ನರೇಂದ್ರ ಎಸ್.ಮರಸಣಿಗೆ

ಹೆಬ್ರಿ ಹಾಗೂ ಸಿದ್ದಾಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕಂಚರಕಾಳು ಎಂಬಲ್ಲಿ ನಿರ್ಮಿಸಲಾಗಿದ್ದ ಸಂಪರ್ಕ ಸೇತುವೆ ಕಳೆದ ವರ್ಷದ ಮಳೆಗಾಲದಲ್ಲಿ ಕುಸಿದಿತ್ತು. ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದ ಸೇತುವೆ ಈ ವರ್ಷದ ಮಳೆಗಾಲದಲ್ಲಿ ಸಂಪೂರ್ಣ ಕೊಚ್ಚಿ ಹೋಗುವ ಭೀತಿ ಎದುರಾಗಿದೆ.
ನಿರಂತರವಾಗಿ ಭಾರಿ ವಾಹನ ಈ ರಸ್ತೆಯಲ್ಲಿ ಓಡಾಡುವುದರಿಂದ ಸೇತುವೆ ಕುಸಿದರೆ ಬಹಳಷ್ಟು ಜನರಿಗೆ ಸಮಸ್ಯೆ ಉಂಟಾಗುತ್ತದೆ. ಕಾರ್ಮಿಕ ವರ್ಗದ ಜನರು ಹೆಬ್ರಿಯಲ್ಲಿ ಕೆಲಸ ಅವಲಂಬಿಸಿರುವುದರಿಂದ ದೊಡ್ಡ ಹೊಡೆತ ನೀಡಬಹುದು. ಕಳೆದ ಮಳೆಗಾಲದಲ್ಲಿ ಸೇತುವೆ ಕುಸಿದಾಗ ತಾಲೂಕುಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹೋದವರು ಮತ್ತೆ ಈ ಕಡೆ ಬಂದಿಲ್ಲ.
ಸಣ್ಣ ರಸ್ತೆ
ಸದ್ಯಕ್ಕೆ ತಾತ್ಕಾಲಿಕವಾಗಿ ಸೇತುವೆ ರಿಪೇರಿ ಮಾಡಿದ್ದರಿಂದ ರಸ್ತೆ ಬಹಳ ಕಿರಿದಾಗಿದೆ. ಕೇವಲ ಒಂದು ವಾಹನ ಹೋಗುವಷ್ಟು ದಾರಿ ಇದೆ. ದೊಡ್ಡ ವಾಹನ ಬಂದಾಗ ಸೈಡ್ ಕೊಡಲು ಜಾಗವಿಲ್ಲ. ಎರಡು ಬದಿಯಲ್ಲಿ ಪಾತಾಳವಿದೆ. ಇದು ಸುಗಮ ಸಂಚಾರಕ್ಕೆ ತೊಡಕಾಗುತ್ತದೆ.
ಬೇಜವಾಬ್ದಾರಿಗೆ ಯಾರು ಹೊಣೆ?
ಸೇತುವೆ ಕುಸಿದು ವರ್ಷ ಕಳೆದಿದೆ. ಸಂಬಂಧಪಟ್ಟವರು ಅನುದಾನ ಬಿಡುಗಡೆ ಆಗಿದೆ ಎನ್ನುತ್ತಾರೆ. ಈ ವರ್ಷಕ್ಕೆ ಅತಿ ಅಗತ್ಯವಾಗಿ ಸೇತುವೆ ನಿರ್ಮಾಣ ಆಗಬೇಕೆಂದು ಗೊತ್ತಿದ್ದರೂ ಸಂಬಂಧಪಟ್ಟವರು ಕ್ರಮ ವಹಿಸದೆ ಬೇಜವಾಬ್ದಾರಿ ತೋರಿಸಿದ್ದಾರೆ. ಒಂದು ವೇಳೆ ಸೇತುವೆ ನಿರ್ಮಾಣ ಕೆಲಸ ಆರಂಭ ಮಾಡಿದರೂ ಮಳೆಗಾಲ ಆರಂಭವಾಗುವಷ್ಟರಲ್ಲಿ ಮುಗಿಯುವುದು ಅನುಮಾನ.
ಪೈಪ್ಲೈನ್ಗೂ ಹಾನಿ!
ವಾರಾಹಿ ನೀರಾವರಿ ಯೋಜನೆಯವರು ಪೈಪ್ಲೈನ್ ಕಾಮಗಾರಿ ಮಾಡಿದ್ದಾರೆ. ಸೇತುವೆ ಕುಸಿಯುವ ಭೀತಿ ಇದ್ದರು ಪಕ್ಕದಲ್ಲಿ ಪೈಪ್ಲೈನ್ ಅಳವಡಿಸಿ ಬೇಜವಾಬ್ದಾರಿತನ ತೋರಿದ್ದಾರೆ. ಪೈಪ್ಲೈನ್ಗೂ ಹಾನಿಯಾಗುವ ಸಂಭವ ಹೆಚ್ಚಾಗಿದೆ.
ಶಿಥಿಲಗೊಂಡ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಯಾಗಿದೆ. ಅರಣ್ಯ ಇಲಾಖೆಯ ಕೆಲವು ತಾಂತ್ರಿಕ ತೊಡಕುಗಳು ಸದ್ಯಕ್ಕೆ ಅಡ್ಡಿಯಾಗಿದೆ. ಶೀಘ್ರದಲ್ಲಿ ಸೇತುವೆ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ.
-ತ್ರಿನೇಶ್ವರ, ಎಇಇ, ಲೋಕೋಪಯೋಗಿ ಇಲಾಖೆ ಕಾರ್ಕಳನಾವು ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತೇವೆ. ವರ್ಷ ಕಳೆದರೂ ಸೇತುವೆ ನಿರ್ಮಾಣಕ್ಕೆ ಸಮರ್ಪಕ ಯೋಜನೆ ರೂಪಿಸದೆ ಇರುವುದು ಇಲಾಖೆ ಬೇಜವಾಬ್ದಾರಿತನ. ಮಳೆಗಾಲದ ಆರಂಭಕ್ಕೆ ಕೆಲವು ದಿನ ಇರುವುದರಿಂದ, ದೊಡ್ಡ ಮಟ್ಟದ ಸೇತುವೆ ನಿರ್ಮಾಣವಾಗುವುದು ಅಷ್ಟರೊಳಗೆ ಸಾಧ್ಯವಿಲ್ಲ. ನಾವು ಇದೇ ರಸ್ತೆ ಅವಲಂಬಿಸಿದ್ದು, ಏನಾದರೂ ಸಮಸ್ಯೆ ಉಂಟಾದರೆ, ಬಹಳಷ್ಟು ದೂರ ಕ್ರಮಿಸಿ ಸುತ್ತು ಬಳಸಿ ಹೋಗಬೇಕು.
-ಹೆಸರು ಹೇಳಲು ಇಚ್ಛಿಸದ ವಾಹನ ಸವಾರ