ಕೋಝಿಕ್ಕೋಡ್: ಪರಿಶ್ರಮಿ, ಸ್ವಯಂ ನಿರ್ಮಿತ ನರೇಂದ್ರ ಮೋದಿ ಅವರ ಎದುರು ಭಾರತೀಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಐದನೇ ತಲೆಮಾರಿನ ರಾಹುಲ್ ಗಾಂಧಿಗೆ ನೆಲೆಯೇ ಇರಲಿಲ್ಲ. ಹೀಗಿರುವಾಗಲೇ ಅವರನ್ನು ಲೋಕಸಭೆಗೆ ಕಳುಹಿಸಿಕೊಡುವ ಮೂಲಕ ಕೇರಳ ಬಹುದೊಡ್ಡ ಪ್ರಮಾದವನ್ನು ಎಸಗಿದೆ!
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗ್ರೇಟ್ ಪಾರ್ಟಿ ಆಗಿತ್ತು. ಬಳಿಕ ಅದು ಒಂದು ಕುಟುಂಬದ ಸಂಸ್ಥೆಯಾಗಿ ಬದಲಾಯಿತು. ಈಗ ಅದುವೇ ಭಾರತದಲ್ಲಿ ಹಿಂದುತ್ವ ಮತ್ತು ಜಿಂಗೋಯಿಸಂ ಬೆಳೆಯುವುದಕ್ಕೆ ಕಾರಣವೂ ಆಗಿದೆ.
ಕಾಂಗ್ರೆಸ್ ಪಕ್ಷದ ವಿರುದ್ಧ ನಿಲುವಿನ ಬಗ್ಗೆ ತೀವ್ರ ಟೀಕಾ ಪ್ರಹಾರ ಮಾಡಿದ ಈ ವ್ಯಕ್ತಿ ಯಾರೋ ಬಿಜೆಪಿ ಒಲವುಳ್ಳ ಇತಿಹಾಸಕಾರನಲ್ಲ! ಈ ಟೀಕೆಗೆ ವೇದಿಕೆಯಾಗಿದ್ದು ಯಾವುದೋ ರಾಜಕೀಯ ಸಮಾವೇಶವೂ ಅಲ್ಲ!
ಕೇರಳದ ಕೋಝಿಕ್ಕೋಡ್ನಲ್ಲಿ ಕೇರಳ ಲಿಟ್ರೇಚರ್ ಫೆಸ್ಟಿವಲ್(ಕೆಎಲ್ಎಫ್) ನಡೆಯುತ್ತಿದ್ದು, ಎರಡನೇ ದಿನವಾದ ಶುಕ್ರವಾರ ಇಂಥದ್ದೊಂದು ಟೀಕಾ ಪ್ರಹಾರಕ್ಕೆ ವೇದಿಕೆಯಾಯಿತು ಅದು. ಈ ರೀತಿ ಟೀಕಾ ಪ್ರಹಾರ ನಡೆಸಿದ್ದು ಬೇರಾರೂ ಅಲ್ಲ, ಬಿಜೆಪಿ, ಬಲಪಂಥೀಯರ ಕಡು ಟೀಕಾಕಾರರಾದ ಇತಿಹಾಸಕಾರ ರಾಮಚಂದ್ರ ಗುಹಾ!
ರಾಹುಲ್ ಗಾಂಧಿ ಅವರಿಂದ ವೈಯಕ್ತಿಕವಾಗಿ ನನಗೆ ಏನೂ ಆಗಬೇಕಾದ್ದಿಲ್ಲ. ನಾನು ಅವರ ವಿರೋಧಿಯೂ ಅಲ್ಲ. ಆತ ಬಹಳ ಡೀಸೆಂಟ್ ಫೆಲೋ, ಉತ್ತಮ ನಡವಳಿಕೆ ಹೊಂದಿದಾತ. ಆದಾಗ್ಯೂ, 2024ರಲ್ಲಿ ನೀವು ಮಲಯಾಳಿಗಳು ಮತ್ತೊಮ್ಮೆ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸುವ ತಪ್ಪು ಮಾಡಬೇಡಿ. ಹಾಗೆ ಮಾಡಿದರೆ, ನರೇಂದ್ರ ಮೋದಿಯವರಿಗೆ ಅಡ್ವಾಂಟೇಜ್ ಸಿಕ್ಕಿಬಿಡುತ್ತದೆ ಎಂದು ಎಚ್ಚರಿಸಿದರು.
ನರೇಂದ್ರ ಮೋದಿಯವರ ಗ್ರೇಟೆಸ್ಟ್ ಅಡ್ವಾಂಟೇಜ್ ಏನು ಗೊತ್ತಾ? ಅವರು ರಾಹುಲ್ ಗಾಂಧಿ ಅಲ್ಲ. ಮೋದಿ ಸೆಲ್ಫ್ ಮೇಡ್ ಲೀಡರ್. 15 ವರ್ಷಗಳಿಂದ ರಾಜ್ಯವನ್ನಾಳಿದ ಅನುಭವವಿದೆ. ಪರಿಶ್ರಮಿಯಾಗಿರುವ ಅವರು ಎಂದಿಗೂ ಯುರೋಪ್ನಲ್ಲಿ ರಜಾಕಾಲಾ ಕಳೆಯಲು ಹೋಗಿಲ್ಲ. ನನ್ನನ್ನು ನಂಬಿ, ನಾನಿದನ್ನು ಜೋಕ್ಗಾಗಿ ಹೇಳುತ್ತಿಲ್ಲ. ಬಹಳ ಗಂಭೀರವಾಗಿ ವಿಷಯ ಪ್ರಸ್ತಾಪ ಮಾಡುತ್ತಿದ್ದೇನೆ. ಆದಾಗ್ಯೂ, ಒಂದೊಮ್ಮೆ ರಾಹುಲ್ ಗಾಂಧಿ ಬಹಳ ಬಹಳ ಪರಿಶ್ರಮಿಯಾಗಿ, ಯುರೋಪ್ಗೆ ರಜಾಕಾಲದ ಪ್ರವಾಸ ತೆರಳದಿದ್ದರೂ ಒಂದು ಕೊರತೆ ಅವರನ್ನು ಬಹುವಾಗಿ ಕಾಡುತ್ತದೆ. ಅದು ಕುಟುಂಬ ರಾಜಕಾರಣದ್ದು. ಕಾಂಗ್ರೆಸ್ ಪಕ್ಷಕ್ಕೆ 5ನೇ ತಲೆಮಾರಿನ ನಾಯಕ ಆತ. ಸೆಲ್ಫ್ ಮೇಡ್ ಲೀಡರ್ ಎಂದು ಗುರುತಿಸಿಕೊಳ್ಳಲಾರ ಎಂದು ವಿವರಿಸಿದರು ರಾಮಚಂದ್ರ ಗುಹಾ!. (ಏಜೆನ್ಸೀಸ್)