More

    ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಆದರೆ…; ಬಾಬಾ ರಾಮ್​ದೇವ್​ಗೆ ಸುಪ್ರೀಂ ಕೋರ್ಟ್​ ಹೀಗಂದಿದ್ಯಾಕೆ

    ನವದೆಹಲಿ: ಕಂಪನಿಯ ದಾರಿತಪ್ಪಿಸುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಯೋಗಗುರು, ಪತಂಜಲಿ ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್​ಗೆ ಮಂಗಳವಾರ ಕ್ಷಮೆಯಾಚಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.

    ವಿಚಾರಣೆಯ ವೇಳೆ ಪತಂಜಲಿ ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸಿದ್ಧ ಎಂದು ಹೇಳಿದ್ದಾರೆ.

    ಅರ್ಜಿ ವಿಚಾರಣೆ ನಡೆಸದ  ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠವು ನೀವು ಅಷ್ಟೊಂದು ಮುಗ್ಧರೇನಲ್ಲ ಎಂದು ಬಾಬಾ ರಾಮ್​ದೇವ್​ ಹಾಗೂ ಆಚಾರ್ಯ ಬಾಲಕೃಷ್ಣ ಅವರಿಗೆ ಚಾಟಿ ಬೀಸಿದೆ. ಇದೇ ವೇಳೆ ಮಾತನಾಡಿದ ಬಾಬಾ ರಾಮ್​ದೇವ್​ ನಮಗೆ ಅಂತಹ ಉದ್ದೇಶ ಇರಲಿಲ್ಲ. ನಾವು 5,000ಕ್ಕೂ ಹೆಚ್ಚು ಪ್ರಕ್ರಿಯೆಗಳನ್ನು ಸಂಶೋಧಿಸಿದ್ದೇವೆ. ನಾವು ಮಾಡಿದ ಯಾವುದೇ ತಪ್ಪಿಗೆ ನಾನು ಬೇಷರತ್ ಕ್ಷಮೆಯಾಚಿಸುತ್ತೇನೆ ಎಂದು ಬಾಬಾ ರಾಮ್​ದೇವ್ ಹೇಳಿದ್ದಾರೆ.

    ಇದನ್ನೂ ಓದಿ: ಮುಂಬೈ ವಿರುದ್ಧದ ಪಂದ್ಯದಲ್ಲಿ ಟಾಸ್​ ಟ್ಯಾಂಪರಿಂಗ್; ಆರ್​ಸಿಬಿ ನಾಯಕನ ವಿವರಣೆ ವಿಡಿಯೋ ವೈರಲ್

    ನಿಮಗೆ ದೊಡ್ಡ ಘನತೆ ಇದೆ. ನೀವು ಯೋಗಕ್ಕಾಗಿ ಸಾಕಷ್ಟು ಕಾರ್ಯವನ್ನು ಮಾಡಿದ್ದೀರಿ ಮತ್ತು ಅದರ ಪ್ರಚಾರಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಪ್ರಾರಂಭಿಸಿದ್ದೀರಿ. ನ್ಯಾಯಾಲಯದ ಆದೇಶದ ಹೊರತಾಗಿಯೂ, ನೀವು ಜಾಹೀರಾತು ಪ್ರಕಟಿಸಿ ಆ ವಿಷಯಗಳನ್ನು ಹೇಳಿದ್ದೀರಿ. ಆಯುರ್ವೇದವು ಮಹರ್ಷಿ ಚರಕರ ಕಾಲದಿಂದಲೂ ಇದೆ, ನಿಮ್ಮ ಸ್ವಂತ ವಿಧಾನವನ್ನು ಪ್ರಚಾರ ಮಾಡಲು ನೀವು ಇತರ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಏಕೆ ಕಳಪೆಯಾಗಿ ಮಾತನಾಡಿದ್ದೀರಿ ಎಂದು ನ್ಯಾಯಪೀಠ ಪ್ರಶ್ನಿಸಿದೆ.

    ನೀವು ಬೇಜವಾಬ್ದಾರಿಯಿಂದ ವರ್ತಿಸಿದ್ದೀರಿ. ವಾಸಿಯಾಗದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಾಗಿ ಹೇಳಿಕೊಳ್ಳುವ ಔಷಧಗಳನ್ನು ಯಾರೂ ಸಿದ್ಧಪಡಿಸಿಲ್ಲ. ಇದನ್ನು ಯಾರೂ ಮಾಡಲು ಸಾಧ್ಯವಿಲ್ಲ, ಯಾರೂ ಮಾಡಿಲ್ಲ. ನಾವು ಇನ್ನೂ ನಿಮ್ಮನ್ನು ಕ್ಷಮಿಸಿಲ್ಲ. ಅದರ ಬಗ್ಗೆ ಆಲೋಚಿಸುತ್ತೇವೆ. ನಿಮ್ಮ ಈ ಹಿಂದಿನ ನಡೆಯನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳುತ್ತಿದ್ದೇವೆ. ಕೊನೆಯ ಆದೇಶವು ನಮ್ಮ ಗಮನದಲ್ಲಿದೆ. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಆದರೆ ಅಲೋಪತಿಯನ್ನು ಕೆಳಮಟ್ಟಕ್ಕಿಳಿಸಲು ಸಾಧ್ಯವಿಲ್ಲ ಎಂದು ಹೇಳಿ ವಿಚಾರಣೆಯನ್ನು ಏಪ್ರಿಲ್​ 23ಕ್ಕೆ ಮುಂದೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts