ವಿಜಯಪುರ: ಮಹಾನ್ ಮಾನವತಾವಾದಿ, ವಿಶ್ವ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹಲಗೆ ಮೇಳದೊಂದಿಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಜಿಲ್ಲಾಡಳಿತ ಕಚೇರಿ ತಲುಪಿ ಕೆಲ ಕಾಲ ಧರಣಿ ನಡೆಸಿದರು. ಕೇಂದ್ರ ಸಚಿವ ಅಮಿತ್ ಷಾ ವಿರುದ್ಧ ಧಿಕ್ಕಾರ ಮೊಳಗಿಸಿದರು. ಜೊತೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕುರಿತು ಅವಾಚ್ಯವಾಗಿ ನಿಂದಿಸಿರುವ ಸಿ.ಟಿ. ರವಿ ವಿರುದ್ಧವೂ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ಮನವಿ ರವಾನಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ಒಂದು ಜಾತಿ ಜನಾಂಗ ಮತ್ತು ಧರ್ಮಕ್ಕೆ ಸೀಮಿತರಾದವರಲ್ಲ. ಅವರು ವಿಶ್ವನಾಯಕ. ದೇಶದ ಪ್ರತಿಯೊಬ್ಬರ ಪಾಲಿಗೆ ದೇವರ ಸಮಾನ. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ನಾವು ಪ್ರತಿನಿತ್ಯ ಎಷ್ಟೇ ಜಪ ಮಾಡಿದರೂ ಸಾಲದು ಎಂದರು.
ಕಾಂಗ್ರೆಸ್ ಮುಖಂಡ ಅಬ್ದುಲ್ಹಮೀದ್ ಮುಶ್ರೀಫ್ ಮಾತನಾಡಿ, ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನ ನೀಡಿದ ಮಹಾನ್ ತಜ್ಞರು. ಪ್ರತಿಯೊಬ್ಬರಿಗೂ ಸಮಾನ ಹಕ್ಕು ದಯಪಾಲಿಸಿದರು. ಅಂಥವರ ಬಗ್ಗೆ ಕೇವಲವಾಗಿ ಮಾತನಾಡುವ ಬಿಜೆಪಿ ನಾಯಕರನ್ನು ಜನತೆ ತಿರಸ್ಕರಿಸಬೇಕು. ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಕೂಡಲೇ ಸಂಪುಟದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಮಾತನಾಡಿ, ಅಸಮಾನತೆಯನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಬಾಬಾಸಾಹೇಬ ಅಂಬೇಡ್ಕರ್ ಅವರು. ಈ ದೇಶದಲ್ಲಿದ್ದ ಶ್ರೇಣೀಕೃತ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಾನ ಹಕ್ಕುಗಳನ್ನು ನೀಡಿದರು. ಮಹಿಳೆಯರನ್ನು ಮುಖ್ಯ ವಾಹಿನಿಗೆ ತಂದವರು ಅಂಬೇಡ್ಕರ್. ಅಂಥ ಮಹಾನ್ ನಾಯಕನ ಬಗ್ಗೆ ಮಾತನಾಡುವ ಮೂಲಕ ಅಮಿತ್ ಷಾ ಈ ದೇಶಕ್ಕೆ ಮತ್ತು ಈ ದೇಶದ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಕೂಡಲೇ ಕ್ಷಮೆ ಯಾಚಿಸಬೇಕೆಂದರು.
ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಾಹಪೂರ, ಡಾ. ಬಾಬುರಾಜೇಂದ್ರ ನಾಯಿಕ, ಬಿ.ಎಸ್. ಗಸ್ತಿ, ಸುಭಾಷ ಕಾಲೇಬಾಗ, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಗಂಗಾಧರ ಸಂಬಣ್ಣಿ, ಜಮೀರ ಬಕ್ಷಿ, ಜಾಕೀರಹುಸೇನ ಮುಲ್ಲಾ, ಎಂ.ಎಂ. ಮುಲ್ಲಾ, ದೇಸು ಚವಾಣ್, ವಸಂತ ಹೊನಮೋಡೆ, ಹಾಜಿಲಾಲ ದಳವಾಯಿ, ರಾಘವೇಂದ್ರ ವಡವಡಗಿ, ಅಯಾಜ ರೋಜೆವಾಲೆ, ಇಲಿಯಾಸ ಸಿದ್ದೀಕಿ, ಜಬ್ಬಾರ ಮುಲ್ಲಾ, ಆನಂದ ಜಾಧವ, ಅಮಿತ್ ಚವಾಣ್, ರಾಜೇಶ್ವರಿ ಚೋಳಕೆ, ಪ್ರಿಯಾಂಕ ತೊರವಿ, ಲಲಿತಾ ದೊಡಮನಿ, ಆಸ್ಮಾ ಕಾಲೇಬಾಗ, ಜಯಶ್ರೀ ಹದನೂರ, ಸುಂದರಪಾಲ ರಾಠೋಡ, ಕಾಶಿಬಾಯಿ ಹಡಪದ, ಸವಿತಾ ಕೋಳಿ, ಪರಶುರಾಮ ಹೊಸಮನಿ, ತಾಜುದ್ದೀನ ಖಲೀಫಾ, ಗುಲಾಬ ಚವಾಣ್, ಮೈನುದ್ದೀನ ಕಲಾದಗಿ, ಲಕ್ಷ್ಮಣ ಇಲಕಲ್, ಸಾಯಿಕುಮಾರ ಬಿಸನಾಳ, ಮಲಿಯಪ್ಪ ಹಲಗಲಿ, ವಿಠಲ ಸಂಧಿಮನಿ, ಸಾಗರ ಪೂಜಾರಿ, ಸಿದ್ದು ತೋಟದ, ಲಕ್ಷ್ಮಣ ಚಲವಾದಿ, ಬಸವರಾಜ ಕಾನ್ನಾಳ, ಗಣೇಶ ಚವಾಣ್, ಸಂಜೀವ ಚವಾಣ್, ಕೃಷ್ಣಾ ಲಮಾಣಿ, ಲಕ್ಷ್ಮಣ ಛಲವಾದಿ, ದಿಲೀಫ ಪ್ರಭಾಕರ ಮತ್ತಿತರರಿದ್ದರು.