More

    ವಿದ್ವಾಂಸರನ್ನೇ ದಿಗ್ಭ್ರಮೆಗೊಳಿಸಿದ್ದ 2500 ವರ್ಷ ಹಳೆಯ ಸಂಸ್ಕೃತ ವ್ಯಾಕರಣ ಸಮಸ್ಯೆ ಬಗೆಹರಿಸಿದ ಭಾರತೀಯ ವಿದ್ಯಾರ್ಥಿ!

    ನ್ಯೂಯಾರ್ಕ್​: ಕ್ರಿ.ಪೂ 5ನೇ ಶತಮಾನದಲ್ಲಿ ವಿದ್ವಾಂಸರನ್ನೇ ದಿಗ್ಭ್ರಮೆಗೊಳಿಸಿದ್ದ ಸಂಸ್ಕೃತದ ವ್ಯಾಕರಣ ಸಮಸ್ಯೆಯನ್ನು ಇಂಗ್ಲೆಂಡ್​ನ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದಲ್ಲಿ ಪಿಎಚ್​ಡಿ ಅಧ್ಯಯನ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿ ಬಗೆಹರಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

    27 ವರ್ಷದ ರಿಷಿ ಅತುಲ್​ ರಾಜ್‌ಪೋಪಟ್ ಎಂಬುವರು ಎರಡೂವರೆ ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ಪ್ರಾಚೀನ ಸಂಸ್ಕೃತದ ಪಾರಂಗತ ಪಾಣಿನಿ ಅವರು ಸಂಸ್ಕೃತದಲ್ಲಿ ಬರೆದಿದ್ದ ಬರವಣಿಗೆಯ ಗೂಢಾರ್ಥವನ್ನು ಬಿಡಿಸುವ ಮೂಲಕ ತಜ್ಞರ ಗಮನವನ್ನು ಸೆಳೆದಿರುವುದಾಗಿ ಬಿಬಿಸಿ ಮಾಧ್ಯಮ ವರದಿ ಮಾಡಿದೆ. ಅಂದಹಾಗೆ ರಾಜ್‌ಪೋಪಟ್ ಅವರು ಕೇಂಬ್ರಿಡ್ಜ್‌ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಏಷ್ಯನ್ ಮತ್ತು ಮಧ್ಯಪ್ರಾಚ್ಯ ಅಧ್ಯಯನಗಳ ವಿಭಾಗದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದಾರೆ.

    ಪಾಣಿನಿಯು ಒಂದು “ಮೆಟಾರೂಲ್” ಅನ್ನು ಕಲಿಸಿದ್ದು, “ಸಮಾನ ಸಾಮರ್ಥ್ಯದ ಎರಡು ನಿಯಮಗಳ ನಡುವಿನ ಸಂಘರ್ಷದ ಸಂದರ್ಭದಲ್ಲಿ, ವ್ಯಾಕರಣದ ಸರಣಿ ಕ್ರಮದಲ್ಲಿ ನಂತರ ಬರುವ ನಿಯಮವು ಗೆಲ್ಲುತ್ತದೆ” ಎಂದು ಸಾಂಪ್ರದಾಯಿಕವಾಗಿ ವಿದ್ವಾಂಸರು ಮೆಟಾರೂಲ್​ ಅನ್ನು ಅರ್ಥೈಸಿದ್ದರು. ಆದಾಗ್ಯೂ, ಇದು ಸಾಮಾನ್ಯವಾಗಿ ವ್ಯಾಕರಣದ ತಪ್ಪು ಫಲಿತಾಂಶಗಳಿಗೆ ಕಾರಣವಾಯಿತು.

    ಮೆಟಾರೂಲ್​ನ ಈ ಸಾಂಪ್ರದಾಯಿಕ ವ್ಯಾಖ್ಯಾನವನ್ನು ರಾಜ್‌ಪೋಪಟ್ ತಿರಸ್ಕರಿಸಿದ್ದು, ಮೆಟಾರೂಲ್​ ಎಂದರೆ, ಪದದ ಎಡ ಮತ್ತು ಬಲ ಬದಿಗಳಿಗೆ ಅನುಕ್ರಮವಾಗಿ ಅನ್ವಯವಾಗುವ ನಿಯಮಗಳ ನಡುವೆ, ಬಲಭಾಗಕ್ಕೆ ಅನ್ವಯವಾಗುವ ನಿಯಮವನ್ನು ನಾವು ಆರಿಸಬೇಕೆಂದು ಪಾಣಿನಿ ಬಯಸಿದ್ದರು. ಪಾಣಿನಿ ಅವರ “ಭಾಷಾ ಯಂತ್ರ”ವು ವ್ಯಾಕರಣದ ಸರಿಯಾದ ಪದಗಳನ್ನು ಯಾವುದೇ ವಿನಾಯಿತಿಗಳಿಲ್ಲದೆ ಉತ್ಪಾದಿಸುತ್ತದೆ ಎಂದು ರಾಜ್​ಪೋಪಟ್​ ತೀರ್ಮಾನಿಸಿದರು.

