ನವದೆಹಲಿ: ಜಗತ್ತನ್ನು ಕಾಡುತ್ತಿರುವ ಕರೊನಾ ಸಂಕಷ್ಟ ಲಸಿಕೆ ಇಲ್ಲದೆಯೂ ಕೊನೆಯಾಗಲಿದೆ. ಇಂಥದ್ದೊಂದು ವಿಷಯವನ್ನು ಯಾರೋ ಜ್ಯೋತಿಷಿಗಳು ಹೇಳಿದ್ದಲ್ಲ, ಬದಲಿಗೆ ಇಟಲಿಯ ಖ್ಯಾತ ಹಾಗೂ ತಜ್ಞ ವೈದ್ಯರು ಇದನ್ನು ಕಂಡುಕೊಂಡಿದ್ದಾರೆ.
ಇದಕ್ಕೆ ಕಾರಣ, ಆರಂಭದಲ್ಲಿ ಕೆಣಕಿದ ಹುಲಿಯಂತಿದ್ದ ಕರೊನಾ ವೈರಸ್ ಈಗ ಕಾಡು ಬೆಕ್ಕಿನ ಸ್ಥಿತಿಗೆ ಬಂದಿದೆಯಂತೆ. ಹೀಗಾಗಿ ನಮಗೆ ಕರೊನಾ ವೈರಸ್ ನಿಗ್ರಹಕ್ಕೆ ಲಸಿಕೆಯ ಅಗತ್ಯ ಉಂಟಾಗದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ; ಕೆಮ್ಮುತ್ತಿದ್ದ…ಕೇಳಿದವರಿಗೆ ತಮಾಷೆಗೆ ಕರೊನಾ ಇದೆ ಎಂದ..!! ಇದನ್ನು ಕೇಳಿಸಿಕೊಂಡವರು ಮಾತ್ರ ಸುಮ್ಮನಾಗಲಿಲ್ಲ..
ಈವರೆಗೆ ಜಗತ್ತಿನಲ್ಲಿ 4.65 ಲಕ್ಷ ಜನರನ್ನು ಬಲಿ ಪಡೆದಿರುವ ವೈರಸ್ ಅಂತ್ಯಕಾಲ ಸಮೀಪಿಸಿದೆ ಎಂದೇ ಹೇಳಲಾಗಿದೆ. ವೈರಸ್ ತನ್ನಷ್ಟಕ್ಕೆ ನಿರ್ನಾಮವಾಗಲಿದೆ ಎಂದು ತಜ್ಞ ವೈದ್ಯ ಪ್ರೊ. ಮ್ಯಾಟ್ಯೋ ಬಸ್ಸೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಲಾಕ್ಡೌನ್ ಕಾರಣದಿಂದಾಗಿ ಜನರು ಪೂರ್ಣ ಪ್ರಮಾಣದ ಬದಲು ಕರೊನಾದ ಲಘು ಸೋಂಕಿಗೆ ಒಳಗಾಗುತ್ತಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ.
ಈ ಹಿಂದೆ ವಯಸ್ಸಾದವರು ಕರೊನಾಗೆ ಸುಲಭವಾಗಿ ಬಲಿಯಾಗುತ್ತಿದ್ದರು. ಈಗ ಆರಾಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ವಾರಗಳಿಗೆ ಹೋಲಿಸಿದಲ್ಲಿ ಕರೊನಾ ವೈರಸ್ ತೀವ್ರತೆ ಕಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಿಶಕ್ತವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ; ಕರೊನಾಗೆ ಸಜ್ಜಾಯ್ತು ದೇಶೀಯ ಔಷಧ; ಮುಂಬೈ ಕಂಪನಿಗೆ ಡಿಸಿಜಿಐ ಸಮ್ಮತಿ
ಈ ಹಿಂದೆ ಜಿನೊವಾದ ಸ್ಯಾನ್ ಮಾರ್ಟಿನೋ ಆಸ್ಪತ್ರೆಯ ಇಂಥದ್ದೇ ವಾದ ಮಂಡಿಸಿದ್ದಕ್ಕೆ ಟೀಕೆಗೆ ಒಳಗಾಗಿದ್ದರು. ಆದರೆ, ಇದಕ್ಕೆ ಈಗ ಮತ್ತಷ್ಟು ಬಲ ಬಂದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಕೊಲಂಬಿಯಾ ವಿವಿಯ ಡಾ. ಎಂಜೆಲಾ ರಾಮ್ಸುಸ್ಸೆನ್ ಹೇಳುವ ಪ್ರಕಾರ ರೊನಾ ವೈರಸ್ ಶಕ್ತಿಗುಂದುತ್ತಿದೆ ಎಂಬ ಬಗ್ಗೆ ಆಧಾರಗಳಿಲ್ಲ.
ಕೇವಲ ಗಂಟಲ ದ್ರವದ ಮಾದರಿ ಆಧರಿಸಿ ಇಂಥದ್ದೊಂದು ತರ್ಕಕ್ಕೆ ಬರುವುದು ಸಲ್ಲ, ಇದನ್ನು ಪರೀಕ್ಷೆಗೊಳಪಡಿಸಿ ಸತ್ಯ ಸಾಬೀತುಪಡಿಸಬೇಕು. ಸಾಕ್ಷ್ಯಾಧಾರಗಳು ಇರಬೇಕು ಎಂದು ಗ್ಲಾಸ್ಗೋ ವಿವಿಯ ಡಾ. ಆಸ್ಕರ್ ಮ್ಯಾಕ್ಲೀನ್ ಹೇಳುತ್ತಾರೆ.
ಇಟಲಿಯಲ್ಲಿ ಈವರೆಗೆ 34,610 ಜನರು ಕೋವಿಡ್ಗೆ ಬಲಿಯಾಗಿದ್ದಾರೆ. ಫೆ. 21ರಿಂದ ಈವರೆಗೆ 2,38 720 ಜನರು ಸೋಂಕಿಗೆ ಒಳಗಾಗಿದ್ದಾರೆ.