ನವದೆಹಲಿ: ಪತಂಜಲಿ ಸಂಶೋಧನಾ ಕೇಂದ್ರ ಬಿಡುಗಡೆ ಮಾಡಿರುವ ಕರೊನಾ ನಿವಾರಕ ಔಷಧದ ಬಗ್ಗೆ ಪ್ರತಿಕ್ರಿಯಿಸಲು ಆಯುಷ್ ಇಲಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗಳು ಹಿಂದೇಟು ಹಾಕಿವೆ.
ಪತಂಜಲಿ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿರುವ ಕರೊನಿಲ್ ಮಾತ್ರೆ ಕೋವಿಡ್-19 ಕಾಯಿಲೆಯನ್ನು ಶೇ.100 ಗುಣಪಡಿಸಲಿದೆ ಎಂದು ಯೋಗಗುರು ಬಾಬಾ ರಾಮ್ದೇವ್ ಹೇಳಿದ್ದರು.
ಇದನ್ನೂ ಓದಿ; 20 ವರ್ಷ ಜೀವಂತವಾಗಿರುತ್ತೆ ಕರೊನಾ; ಹಸಿ ಮಾಂಸ, ಮೀನು ಮುಟ್ಟಬೇಡಿ; ಚೀನಾ ತಜ್ಞರ ಎಚ್ಚರಿಕೆ
ಕರೊನಿಲ್ ಔಷಧವನ್ನು ರೋಗಿಗಳ ಮೇಲೆ ಪ್ರಯೋಗಿಸಲಾಗಿದ್ದು, ಪರಿಣಾಮಕಾರಿ ಎನಿಸಿದೆ ಎಂದು ಸಂಸ್ಥೆಯ ಕೇಂದ್ರ ಕಚೇರಿ ಹರಿದ್ವಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಶೇ.69 ರೋಗಿಗಳು ಮುರು ದಿನದಲ್ಲಿ ಗುಣ ಹೊಂದಿದರೆ, ಏಳು ದಿನಗಳಲ್ಲಿ ಎಲ್ಲ ರೋಗಿಗಳು ಆರೋಗ್ಯವಂತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು. ಜೈಪುರ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಹಯೋಗದಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು ಎಂದು ತಿಳಿಸಿದ್ದರು.
ಆದರೆ, ಕೋವಿಡ್ ಚಿಕಿತ್ಸೆ, ಲಸಿಕೆ, ಔಷಧ ಮತ್ತಿತರ ಆರೋಗ್ಯ ವ್ಯವಸ್ಥೆ ಕುರಿತ ಎಲ್ಲ ನಿರ್ಣಯಗಳನ್ನು ಕೈಗೊಳ್ಳುವ ಉನ್ನತ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಕರೊನಿಲ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಆಯುರ್ವೇದ ಔಷಧಗಳ ಬಗ್ಗೆ ನಾವು ಪರಿಶೀಲನೆ ನಡೆಸುವುದಿಲ್ಲ. ಈ ಕಾರ್ಯವನ್ನು ಆಯುಷ್ ಇಲಾಖೆ ನಡೆಸುತ್ತದೆ ಎಂದು ಹೇಳಿದೆ.
ಇದನ್ನೂ ಓದಿ; ಕರೊನಾ ಸಂಕಷ್ಟ ಮುಗಿದರೂ, ಮುಂದೈತೆ ಮಾರಿ ಹಬ್ಬ…!
ಆಯುಷ್ ಇಲಾಖೆಯನ್ನು ಪ್ರಶ್ನಿಸಿದಾಗ ಮೊದಲು ಐಸಿಎಂಆರ್ನತ್ತ ಬೊಟ್ಟು ಮಾಡಿತ್ತು. ಆದರೆ, ಐಸಿಎಂಆರ್ ಪ್ರತಿಕ್ರಿಯೆ ತಿಳಿದ ಬಳಿಕ, ಆಯುರ್ವೇದ ಔಷಧಗಳ ಉತ್ಪಾದನೆ, ಔಷಧ ಸಂಸ್ಥೆಗೆ ಪರವಾನಗಿ ಮೊದಲಾವುಗಳನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳುತ್ತದೆ ಎಂದು ನುಣುಚಿಕೊಂಡಿದೆ. ಪತಂಜಲಿ ಸಂಸ್ಥೆ ಹೇಳುವ ಪ್ರಕಾರ ಕರೊನಿಲ್ ಔಷಧ ಪರವಾನಗಿ ಪಡೆದುಕೊಂಡಿದೆ.
ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