    ಈ ಬಗ್ಗೆ ಇಂಡಿಪೆಂಡೆಂಟ್​ ಮಾಧ್ಯಮದ ಜೊತೆ ಮಾತನಾಡಿದ ರಾಜ್‌ಪೋಪಟ್, ನಾನು ಕೇಂಬ್ರಿಡ್ಜ್‌ನಲ್ಲಿ ಯುರೇಕಾ ಕ್ಷಣ (ಹಠಾತ್ ವಿಜಯೋತ್ಸಾಹದ ಆವಿಷ್ಕಾರ, ಸ್ಫೂರ್ತಿ ಅಥವಾ ಒಳನೋಟದ ಕ್ಷಣ) ವನ್ನು ಹೊಂದಿದ್ದೇನೆ. ಒಂಬತ್ತು ತಿಂಗಳ ಈ ಸಮಸ್ಯೆಯನ್ನು ಭೇದಿಸಲು ಸಾಕಷ್ಟು ಪ್ರಯತ್ನಿಸಿದ ಬಳಿಕ ಅದನ್ನು ಬಿಟ್ಟು ಬಿಡಲು ಬಹುತೇಕ ಸಿದ್ಧನಾಗಿದ್ದೆ, ತುಂಬಾ ಗೊಂದಲಕ್ಕೊಳಗಾಗಿದ್ದೆ. ಹೀಗಾಗಿ ನಾನು ಒಂದು ತಿಂಗಳು ಪುಸ್ತಕಗಳನ್ನು ಮುಚ್ಚಿ ಬೇಸಿಗೆ, ಈಜು, ಸೈಕ್ಲಿಂಗ್, ಅಡುಗೆ, ಪ್ರಾರ್ಥನೆ ಮತ್ತು ಧ್ಯಾನ ಮಾಡುತ್ತಾ ಆನಂದದ ಸಮಯ ಕಳೆಯುತ್ತಿದೆ. ನಂತರ ನಿರಾಶೆಯಿಂದ ನಾನು ಕೆಲಸಕ್ಕೆ ಮರಳಿದೆ. ನಂತರದ ಕೆಲವೇ ಕ್ಷಣಗಳಲ್ಲಿ ನಾನು ಪುಟಗಳನ್ನು ತಿರುಗಿಸಿದಂತೆ ಈ ಮೆಟಾರೂಲ್​ ಮಾದರಿಗಳು ಕಾಣಿಸಲು ಪ್ರಾರಂಭಿಸಿದವು ಮತ್ತು ಕೊಂಚ ಅರ್ಥವಾಗಲು ಆರಂಭವಾಯಿತು. ಇದಾದ ಬಳಿಕವೂ ಸಮಸ್ಯೆ ಪರಿಹರಿಸಲು ಎರಡು ವರ್ಷಗಳು ಬೇಕಾಯಿತು ಎಂದು ರಾಜ್‌ಪೋಪಟ್ ಹೇಳಿದ್ದಾರೆ.

    ಈ ಸುದ್ದಿಯಿಂದ ಬಹಳ ಸಂತಸಗೊಂಡಿರುವ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದ ಪ್ರೊ.ವರ್ಗಿಯಾನಿ, “ನನ್ನ ವಿದ್ಯಾರ್ಥಿ ರಿಷಿ ಸಮಸ್ಯೆಯನ್ನು ಭೇದಿಸಿದ್ದಾರೆ. ಇದನ್ನು ಭೇದಿಸಲು ಶತಮಾನಗಳಿಂದ ವಿದ್ವಾಂಸರು ಕೂಡ ಗೊಂದಲಕ್ಕೀಡಾಗಿದ್ದರು. ಈ ಸಮಸ್ಯೆಗೆ ರಿಷಿ ಅವರು ಅಸಾಧಾರಣವಾದ ಹಾಗೂ ಸೊಗಸಾದ ಪರಿಹಾರವನ್ನು ಕಂಡುಕೊಂಡಿದ್ದಾರೆ. ಈ ಆವಿಷ್ಕಾರವು ಭಾಷೆಯಲ್ಲಿ ಆಸಕ್ತಿ ಹೊಂದಿರುವ ಸಮಯದಲ್ಲಿ ಸಂಸ್ಕೃತದ ಅಧ್ಯಯನವನ್ನು ಇನ್ನಷ್ಟು ಕ್ರಾಂತಿಗೊಳಿಸುತ್ತದೆ ಎಂದು ಹೇಳಿದ್ದಾರೆ.

    ಪ್ರಸ್ತುತ ಭಾರತದಲ್ಲಿ ಒಂದು ಶತಕೋಟಿಗೂ ಹೆಚ್ಚು ಜನಸಂಖ್ಯೆಯಲ್ಲಿ ಅಂದಾಜು 25,000 ಜನರು ಮಾತ್ರ ಸಂಸ್ಕೃತವನ್ನು ಮಾತನಾಡುತ್ತಾರೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಹೇಳಿದೆ. (ಏಜೆನ್ಸೀಸ್​)

    ದತ್ತಪೀಠದ ದಾರಿಯಲ್ಲಿ ಮೊಳೆ ಹಾಕಿದ್ದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ಹಲವರು ಭಾಗಿಯಾಗಿರೋ ಶಂಕೆ

    ಹೆಲಿಕಾಪ್ಟರ್​ಗೆ ವಾಹನ ಪೂಜೆ ನೆರವೇರಿಸಿದ ಉದ್ಯಮಿ! ವೈರಲ್​ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು

    ದೇವರಿಗೆ ನೈವೇದ್ಯ ಯಾಕೆ ಇಡಬೇಕು? ದೇವರೇನು ಆ ನೈವೇದ್ಯವನ್ನು ತಿನ್ನುತ್ತಾನೆಯೇ ಎಂದು ಕೇಳುವವರಿಗೆ ಇಲ್ಲಿದೆ ಉತ್ತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts