ನೂ ಮಾಸಾಶನ ದೊರಕುತ್ತಿಲ್ಲವೆಂದು ದೂರಿದಾಗ ಈ ಕುರಿತು ಅಗತ್ಯ ಕ್ರಮಗಳನ್ನು ವಹಿಸಲು ಉಪವಿಭಾಗಾಧಿಕಾರಿ ಎಚ್.ಡಿ.ಕೋಟೆ ತಾ.ಪಂ.ಸಹಾಯಕ ನಿರ್ದೇಶಕ ರಾಮಸ್ವಾಮಿ ಅವರಿಗೆ ಸೂಚಿಸಿದರು.
ನೇಪಾಳಿ ನಿರ್ಮಲಾ ಕುಟುಂಬಕ್ಕೆ ನ್ಯಾಯವೆಲ್ಲಿ?: ಜೀವಿಕ ಸಂಸ್ಥೆಯ ಮುಖ್ಯಸ್ಥ ಬಸವರಾಜು ಮಾತನಾಡಿ, ಎಚ್.ಡಿ.ಕೋಟೆ ತಾಲೂಕಿನ ಕೈಲಾಸಪುರ ಗ್ರಾಮದ ತೋಟದಲ್ಲಿ ಜೀತ ಮಾಡಿಕೊಂಡಿದ್ದ ನೇಪಾಳಿ ಮೂಲದ ನಿರ್ಮಲಾ-ಗೋಪಾಲ್ ದಂಪತಿಗೆ ವರ್ಷಗಳೇ ಉರುಳಿದರೂ ನ್ಯಾಯ ಸಿಗುತ್ತಿಲ್ಲ. ಈ ಕುಟುಂಬದ ಪ್ರತಿ ಸದಸ್ಯರೂ ತೋಟದಲ್ಲಿ ಮಾಲೀಕನ ನಿರ್ದೇಶನದಂತೆ ಕೂಲಿಯಾಳಾಗಿ ಜೀತ ಮಾಡಿದ್ದಾರೆ. ಇದನ್ನು ಗಮನಿಸಿ ವಿವಿಧ ಸಂಘಟನೆಗಳು ನೀಡಿದ ದೂರಿನನ್ವಯ ವರ್ಷದ ಹಿಂದೆ ತಾಲೂಕು ಆಡಳಿತ ಕುಟುಂಬವನ್ನು ಜೀತದಿಂದ ವಿಮುಕ್ತಗೊಳಿಸಿದೆ. ಪತಿ, ಪತ್ನಿ ತಮ್ಮ ಮಕ್ಕಳೊಂದಿಗೆ ಸುಂಟಿಕೊಪ್ಪದಲ್ಲಿ ಜೀವನ ನಡೆಸುತ್ತಿದ್ದಾರೆಂದು ಮಾಹಿತಿ ಇತ್ತು.
ಆದರೆ 6 ತಿಂಗಳ ಹಿಂದೆ ಆಯೋಜನೆಗೊಂಡಿದ್ದ ಜೀತಪದ್ಧತಿ ಜಾಗೃತಿ ಸಮಿತಿ ಸಭೆಯಲ್ಲಿ ನಿರ್ಮಲಾ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಮಾಹಿತಿ ಸಿಗುತ್ತದೆ. ನಿರ್ಮಲಾ ಸಾವಿಗೆ ಕಾರಣವೇನು? ಕೈಲಾಸಪುರ ಗ್ರಾಮದ ತೋಟದ ಮಾಲೀಕನ ವಿರುದ್ಧ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಏಕೆ ಎನ್ನುವುದು ನಮ್ಮ ಪ್ರಶ್ನೆಯಾಗಿದೆ. ಈಗಲಾದರೂ ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಿ ಎಂದು ಒತ್ತಾಯಿಸಿದರು.
ಈ ಕುರಿತು ಘಟನೆಯ ಸಮಗ್ರ ಮಾಹಿತಿ ಪಡೆದು ಕ್ರಮವಹಿಸುತ್ತೇನೆಂದು ಉಪವಿಭಾಗಾಧಿಕಾರಿ ತಿಳಿಸಿದರು.