ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಸನಿಹದ ಬಂಬ್ರಾಣ ಪೊಯ್ಯೆವಳಪ್ಪು ನಿವಾಸಿ ಕಿರಣ್ರಾಜ್ ಶೆಟ್ಟಿ(26) ಎಂಬಾತನಿಗೆ ಕಾಸರಗೋಡು ಕ್ಷಿಪ್ರ ನ್ಯಾಯಾಲಯದ ನ್ಯಾಯಾಧೀಶ ರಾಮು ರಮೇಶ್ಚಂದ್ರಬಾನು ಜೀವಾವಧಿ ಶಿಕ್ಷೆ ಜತೆಗೆ ನಾಲ್ಕು ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ 16 ತಿಂಗಳು ಹೆಚ್ಚುವರಿ ಜೈಲು ಅನುಭವಿಸಬೇಕು ಎಂದು ತೀರ್ಪಿತ್ತಿದ್ದಾರೆ. 2018 ಅಕ್ಟೋಬರ್ 8ರಂದು ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 13 ವರ್ಷ ಪ್ರಾಯದ ಪರಿಶಿಷ್ಟ ಜಾತಿಯ ಬಾಲಕಿಯನ್ನು ಜನವಾಸವಿಲ್ಲದ ಮನೆಯೊಂದಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ದೂರು ಹಿಂತೆಗೆದುಕೊಳ್ಳುವಂತೆ ಬಾಲಕಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಆರೋಪಿಯ ಸಹೋದರನ ವಿರುದ್ಧವೂ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.