ಜೆರುಸಲೇಂ: ಕೇವಲ ಎರಡು ತಿಂಗಳ ಹಿಂದೆ ಇಸ್ರೇಲ್ಗೆ ತೆರಳಿದ್ದ ಭಾರತೀಯ ಮೂಲದ ಪ್ಯಾಟ್ ನಿಬಿನ್ ಮ್ಯಾಕ್ಸ್ವೆಲ್ (31) ಕ್ಷಿಪಣಿ ದಾಳಿಯಲ್ಲಿ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಇಸ್ರೇಲ್-ಲೆಬನಾನ್ ಗಡಿಯಲ್ಲಿ ಸೋಮವಾರ (ಮಾರ್ಚ್ 04) ನಡೆದಿದೆ.
ಉತ್ತರ ಇಸ್ರೇಲ್ನ ಹಣ್ಣಿನ ತೋಟವನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಮ್ಯಾಕ್ಸ್ವೆಲ್ ಜೀವ ಕಳೆದುಕೊಂಡಿದ್ದಾರೆ. ಕೇರಳ ಮೂಲದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಪೌಲ್ ಮೆಲ್ವಿನ್ ಮತ್ತು ಬುಶ್ ಜೋಸೆಫ್ ಜಾರ್ಜ್ ಎಂದು ಗುರುತಿಸಲಾಗಿದೆ.
ಮೃತ ಮ್ಯಾಕ್ಸ್ವೆಲ್ ಕೇರಳದ ಕೊಲ್ಲಂ ಮೂಲದವರು. ಪತ್ನಿ ಮತ್ತು ಐದು ವರ್ಷದ ಮಗಳನ್ನು ಬಿಟ್ಟು ಎರಡು ತಿಂಗಳ ಹಿಂದಷ್ಟೇ ಇಸ್ರೇಲ್ಗೆ ಹೋಗಿದ್ದರು. ಪತ್ನಿ ಇದೀಗ ಗರ್ಭಿಣಿ ಕೂಡ ಹೌದು. ಮ್ಯಾಕ್ಸ್ವೆಲ್ ಹೋಗುವಾಗ ಗುಡ್ಬೈ ಹೇಳಿ ಪ್ರೀತಿಯಿಂದ ಬೀಳ್ಕೊಟ್ಟಿದ್ದರು. ಆದರೆ, ಈಗ ಸಾವಿನ ಸುದ್ದಿ ಕುಟುಂಬಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ. ಸೋಮವಾರ ಸಂಜೆ ಮ್ಯಾಕ್ಸ್ವೆಲ್ ಅವರ ಪತ್ನಿಗೆ ಬಂದ ಫೋನ್ ಕರೆ ಮೂಲಕ ಹೃದಯವಿದ್ರಾವಕ ಸುದ್ದಿ ಮುಟ್ಟಿದೆ. ಆರಂಭದಲ್ಲಿ ಮ್ಯಾಕ್ಸ್ವೆಲ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೊಂದು ಕರೆ ಬಂದಿದ್ದು, ಮ್ಯಾಕ್ಸ್ವೆಲ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನು ಕೇಳಿದ ಆತನ ಪತ್ನಿ ಒಂದು ಕ್ಷಣ ಕುಸಿದುಬಿದ್ದರು ಮತ್ತು ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಮ್ಯಾಕ್ಸ್ವೆಲ್ ಆರಂಭದಲ್ಲಿ ಮಸ್ಕತ್ ಮತ್ತು ದುಬೈನಲ್ಲಿದ್ದರು. ಬಳಿಕ ಮನೆಗೆ ಮರಳಿದರು. ಎರಡು ತಿಂಗಳ ಹಿಂದಷ್ಟೇ ಇಸ್ರೇಲಿಗೆ ಹೋದನು. ಮೊದಲು ನನ್ನ ಹಿರಿಯ ಮಗ ಹೋದನು. ಒಂದು ವಾರದ ನಂತರ ನನ್ನ ಕಿರಿಯ ಮಗನು ಸಹ ತೆರಳಿದನು ಎಂದು ಮ್ಯಾಕ್ಸ್ವೆಲ್ ತಂದೆ ಪಾಥ್ರೋಸ್ ವಿವರಿಸಿದರು. ಇದೀಗ ಮಗನ ಸಾವಿನ ಸುದ್ದಿ ಕೇಳಿ ಆಘಾತಗೊಂಡಿದ್ದೇನೆ ಎಂದಿದ್ದಾರೆ.
ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಕ್ಷಿಪಣಿ ದಾಳಿಯನ್ನು ಖಂಡಿಸಿದ್ದು, ಇದೊಂದು ಹೇಡಿತನದ ಭಯೋತ್ಪಾದಕ ದಾಳಿ ಎಂದು ಕರೆದಿದೆ. ಮ್ಯಾಕ್ಸ್ವೆಲ್ ಕುಟುಂಬಕ್ಕೆ ರಾಯಭಾರಿ ನಾರ್ ಗಿಲೋನ್ ಅವರು ಸಾಂತ್ವನ ಹೇಳಿದ್ದಾರೆ ಮತ್ತು ಅಗತ್ಯ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿಯು ಇಸ್ರೇಲ್ನಲ್ಲಿರುವ ಭಾರತೀಯ ಪ್ರಜೆಗಳಿಗೆ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಅಥವಾ ಭೇಟಿ ನೀಡುವವರಿಗೆ, ಇಸ್ರೇಲ್ನೊಳಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಸಲಹೆಯನ್ನು ನೀಡಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷವು ಎರಡೂ ಕಡೆಗಳಲ್ಲಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಪ್ರಸ್ತುತ ಘಟನೆಯು ಮೊದಲ ಭಾರತೀಯ ಸಾವು ಎಂದು ಹೇಳಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ ಮ್ಯಾಕ್ಸ್ವೆಲ್ ಅವರ ಮೃತದೇಹವನ್ನು ಕೇರಳಕ್ಕೆ ಹಿಂತಿರುಗಿಸುವ ನಿರೀಕ್ಷೆಯಿದ್ದು, ಅಗತ್ಯ ವಿಧಿವಿಧಾನಗಳು ಬಾಕಿ ಉಳಿದಿವೆ. ಕುಟುಂಬದಲ್ಲಿ ಮಾತ್ರ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್)
ಪುರುಷರಂತೆ ಮಹಿಳಾ ಕ್ರಿಕೆಟರ್ಸ್ ಕೂಡ ಗಾರ್ಡ್ಸ್ ಧರಿಸುತ್ತಾರೆಯೇ? ನಿಮಗೆ ಗೊತ್ತಿರದ ಮತ್ತೊಂದು ರಕ್ಷಾಕವಚವಿದೆ!
ಖ್ಯಾತ ನಟಿಗೆ ದುಬೈನಲ್ಲಿ 50 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ್ರಾ ಉದಯನಿಧಿ?! ಸಂಚಲನ ಸೃಷ್ಟಿಸಿದ ಹೇಳಿಕೆ
ಏಕಕಾಲದಲ್ಲಿ 2 ಸರ್ಕಾರಿ ಕೆಲ್ಸ ಪಡೆದ ವಾಚ್ಮನ್: ಕೇವಲ 9000 ಪಡೆಯುತ್ತಿದ್ದವನ ಸದ್ಯದ ಸಂಬಳ ಇಷ್ಟೊಂದಾ!
ಲೆಮನ್ ಜ್ಯೂಸ್ ಕುಡಿಯುವಾಗ ಅಪ್ಪಿತಪ್ಪಿ ಈ ತಪ್ಪನ್ನು ಮಾಡ್ಬೇಡಿ… ಮಾಡಿದ್ರೆ ಆರೋಗ್ಯಕ್ಕೆ ಡೇಂಜರ್!